ಲಂಡನ್ ನ ಬಸವಣ್ಣನ ಪುತ್ಥಳಿಗೆ ಎಚ್ ಡಿ ದೇವೇಗೌಡರಿಂದ ನಮನ
ಲಂಡನ್, ಅಕ್ಟೋಬರ್ 27 : ಭಾರತದ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡ ಅವರು ಲಂಡನ್ ನಲ್ಲಿರುವ ಬಸವೇಶ್ವರ ಪುತ್ಥಳಿಗೆ ಶುಕ್ರವಾರ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಅವರೊಂದಿಗೆ ಸಂಸದ ಮತ್ತು ಜೆಡಿಎಸ್ ನಾಯಕ ಕುಪೇಂದ್ರ ರೆಡ್ಡಿ ಅವರು ಉಪಸ್ಥಿತರಿದ್ದರು.
ಇಂಗ್ಲೆಂಡ್ ನ ಪಾರ್ಲಿಮೆಂಟ್ ಎದುರು, ಥೇಮ್ಸ್ ನದಿಯ ದಡದಲ್ಲಿ ಪ್ರತಿಷ್ಠಾಪಿಸಲಾಗಿರುವ ಬಸವೇಶ್ವರ ಪುತ್ಥಳಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ಯುನೈಟೆಡ್ ಕಿಂಗಡಂ ನಲ್ಲಿರುವ ಲಾಭರಹಿತ ಸಂಸ್ಥೆಯಾಗಿರುವ ಬಸವೇಶ್ವರ ಫೌಂಡೇಷನ್ ನಿಂದ ಆಯೋಜಿಸಲಾಗಿತ್ತು.
ಲಂಡನ್ ನೆಲದಲ್ಲಿರುವ ಬಸವೇಶ್ವರ ಪುತ್ಥಳಿಗೆ ದೇವೇಗೌಡರ ನಮನ
ಯುನೈಟೆಡ್ ಕಿಂಗಡಂನಲ್ಲಿರುವ ಎರಡು ಪ್ರಮುಖ ಕನ್ನಡ ಸಂಘಟನೆಗಳಾದ ಕನ್ನಡಿಗರು ಯುಕೆ ಮತ್ತು ಸ್ಯಾಂಡಲ್ ವುಡ್ ಯುಕೆಯ ಸದಸ್ಯರು, ಬಸವೇಶ್ವರ ಫೌಂಡೇಷನ್ ನ ಅಧ್ಯಕ್ಷ, ಲಂಡನ್ ಬರೋ ಆಫ್ ಲ್ಯಾಂಬೆತ್ ನ ಮಾಜಿ ಮೇಯರ್ ಡಾ. ನೀರಜ್ ಪಾಟೀಲ ಅವರು ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು. ಕಾಯಕವೇ ಕೈಲಾಸ ಎಂದು ನಂಬಿದ್ದ 12ನೇ ಶತಮಾನದ ತತ್ವಜ್ಞಾನಿಯ ಪುತ್ಥಳಿಯ ಎದುರಿನಲ್ಲಿಯೇ ಮಣ್ಣಿನ ಮಗ ದೇವೇಗೌಡರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡಿಗರನ್ನು ಉದ್ದೇಶಿಸಿ ಮಾತನಾಡಿದ ದೇವೇಗೌಡರು, ಬಸವೇಶ್ವರ ಅವರು ಹನ್ನೆರಡನೇ ಶತಮಾನದಲ್ಲಿಯೇ ಜಾತಿ ವ್ಯವಸ್ಥೆಯ ವಿರುದ್ಧ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರು. ಆದರೆ ದುರಾದೃಷ್ಟವಶಾತ್, ಜಾತಿ ಮತ್ತು ಧರ್ಮದ ವಿಷಯದಲ್ಲಿ ಭಾರತ ಇನ್ನೂ ಇಬ್ಭಾಗವಾಗಿಯೇ ಇದೆ. ಇದು ಕೊನೆಯಾಗಲೇಬೇಕು, ಈ ಆಧುನಿಕ ಜಗತ್ತಿನಲ್ಲಿ ಯಾವುದೇ ರೀತಿಯ ಭೇದಭಾವಕ್ಕೆ ಅವಕಾಶ ನೀಡಬಾರದು ಎಂದು ಬುದ್ಧಿಮಾತು ಹೇಳಿದರು.
ಬಸವೇಶ್ವರ ಜಯಂತಿಯಂದು ಕರ್ನಾಟಕ ರಾಜಕಾರಣ, ಮೋದಿಯ ಮಾತುಗಳು
ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಿ, ಆ ಕಾಲದಲ್ಲಿಯೇ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರು ಬಸವಣ್ಣನವರು. ಥೇಮ್ಸ್ ನದಿಯ ದಡದಲ್ಲಿರುವ ಬ್ರಿಟಿಷ್ ಪಾರ್ಲಿಮೆಂಟ್ ಎದುರಿನಲ್ಲಿಯೇ ಪ್ರಜಾಪ್ರಭುತ್ವದ ಹರಿಕಾರ ಬಸವಣ್ಣನವರ ಪುತ್ಥಳಿ ಕಂಡು ತುಂಬಾ ಸಂತೋಷವಾಗಿದೆ. ಇದು ಪ್ರತಿ ಭಾರತೀಯ ಮತ್ತು ಕನ್ನಡಿಗರು ಹೆಮ್ಮೆ ಪಡುವಂಥ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು.
ಲಂಡನ್ನಲ್ಲಿ ಬಸವಣ್ಣನ ಪ್ರತಿಮೆ ಕಂಡು ಭಾವುಕರಾದ ಸಿದ್ದರಾಮಯ್ಯ
ಕನ್ನಡಿಗರ ಹೆಮ್ಮೆಯ ಇತಿಹಾಸ ಪುರುಷನಾಗಿರುವ ಬಸವೇಶ್ವರ ಪುತ್ಥಳಿಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2015ರ ನವೆಂಬರ್ 14ರಂದು ಅನಾವರಣ ಮಾಡಿದ್ದರು. ಭಾರತದ ಪ್ರಧಾನಿಯೊಬ್ಬರು ಅನಾವರಣ ಮಾಡಿರುವ ಪ್ರಥಮ ಪುತ್ಥಳಿ ಇದಾಗಿದೆ ಮತ್ತು ಪಾರ್ಲಿಮೆಂಟ್ ಬಳಿಯೇ ಪ್ರತಿಷ್ಠಾಪಿಸಲು ಅನುಮತಿ ನೀಡಲಾಗಿರುವ ಪ್ರಥಮ ಪುತ್ಥಳಿಯೂ ಆಗಿದೆ.
ಏಪ್ರಿಲ್ 18ಕ್ಕೆ ಲಂಡನ್ ನಲ್ಲಿ ಬಸವೇಶ್ವರ ಪುತ್ಥಳಿಗೆ ಮೋದಿ ಗೌರವ
ಕೆಲ ತಿಂಗಳ ಹಿಂದೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಇದೇ ಪುತ್ಥಳಿಗೆ ಮಧ್ಯರಾತ್ರಿ ಗೌರವ ಸಲ್ಲಿಸಿದ್ದರು. ಆದರೆ, ಬಸವೇಶ್ವರ ಫೌಂಡೇಷನ್ ಗೆ ತಿಳಿಸದೆ ಇಲ್ಲಿಗೆ ಭೇಟಿ ನೀಡಿದ್ದರಿಂದ ವಿವಾದಕ್ಕೆ ಕಾರಣವಾಗಿತ್ತು.
ಲಂಡನ್ ನಲ್ಲಿರುವ ಬಸವೇಶ್ವರ ಫೌಂಡೇಷನ್ ನ ಬೌದ್ಧಿಕ ಆಸ್ತಿಯಾಗಿರುವ ಬಸವೇಶ್ವರರ ಪುತ್ಥಳಿಯ ಸ್ಥಾಪನೆಗೆ ಲಂಡನ್ ಬರೋ ಆಫ್ ಲ್ಯಾಂಬೆತ್ ನ ಯೋಜನಾ ಇಲಾಖೆ ಮತ್ತು ಬ್ರಿಟಿಷ್ ಸರಕಾರದ ಸಂಸ್ಕೃತಿ ಮಾಧ್ಯಮ ಮತ್ತು ಕ್ರೀಡಾ ಸಚಿವಾಲಯ, ಪಬ್ಲಿಕ್ ಸ್ಟಾಚೂಸ್ ಆಕ್ಟ್, 1854 ಪ್ರಕಾರ ಅನುಮೋದನೆ ನೀಡಿದ್ದವು.