ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕವಿತೆ ಸಾಯುವುದಿಲ್ಲ !

By Staff
|
Google Oneindia Kannada News

ಕವಿತೆ ಸಾಯುವುದಿಲ್ಲ !
Triveni Srinivas Rao
  • ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌,ಅಮೆರಿಕಾ
    ತವರು : ಕಡೂರು - ಚಿಕ್ಕಮಗಳೂರು ಜಿಲ್ಲೆ

    [email protected]
ನನ್ನ ಮುದ್ದಿನ ಕವಿತೆ ಇಲ್ಲಿಯವರೆಗೂ
ಈ ನೆಲದ ಪರಿವೆಯೇ ಇಲ್ಲದಂತೆ
ಚಂದ್ರ,ತಾರೆಯರ ನಡುವೆ ಅಲೆಯುತ್ತಿತ್ತು !
ಬಣ್ಣಬಣ್ಣದ ಗೋಡೆಗಳ ಮೂಸುತ್ತಾ
ವಿಶಾಲ ವಿಶ್ವದ ಕಲ್ಪನೆಯನ್ನೂ ಮರೆತಿತ್ತು !

ಇಷ್ಟೇ ಅಲ್ಲ : ಕಳೆದುಕೊಂಡಿತ್ತು-
ಮೈಮರೆತು ನಗುವ ಜೀವಂತಿಕೆಯ,
ಬಿಕ್ಕಳಿಸಿ ಅಳುವ ಭಾವುಕತೆಯ,
ಕೊನೆಗೆ ಕನಿಕರಿಸುವ ಕೋಮಲತೆಯನ್ನೂ.

ತನಗೇ ಅರ್ಥವಾಗದ ಭ್ರಮೆಗಳ ಹಾಡಿ
ಪಾರ್ಶ್ವವಾಯು ಬಡಿಸಿಕೊಂಡಂತೆ
ಅಂತಃಪುರದ ಸುಪ್ಪತ್ತಿಗೆಗಳಲ್ಲಿ
ಕೊರಗಿ ನಿತ್ರಾಣವಾಗಿ ನರಳುತ್ತಿತ್ತು.

ಆದರೆ ಇತ್ತೀಚೆಗೆ ಈ ಕವಿತೆ
ಚಿತ್ತಾರದ ರೇಶಿಮೆ ಅವಕುಂಠನವ
ಹರಿದು ಹೊರಬಂದು-

ತಬ್ಬಲಿ ಮಕ್ಕಳ ಹಾದಿಯಲ್ಲಿ
ಕೊಳಚೆ ನೀರಿನ ಬೀದಿಯಲ್ಲಿ
ಕಟುವಾಸ್ತವತೆಯ ಎದುರಿನಲ್ಲಿ
ಮುಖಾಮುಖಿ ನಡೆಯತೊಡಗಿದಾಗಲೇ
ಅದಕ್ಕೆ ಜೀವತುಂಬತೊಡಗಿತು.
ಮೂಳೆಚಕ್ಕಳದಲ್ಲಿ ರಕ್ತಮಾಂಸವೂ ಸೇರಿ
ಜೋಲು ಮೈ ಗಟ್ಟಿಗಟ್ಟಿಯಾಯಿತು!

ಈಗ ನನ್ನ ಕವಿತೆ-
ನಗುತ್ತದೆ ; ಅಳುತ್ತದೆ
ಎದುರಾಳಿಗಳ ಎದುರುನಿಂತು
ಸಡ್ಡುಹೊಡೆದು ಸಿಡುಕುತ್ತದೆ,
ಒಮ್ಮೆ ಶಕ್ತಿಗುಂದಿ ಸೋತು ಮಲಗಿದರೂ
ನನ್ನ ಕವಿತೆ ಈಗ ಸಾಯುವುದಿಲ್ಲ !

(ಸುಮಾರು ವರ್ಷಗಳ ಹಿಂದೆ ‘ಲಂಕೇಶ್‌ ಪತ್ರಿಕೆ’ ಯಲ್ಲಿ ಪ್ರಕಟವಾಗಿದ್ದ ನನ್ನ ಈ ಕವನಕ್ಕೆ ದಿ.ಲಂಕೇಶರು ಕೊಟ್ಟಿದ್ದ ಶೀರ್ಷಿಕೆ - ‘ಪತ್ರಿಕೆ’ ನನಗೇನು ಮಾಡಿತು?’)


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X