ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಬ್ಬಣ್ಣಾಚಾರ್‌ ಅಂಕಗಣಿತ

By Staff
|
Google Oneindia Kannada News

ಸುಬ್ಬಣ್ಣಾಚಾರ್‌ ಅಂಕಗಣಿತ
H.K. Krishnapriya
(2004 ಜನವರಿಯಲ್ಲಿ ಬರುವ ಬೆಂಗಳೂರಿನ ಮಲ್ಲೇಶ್ವರಂ ಶಿಶುವಿಹಾರದ 50ನೆಯ ಹುಟ್ಟಿದ ಹಬ್ಬದ ನೆನಪಿಗಾಗಿ)

ಸುಬ್ಬಣ್ಣಾಚಾರ್‌ ಅಂಕಗಣಿತ
ಬರ್ದ್ಬಿಟ್ಟ್‌ ಕುಣಿದ್ರೊಂದ್‌ ಚಿಕ್ಕ ಕುಣಿತ

ಛಾಪ್ಖಾನೇಗದ್‌ ಕಳ್ಸ್ಕೊಟ್ರು
ಕರಡಚ್ಚನವ್ರ್‌ ತಿದ್ಬಿಟ್ರು
ಸಾವ್ರಾರ್‌ ಕಾಪಿ ಅಚ್ಚ್‌ ಹಾಕ್ಸ್ಬಿಟ್ಟು
ನೂರಾರಂಗ್ಡೀಗ್‌ ಕಳ್ಸ್ಬಿಟ್ರು

ಊರವ್ರೆಲ್ಲಾ ಅಂಗ್ಡೀಗ್‌ ಹೋಗ್ಬಿಟ್‌
ಅಂಕಗಣಿತ ಕೊಂಡ್ಕೊಂಡ್ರು
ರೊಟ್ಟು ಗಿಟ್ಟು ಹಾಕಿಟ್ಬಿಟ್ಟು
ತಂ ತಂ ಮಕ್ಳಿಗ್ಕೊಟ್ಕೊಂಡ್ರು

ರಾಮೇಗೌಡ್ರು ಭೀಮೇಗೌಡ್ರು
ತಿಪ್ಪಾರಳ್ಳಿ ಬೋರೇಗೌಡ್ರು
ಶಾಮಣ್ಣೋರು, ಚೋಮಣ್ಣೋರು
ಗರಡೀಮನೆ ಗರುಡಣ್ಣೋರು
ಲಿಂಗಣ್ಣೋರು, ಸಂಗಣ್ಣೋರು
ಬೆಸ್ತರ್ಬೀದಿ ಕರಿಯಣ್ಣೋರು
ಶಾಂತಮ್ನೋರು ಜಯಮ್ನೋರು
ಶಿಶುವಿಹಾರದ್‌ ತಿರುಮ್ಲಮ್ನೋರು
ಪಕ್ಕದ್ಮನೆ ಪಾರ್ವತಮ್ಮ
ಆಚೆಬೀದಿ ಯಮುನಾಬಾಯಿ
ಪಟ್ಟೆನಾಮದ್‌ ಶೇಷಶಾಯಿ
ಹುಬ್ಳಿ ಇಂದ್ಬಂದ್‌ ಮೆಣಸಿನಕಾಯಿ
ಕಲೀಮುಲ್ಲಾ ಖಾನ್‌ ಸಾಹೇಬ್ರು
ಬೆಟ್ಟದ್‌ ಬಾಬಬುಡನ್‌ ಸಾಬ್ರು

ಎಲ್ಲಾರೂನೇ ಅಂಗ್ಡೀಗ್‌ ಹೋಗ್ಬಿಟ್‌
ಅಂಕಗಣಿತ ಕೊಂಡ್ಕೊಂಡ್ರು
ರೊಟ್ಟು ಗಿಟ್ಟು ಹಾಕಿಟ್ಬಿಟ್ಟು
ತಂ ತಂ ಮಕ್ಳಿಗ್ಕೊಟ್ಕೊಂಡ್ರು

ಆಗ್ಲೇ ನೋಡಿ ಆರಂಭ್ವಾಯ್ತು
ಮಕ್ಕಳಿಗೊಳ್ಳೇ ಮೆದುಳಿನ್‌ ಕವಾಯ್ತು
‘ಅಯ್ಯೋ ಪಾಪ!’ ಅನ್ನೋರಿಲ್ಲ
ಮಾಡ್ರೋ ಲೆಕ್ಕಾನ್ನೋವ್ರೇ ಎಲ್ಲ

ರಾಮ ಭೀಮ ಸೋಮ ಒಟ್ಗೆ
ಇಟ್ಗೆ ಕೆಲ್ಸಕ್‌ ಹೋದ್ರೂಂತಂದ್ರೆ
ನಮ್ಪುಟ್ಟೀಗ್ಬಂತ್‌ ಭಾಳ ತೊಂದ್ರೆ
‘ರಾಮಂಗ್‌ ಕೆಲ್ಸ ಮಾಡೋದಕ್ಕೆ
ಒಂದೇ ದಿವ್ಸ ಆಗೊತ್ತಂತೆ
ಭೀಮಂಗ್‌ ಸೋಮಂಗ್‌
ಎರ್ಡ್‌ ಮೂರ್‌ ದಿವ್ಸ ಕೆಲ್ಸ
ಮಾಡೊಕ್‌ ಬೇಕಾಯ್ತಂತೆ
ಒಟ್ಗೆ ಸೇರ್ಕೊಡ್‌ ಎಷ್ಟ್‌ ದಿನ್ದಲ್ಲಿ
ಇಟ್ಗೆ ಕೆಲ್ಸ ಮಾಡ್ಮುಗ್ಸಿದ್ರು?’
ಅಂತ ಪುಟ್ಟೀನ್‌ ಕೇಳ್ದಾಗವ್ಳು
ಕಣ್ಕಣ್ಬಿಟ್ಕೊಂಡ್‌ ಅತ್ತೇ ಬಿಟ್ಳು

ರಾಜನ ಕಾರು ಮೈಸೂರನ್ನ
ಎಂಟಕ್‌ ಬಿಟ್ಟು ಹೊರಡ್ತೂಂತಿಟ್ಕೊ
ಭೋಜನ್‌ ಕಾರು ಬೆಂಗ್ಳೂರನ್ನ
ಒಂಬತ್‌ ಗಂಟೇಗ್ಬಿಟ್ತೂಂತಿಟ್ಕೊ
ಅಂದಾಗ್‌ ಪುಟ್ಟ ಇಟ್ಕೊಂಡ್ಬಿಟ್ಟ
ಇಟ್ಕೊಂಡ್‌ ಎಲ್ಲೋ ಹೊರಟೇ ಬಿಟ್ಟ

ಹಸು ಹುಲ್ಲಿಗ್‌ ಹದಿನಾರ್ಕಾಸು
ಹಾಲನ್ಕರೆಯಾಕ್‌ ಅರ್ಧ ತಾಸು
ಹಾಲಿನ್‌ ಬೆಲೆ ಏನೂಂತ್‌ ಕೇಳಿ,
ಯಾರೂ ಆಗೋದಿಲ್ಲ ಪಾಸು

ಪೆನ್ಸಿಲ್‌ ಕಚ್ಚಿ ಕಚ್ಕಚ್ಚಾಯ್ತು
ಪೆನ್ಲೀಕಾಗಿ ಮೂಗಿಂಕಾಯ್ತು
ಬರದೂ ಬರದೂ ಅಳಿಸಿದ್ದಾಯ್ತು
ತಪ್ಪೋ ನೆಪ್ಪೋ ಮುಗಿಸಿದ್ದಾಯ್ತು

ಕೂಡೋ ಲೆಕ್ಕ! ಕಳೆಯೋ ಲೆಕ್ಕ!
ಹಳ್ಳ ತೋಡೊ ಹೊತ್ತಿನ್ಲೆಕ್ಕ!
ರೈಲಿನ್ಲೆಕ್ಕ! ಕಾರಿನ್ಲೆಕ್ಕ!
ತಿಂದೆ ಇರೋ ಹಣ್ಣಿನ್ಲೆಕ್ಕ!
ತೋಟದ ಸುತ್ತಲ ಬೇಲಿ ಲೆಕ್ಕ!
ಕೋಳಿ ಕುರಿ ಕಾಲಿನ್ಲೆಕ್ಕ!
ಲ. ಸಾ. ಅ.!, ಮ. ಸಾ. ಅ.!
ಕಸದ್‌ ಬುಟ್ಟೀಗ್‌ ಕ. ಸಾ. ಅ.!
ಸರಳಬಡ್ಡಿ! ಚಕ್ರಬಡ್ಡಿ!
ಗುಣಾಕಾರ! ಭಾಗಾಕಾರ!
ಊರಿನ್ಮಕ್ಕಳ ಹಾಹಾಕಾರ!

ತಲೆ ತಿರ್ಗಿ ನಾಲ್ಗೆ ತೊದ್ಲಿ
ಮಕ್ಳೆಲ್ಲಾನೂ ಹೇಳ್ತಿದಾರೆ
‘ಅಂಕಣ್ಣಾಚಾರ್‌ ಸುಬ್ಬಕುಣಿತ
ಕುಣಿದ್ಬಿಟ್‌ ಬರದ್ರೊಂದ್‌ ಗಿಕ್ಕ ಚಣಿತ!’

*ಕಪಿನಯ್ಯ ಅಲ್ಲ


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X