ಕರ್ಮಣ್ಯೇವಾಧಿಕಾರಸ್ತೇ

('ನಮ್ಮ ನಡುವಿನ ನಿತ್ಯ ಸುಮಂಗಲಿ"ಯರು ಮಾಲಿಕೆಯ ಎರಡನೇ ಪದ್ಯ ಇಲ್ಲಿದೆ. ಜೀವನದಲ್ಲಿ ನಮಗೆ ವಿಧವಿಧದ ವ್ಯಕ್ತಿಗಳು ಸಿಗುತ್ತಾರೆ. ಭಾವ-ಭಂಗಿ ಬೇರೆಬೇರೆಯಾದರೂ ಅವರವರ ವೃತ್ತಿ ಅವರವರಿಗೆ ಶ್ರೇಷ್ಠ.)
ಕಡ್ಡಿ ಗೀರಿ
ಬೀಡಿಯ ಅಂಚಿಗೆ ಮುಟ್ಟಿಸಿ
ಅವನ ಪೊದೆ ಮೀಸೆಯ ಕೆಳಗೊತ್ತಿ
ಸೆರಗು ಸರಿಸಿ
ತುರುಬು ಸಡಿಲಿಸಿ
ದ್ರಾಕ್ಷಿಗಳನೊತ್ತಿ
ಕೆಂಪು ಗಾಜಿನ ಲೋಟ ತುಂಬಿಸಿ
ಕೆನ್ನೆ ಹಿಂಡಿ
ಕಿವಿಯ ಕಚ್ಚಿ
ಕೂದಲಲಿ ಬೆರಳಾಡಿಸಿ
ಅಂಗಿ ಕಳಚಿ
ಪಂಚೆ ಬಿಡಿಸಿ
ಜೀವರಸವನು ಹೀರಿ ಹಿಗ್ಗಿಸಿ
ಹಣವ ಎಣಿಸಿ
ಕುಪ್ಪುಸದ ನಡುವೆ ಮಡಿಸಿ
ರಾಜನನು ಅರಮನೆಗೆ ಅಟ್ಟಿ
ಮತ್ತೊಬ್ಬನ ಪಟ್ಟಾಭಿಷೇಕಕ್ಕೆ
ಕಾದು ಕುಳಿತಳು ವೇಶ್ಯೆ
ದೀಪ ಬೆಳಗಿಸಿ
ಬತ್ತಿ ಹತ್ತಿಸಿ
ಕಾಯಿ ಒಡೆದು
ನೀರ ಹಿಡಿದು
ಅಂದ ಚಂದದ ಹೂವ ಪೋಣಿಸಿ
ಮಂತ್ರ ಘೋಷಿಸಿ
ವೇದ ಪಠಿಸಿ
ಗಂಟೆ ಜಾಗಟೆ ನುಡಿಸಿ
ಗಾಯತ್ರಿಯನು ಸ್ಮರಿಸಿ
ಭಕ್ತರೆಲ್ಲರ ಹರಸಿ
ಗೊಲ್ಲ ಬಲ್ಲಿದರಲ್ಲಿ ಹರಿಯನ್ನು ಕಂಡು
ಸಾತ್ವಿಕತೆ ತುಳುಕಿದ್ದ ಮಂದಹಾಸವ ಸೂಸಿ
ಮರುದಿನದ ಮನುಕುಲಕೆ ಸುಖ ಶಾಂತಿ ಬಯಸುತ್ತ
ಗರ್ಭಗುಡಿಯಲ್ಲಿ ಜಪಿಸಿದನು ಬ್ರಾಹ್ಮಣ
ಮತ್ತೊಂದು ಪದ್ಯ : ಕತ್ತಲೊಳಗಿನ ಮಾಸಿದ ಬಣ್ಣಗಳು!












Click it and Unblock the Notifications