ನೃತ್ಯ ನಾಟಕಕ್ಕೆ ಜನ : ಗೋಷ್ಠಿ ಭಣಭಣ
ಆಧ್ಯಾತ್ಮಿಕ ಗೋಷ್ಠಿಗಂತೂ ಜನರೇ ಇರಲಿಲ್ಲ. ಒಂದು ಹಂತದಲ್ಲಿ ವೇದಿಕೆ ಮೇಲೆಯೇ ಹೆಚ್ಚು ಜನರಿದ್ದರು. ಈ ಸಂಗತಿ ಗಮನಿಸಿದ ನಿರ್ವಾಹಕರು ವೇದಿಕೆ ಮೇಲಿನ ಕುರ್ಚಿಗಳನ್ನೇ ತೆಗೆಸಿ ಪ್ರಸಂಗಾವಧಾನ ಮೆರೆದರು.
ಈ ಗೋಷ್ಠಿಯಲ್ಲಿ ಪ್ರಬಂಧಕಾರರೊಬ್ಬರಿಗೆ ಐದು ನಿಮಿಷಗಳ ಕಾಲ ಮಾತನಾಡಲು ಅವಕಾಶ ನೀಡಲಾಗಿತ್ತು. ಆದರೆ ಸಭಿಕರ ಸಾಲಿನಲ್ಲಿ ಬರೋಬ್ಬರಿ ನಾಲ್ಕು ಜನರಿರುವುದನ್ನು ಗಮನಿಸಿದ ಅವರು, ‘ ನನಗೆ ಐದು ನಿಮಿಷ ಕೊಡಲಾಗಿದೆ. ಆದರೆ ಒಂದು ಗಂಟೆ ಮಾತಾಡಿದರೂ ಯಾರು ಕೇಳುವವರಿಲ್ಲ ಹಾಗೂ ಕೇಳುವುದಿಲ್ಲ’ ಎಂದು ಹೇಳಿದ್ದು ಗೋಷ್ಠಿಗೆ ಬರೆದ ಷರಾದಂತಿತ್ತು.
ಇಂಥ ಸಮ್ಮೇಳನಗಳಲ್ಲಿ ಗಂಭೀರ ಚರ್ಚೆಯ ವಿಷಯಗಳ ಗೋಷ್ಠಿಯನ್ನು ಯಾಕಾದರೂ ನಿಶ್ಚಿತಗೊಳಿಸುತ್ತಾರೋ ಎಂದು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಪ್ರಬಂಧಕಾರರು ಮತ್ತು ಭಾಗವಹಿಸಿದ ಸಭಿಕರು ಹೇಳುತ್ತಿದ್ದುದು ಕೇಳಿ ಬಂತು.
ಕವಿಗೋಷ್ಠಿಯಲ್ಲಿ ಚೆನ್ನವೀರ ಕಣವಿ ಹಾಗೂ ಚಂದ್ರಶೇಖರ ಪಾಟೀಲರ ಹೊರತಾಗಿ ಮತ್ಯಾವ ಕವಿಗಳ ಕವಿತೆಗಳಿಗೂ ಮೆಚ್ಚುಗೆ ಸಿಗಲಿಲ್ಲ. ಬಹುತೇಕ ಕವಿಗಳು ಚುಟುಕು ಮತ್ತು ಹನಿಗವನಗಳನ್ನೇ ವಾಚಿಸಿದರು. ಬೇರೆ ಕವನಗಳಿಗೆ ಸಭಿಕರಿಂದ ಅಂಥ ಪ್ರತಿಕ್ರಿಯೆಯೂ ಸಿಗಲಿಲ್ಲ. ಇದನ್ನು ಗಮನಿಸಿದ ಕಣವಿ ಮತ್ತು ಚಂಪಾ ಸಹಾ ಹೆಚ್ಚಾಗಿ ಹನಿಗವನವನ್ನೇ ಓದಿದರು.
***
ಈ ಸಮ್ಮೇಳನದಲ್ಲಿ ಏಕಕಾಲಕ್ಕೆ ಏಳೆಂಟು ಕಾರ್ಯಕ್ರಮಗಳು ನಡೆಯುತ್ತಿದ್ದುದರಿಂದ ಪ್ರತಿನಿಧಿಗಳು ಕೆಲವು ಕಾರ್ಯಕ್ರಮಗಳನ್ನು ತಪ್ಪಿಸಿಕೊಂಡರು. ಇದರಿಂದ ಪ್ರಮುಖ ಗೋಷ್ಠಿಗಳಲ್ಲಿ ಭಾಗವಹಿಸಬೇಕಾದ ಪ್ರಬಂಧಕಾರರ ಗೈರು ಹಾಜರಿಯಿಂದ ಅಲ್ಲಲ್ಲಿ ಏರುಪೇರಾಯಿತು.
***
ಕರ್ನಾಟಕ ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಕಾಳಜಿಯಿಂದ ಧರಿಸಿದ್ದ ಪ್ರತಿನಿಧಿಗಳು ಪಂಚೆ, ಪಟಗಚ್ಚೆ, ರುಮಾಲು, ಮೈಸೂರು ಪೇಟಾ, ಟೋಪಿ, ಜುಬ್ಬಾ, ಪೈಜಾಮ, ಸೀರೆ ಮುಂತಾದವುಗಳಲ್ಲಿ ಕಂಗೊಳಿಸಿದರು. ಪ್ರತಿನಿಧಿಗಳು ಧರಿಸಿದ್ದ ಉಡುಪುಗಳು ರಾಜ್ಯದ ಎಲ್ಲ ಪ್ರಾಂತಗಳನ್ನು ಪ್ರತಿನಿಧಿಸುವಂತಿದ್ದವು. ಕಾವೇರಿ ಕನ್ನಡ ಸಂಘದ ಕಾರ್ಯಕರ್ತರೆಲ್ಲ ಸಾಂಪ್ರದಾಯಿಕ ದಿಕ್ಕಿನಲ್ಲಿ ಕಾಣಿಸಿಕೊಂಡರೆ, ಅಕ್ಕ ಸಂಘಟನೆಯ ಅನೇಕ ಪದಾಧಿಕಾರಿಗಳು ಮಾತ್ರ ಕಟ್ಟಿದ ಟೈ ಬಿಚ್ಚಿರಲಿಲ್ಲ. ಸಿನಿಮಾ ತಾರೆಯರಾದ ತಾರಾ, ರಮ್ಯಾ ಜೊತೆ ನಿಂತು ಫೋಟೊ ತೆಗೆಸಿಕೊಳ್ಳಲು ಜನ ನಾಮುಂದು ತಾಮುಂದು ಎಂದು ನುಗ್ಗುತ್ತಿದ್ದರು. ಇವರಿಬ್ಬರಿಗೆ ಬೇರೆ ಕೆಲಸವಿಲ್ಲದ್ದರಿಂದ ಎಲ್ಲರ ಕೋರಿಕೆಯನ್ನು ಮನ್ನಿಸಿದರು.
***
ಜಗತ್ತಿನ ಯಾವುದೇ ವಿಷಯದ ಬಗ್ಗೆ ಸಿದ್ಧತೆಯಿಲ್ಲದೇ ನಿರರ್ಗಳವಾಗಿ, ಅನಿರ್ದಿಷ್ಟ ಕಾಲ ಉಪನ್ಯಾಸ ನೀಡುವ ರಾಜೀವ್ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ನಿರ್ದೇಶಕ ಕೆ.ಪಿ.ಪುತ್ತೂರಾಯರು, ವಿದ್ವಾಂಸ ಅ.ರಾ.ಮಿತ್ರರ ಜತೆ ಹಾಸ್ಯಗೋಷ್ಠಿಯಲ್ಲಿ ನಗೆ ಚೆಲ್ಲಿದರು. ವಿಸಾ ಸಿಗದೇ ಹಾಸ್ಯಗೋಷ್ಠಿ ತಪ್ಪಿಸಿಕೊಂಡ ನಾಲ್ವರು ಹಾಸ್ಯಪಟುಗಳ ಗೈರು ಹಾಜರಿಯ ಲಾಭವನ್ನು ಪುತ್ತೂರಾಯರು ಪಡೆದುಕೊಂಡರು.
***
ಪುತಿನ ಪುತ್ರಿ ಅಲಮೇಲು ಅಯ್ಯಂಗಾರ್ ನಿರ್ದೇಶನದ ‘ಕುಜ ದೋಷವೋ ಶುಕ್ರದೆಸೆಯೋ’ ಹಾಸ್ಯ ನಾಟಕ ರಂಜಿಸಿತು. ಪ್ರಸಿದ್ಧ ಗಾಯಕ ಎಸ್.ಪಿ.ಬಾಲಸುಬ್ರಮಣ್ಯ ಅವರ ಸಂಗೀತ ಸಂಜೆ ಪ್ರೇಕ್ಷಕರ ಮನಸೂರೆಗೊಂಡಿತು. ಒಂದು ಹಂತದಲ್ಲಿ ಸಭಿಕರು ಮೈಮರೆತು ನರ್ತಿಸಿ ಸಂಭ್ರಮಿಸಿದರು. ಎಸ್ಪಿ ಅವರಿಗೆ ಸಂಗೀತ ಸೌರಭ ಬಿರುದು ನೀಡಿ ಸನ್ಮಾನಿಸಲಾಯಿತು. ವಿದ್ಯಾಭೂಷಣ, ನಾಗವಲ್ಲಿ ನಾಗರಾಜ, ಸಂಗೀತ ಕಟ್ಟಿ ಅವರ ಗಾಯನ, ಕೆರೆಮನೆ ಶಂಭು ಹೆಗಡೆ ತಂಡದ ಯಕ್ಷಗಾನ ಮುದ ನೀಡಿತು.
ನುಡಿ ಹಬ್ಬದ ಚಿತ್ರಪಟಗಳು :
ಕೂತಲ್ಲಿಯೇ ಸಮ್ಮೇಳನ ಕಾಣಿರಿ!
ಮೆರವಣಿಗೆಯ ನೋಟ- 2ನೇ ದಿನ
ಎಲ್ಲೆಲ್ಲೂ ಹಸನ್ಮುಖಿಗಳು - 1ನೇ ದಿನ
ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :
| ಪೂರ್ವ ಸಿದ್ಧತೆ | Be a patronate! Use .in e-mail | Post Your Views |











Click it and Unblock the Notifications