ದಿನೇಶ್ ಉಡುಪಿ ಕವನ : ವಿದಾಯ

-ಕೊಂಡ ಮಿಡಿ ಫಟಾರನೆ ಹರಿದು
ಹೋಗುವ ಭಯ ಲೆಕ್ಕಿಸದೆ
ಕಬ್ಬಿಣದ ಬಾಗಿಲ ಹಾದು
ಹಾರಿ ಬಂದಳು ಅವಳು.
ನಾರುತ್ತಿರುವ ಕಸದ ತೊಟ್ಟಿ
-ಯ ಪಕ್ಕ ವಡೆ ಕರಿಯುವವನ
ಕಮಟು ಬಿಸಿ ಬಿಸಿ ಹೊಗೆಯ
ಹಿಂದೆ ಮಸುಕು ವ್ಯಕ್ತಿಯಂತೆ
ಬಸಿದ ಬೆವರಲ್ಲಿದ್ದ ಅವನು.
ದಬಾರನೆ ಬಂದು ಹಿಡಿದು ಅಪ್ಪಿ
-ಕೊಂಡವಳು ಮೈ ಮನಸನೆಲ್ಲ
ಮತ್ತೆ ಮತ್ತೆ ಒತ್ತಿ ಉದ್ವಿಗ್ನ
-ಳಾದಳು ಉಸಿರಿಗೆ ಉಸಿರ ಸೇರಿಸಿ
ನಗುತ್ತಲೆ ಅತ್ತುಬಿಟ್ಟ ಅವನು.
ರೈಲು ಮತ್ತೆ ಕೂ... ಕೂ.. ಅಂದು
ಗಡಬಡಿಸಿ ತಿರುಗಿ ನೋಡಿದಳು,
ಮುಖ ಭುಜದಲ್ಲಿ ಹುದುಗಿಸಿ
ಈಟಿಯಂಥ ಎರಡು ಬಿಸಿ ಹನಿಗಳು
ಇಳಿದು ನೋವಲ್ಲಿ ಹಾ ಅಂದ ಅವನು.
’ಈ ಭುಜವಿಲ್ಲದೆ ಕಂಬನಿ ಇಳಿಯಲ್ಲ,
ಬದುಕು ನಿಂತು ಹೋಗುತ್ತೆ, ಅಶು’ ಅಂದಳು.
’ಹುಡುಗನಾಗೆ ಇರುವೆ, ಗಂಡಸರು
ಪ್ರೀತಿಸುವುದಿಲ್ಲ, ಜಾನು’ ಅವನಂದ;
ರೈಲು ಮತ್ತೆ ಕೂ... ಕೂ.. ಅಂದಿತು.












Click it and Unblock the Notifications