ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೂಪಳಿಗೋಸ್ಕರ ಪವನ್‌ನಿಂದ ದೀಪಕ್‌ನ ಕೊಲೆ

By Staff
|
Google Oneindia Kannada News


‘‘ಅಂದು ರಾತ್ರಿ ರೂಪ ನನಗೆ ಕರೆ ಮಾಡಿದಾಗ ನಾವೆಲ್ಲ ಊಟ ಮಾಡುತ್ತಿದ್ದೆವು. ದೀಪಕ್‌ ನನ್ನ ಪಕ್ಕದಲ್ಲಿಯೆ ಕುಳಿತಿದ್ದುದರಿಂದ ನಾನು ಅಲ್ಲಿಯೆ ಕುಳಿತು ಮಾತನಾಡುವ ಹಾಗಿರಲಿಲ್ಲ. ಕ್ಷಮಾಪಣೆ ಕೇಳಿ ಮೇಲೆದ್ದೆ. ಅವನು ನನ್ನನ್ನು ಗಮನಿಸಲಿಲ್ಲ... ಚೀನಿಯರೊಂದಿಗೆ ಸ್ಕಾಚನ್ನು ಗುಟುಕರಿಸುತ್ತ ಸ್ವಲ್ಪ ಹೆಚ್ಚಾಗಿಯೆ ಕುಡಿಯುತ್ತಿದ್ದ. ಹಾಗಾಗಿ ಅವಳ ಕರೆಯನ್ನು ಸ್ವಿಕರಿಸಲು ನಾನು ಹೊರಗೆ ಹೋದೆ.

ಅವಳು ನಿಜವಾಗಿಯೂ ದೀಪಕ್‌ನ ಬಗ್ಗೆ ಹೆದರಿಕೊಂಡಿದ್ದಳು. ಅವನನ್ನು ಬಿಡಲು ನಿರ್ಧರಿಸಿದ್ದಳು. ಅವತ್ತು ಬೆಳಿಗ್ಗೆಯೆ ಅವಳು ಹೋಗಲು ಸಿದ್ಧಳಾಗಿದ್ದಳೆಂದೂ, ನೀನು ಬರುತ್ತೇನೆ ಎಂದು ಮಾತು ಕೊಟ್ಟಿದ್ದೆಯೆಂದೂ ಹೇಳಿದಳು. ಅವತ್ತು ನಿನ್ನ ಜೊತೆ ಬಂದುಬಿಡುತ್ತಿದ್ದಳು. ಆದರೆ ನೀನು ಅಲ್ಲಿಗೆ ಹೋಗಲೆ ಇಲ್ಲ.’’

ಅನೂಗೆ ಆಶ್ಚರ್ಯವಾಯಿತು. ‘‘ಆದರೆ ನಿನಗೆ ರೂಪ ಹೇಗೆ ಗೊತ್ತು? ನೀನು ಅವಳ ಮನೆಯವರನ್ನು ಭೇಟಿಯಾಗಿದ್ದೆ ಎಂದಷ್ಟೆ ನನಗೆ ಇಮೇಯ್ಲ್‌ನಲ್ಲಿ ತಿಳಿಸಿದ್ದೆ.’’

‘‘ಓಹ್‌, ನಮ್ಮ ಕಂಪನಿಯ ಪಾರ್ಟಿಯಾಂದಕ್ಕೆ ಒಮ್ಮೆ ದೀಪಕ್‌ ಅವಳನ್ನು ಭಾರತಕ್ಕೆ ಕರೆದುಕೊಂಡು ಬಂದಿದ್ದ. ಅವಳನ್ನು ಒಂದು ಪಾರಿತೋಷಕದ ಹಾಗೆ ಮೆರೆಸಿದ. ಅವಳು ತನ್ನ ಪಕ್ಕದಿಂದ ಒಂದು ಇಂಚೂ ದೂರ ಕದಲದಂತೆ ನೋಡಿಕೊಂಡ. ನಮ್ಮಪ್ಪನ ಹಾಗೆ, ಸದಾ ಅವಳನ್ನು ಗಮನಿಸುತ್ತಿದ್ದ. ಆದರೆ ಜನ ಎಷ್ಟೊಂದು ಮುಗ್ಧರು ನೋಡು! ಅವರಿಬ್ಬರನ್ನೂ ಅಲ್ಲಿದ್ದವರು ಬಹಳ ಮೆಚ್ಚಿಕೊಂಡರು. ಎಂತಹ ಚೆಂದದ ಜೋಡಿ, ಎಷ್ಟೊಂದು ಅದೃಷ್ಟವಂತೆ ಎಂದರು. ನನಗೆ ವಾಕರಿಕೆ ಬಂದಂತಾಯಿತು. ಅದಾದ ಮೇಲೆ, ದೀಪಕ್‌ ಕೆಲಸದ ಮೇಲೆ ಹೊರಗೆ ಪ್ರವಾಸ ಹೋಗಿದ್ದಾಗ ನಾನು ಭಾರತದಿಂದ ಅವಳ ಮನೆಗೆ ಕರೆ ಮಾಡಿ ಅವಳೊಂದಿಗೆ ಮಾತನಾಡುತ್ತಿದ್ದೆ. ದೀಪಕ್‌ನ ಕೆಳಗೆಯೆ ನಾನು ಕೆಲಸ ಮಾಡುತ್ತಿದ್ದುದ್ದರಿಂದ ಅವನು ಯಾವಾಗ ಪ್ರವಾಸದಲ್ಲಿದ್ದಾನೆ, ಯಾವಾಗ ಮನೆಯಲ್ಲಿರುವುದಿಲ್ಲ ಎಂದು ನನಗೆ ಗೊತ್ತಾಗುತ್ತಿತ್ತು.’’

ನಾನು ರೂಪಾಗೆ ನನ್ನ ತಾಯಿಯ ಬಗ್ಗೆ ಹೇಳಿ, ಈ ವಿಷಯಗಳು ಹೇಗೆ ಎಂದೂ ಸರಿಯಾಗುವುದಿಲ್ಲವೆಂದು ಮನದಟ್ಟು ಮಾಡಿದೆ. ನೀನು ದೀಪಕ್‌ನನ್ನು ಬಿಡಲೇ ಬೇಕು ಎಂದು ಅವಳಿಗೆ ಹೇಳಿದೆ. ನೀನೂ ಸಹ ಅವಳಿಗೆ ಅದೇ ಸಲಹೆ ಕೊಟ್ಟಿದ್ದೆಯೆಂದು ಅವಳು ಒಪ್ಪಿಕೊಂಡಳು.

‘‘ಯಾಕೆ ನೀನು ನಿನಗೆ ರೂಪಾಳ ಪರಿಚಯ ಇದೆಯೆಂದು ನನಗೆ ಎಂದೂ ತಿಳಿಸಲಿಲ್ಲ? ಯಾಕೆ ಅದನ್ನು ಗುಟ್ಟಾಗಿ ಇಟ್ಟಿದ್ದು?’’

‘‘ನಿನ್ನನ್ನು ಹಾಗು ಡ್ಯಾನ್‌ನನ್ನು ಜೊತೆಯಾಗಿ ಟಬ್‌ನಲ್ಲಿ ನೋಡಿದ ಮೇಲೆ ನನಗೆ ದಿಗ್ಭ್ರಮೆಯಾಯಿತು. ನನಗೆ ಏನೂ ತೋಚಲೆ ಇಲ್ಲ. ನೀನೆ ನನ್ನ ಪ್ರಪಂಚವಾಗಿದ್ದೆ - ಅದು ಹಗಲುಗನಸೇನೊ ಹೌದು. ಆದರೆ ಕಳೆದ ಹತ್ತು ವರ್ಷಗಳಿಂದ ನೀನು ನನ್ನ ಭವಿಷ್ಯದ ಹೆಂಡತಿಯಾಗಿದ್ದೆ. ನನ್ನ ಕನಸು ಅಲ್ಲಿ ಇದ್ದಕ್ಕಿದ್ದಂತೆ ನುಚ್ಚುನೂರಾಯಿತು.’’

‘‘ನನ್ನನ್ನು ಕ್ಷಮಿಸು, ಪವನ್‌. ನನಗೆ ನಿನ್ನನ್ನು ನೋಯಿಸಬೇಕು ಎಂದಿರಲಿಲ್ಲ.’’

‘‘ಇಲ್ಲ, ಅನು, ಅದು ನನ್ನ ತಪ್ಪು. ನಾನು ಸಮಸ್ಯೆಗಳಿದ್ದ ಕುಟುಂಬದಲ್ಲಿ ಬೆಳೆದವನು. ಹಾಗಾಗಿ, ನಾನು ಯಾರನ್ನು ಮದುವೆ ಮಾಡಿಕೊಂಡರೂ ಅದು ಆದರ್ಶ ಕುಟುಂಬವಾಗಿರುತ್ತದೆ ಎಂದು ನನಗೆ ನಾನೆ ಅಂದುಕೊಂಡುಬಿಟ್ಟಿದ್ದೆ. ಸಹಜವಾಗಿ ನಾವು ಎಲ್ಲದರಲ್ಲೂ ನಮ್ಮ ಅಪ್ಪಅಮ್ಮನಿಗಿಂತ ಚೆನ್ನಾಗಿ ಆಗಬೇಕು, ಅಲ್ಲವೆ? ಪ್ರಪಂಚ ಈಗಿರುವುದಕ್ಕಿಂತ ಚೆನ್ನಾಗಾಗಬೇಕು ಎಂದು ನನ್ನಂತಹ ತೊಂದರೆಗೊಳಗಾದ ಜನ ಬಯಸುತ್ತೇವೆ. ದೀಪಕ್‌ನಂತಹ ಕೆಟ್ಟ ಜನ ನಿನ್ನಂತಹ, ರೂಪಾಳಂತಹ ಒಳ್ಳೆಯ ಜನರನ್ನು ಅದು ಹೇಗೆ ಆಕರ್ಷಿಸಲು ಸಾಧ್ಯ ಎಂದು ತಿಳಿದುಕೊಳ್ಳಲು ನಾನು ದೀಪಕ್‌ನ ಸಂಸ್ಥೆಯನ್ನು ಸೇರಿದೆ. ರೂಪ ಥೇಟ್‌ ಅವರ ಮನೆಯವರ ಹಾಗೆಯೆ! ಅವರು ಬಹಳ ಸರಳ, ಬಹಳ ಮುಗ್ಧರು.’’

‘‘ನೀನು ಮತ್ತೆ ಎಂದಾದರೂ ಅವಳ ಮನೆಯವರನ್ನು ನೋಡಿದೆಯ?’’

‘‘ಹೌದು. ದೀಪಕ್‌ ಹಾಗು ರೂಪ ಅಮೇರಿಕಕ್ಕೆ ಮರಳಿದ ನಂತರ ಮತ್ತೊಮ್ಮೆ ಹೋಗಿ ಅವರನ್ನು ಭೇಟಿಯಾದೆ. ತಮ್ಮ ಸ್ವಂತ ಮಗಳು ತಮ್ಮನ್ನು ನೋಡಲು ದೀಪಕ್‌ ಬಿಡುತ್ತಿಲ್ಲ ಎಂದು ಅವರು ಹೇಳಿದರು. ಒಂದು ದಿನ ಅವನು ಅವಳನ್ನು ಅವರ ಮನೆಗೆ ಕರೆದುಕೊಂಡು ಹೋಗಿದ್ದನಂತೆ. ಅವತ್ತು ರೂಪ ತನ್ನ ಮನೆಯವರ ಜೊತೆ ಒಂದು ದಿನ ಇದ್ದುಬರುವುದಾಗಿ ಕೇಳಿಕೊಂಡಳಂತೆ. ಆದರೆ ಅವನು ಅವಳನ್ನು ಅವರ ಮುಂದೆಯೆ ಎಳೆದುಕೊಂಡು, ಅಕ್ಷರಶಃ ಎಳೆದುಕೊಂಡು ಹೋಗಿ, ತನ್ನ ಕಾರಿನೊಳಕ್ಕೆ ಎತ್ತಿಹಾಕಿಕೊಂಡು ಹೋದನಂತೆ.’’

ಅನು ಆಶ್ಚರ್ಯವನ್ನು ವ್ಯಕ್ತಪಡಿಸಿದಳು. ಪವನ್‌ ಅವಳ ಪ್ರತಿಕ್ರಿಯೆಯನ್ನು ಗಮನಿಸಿದ. ‘‘ನಿನಗೆ ಯಾಕೆ ಇದು ಆಶ್ಚರ್ಯ ಉಂಟು ಮಾಡುತ್ತಿದೆ? ಅವನು ಹೇಗೆ ಎಂದು ನಿನಗೆ ಗೊತ್ತು.’’

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X