ಕನ್ನಡ ಬಳಗ ಯುಕೆ 30ನೇ ವಾರ್ಷಿಕೋತ್ಸವ
ಯುಗಾದಿ ಹಬ್ಬದ ಆಚರಣೆಯೊಂದಿಗೆ ಮಿಳಿತವಾಗಿರುವ ಈ ಸಮಾರಂಭದಕ್ಕೆ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ: ಎಸ್.ಎಲ್.ಭೈರಪ್ಪನವರು ಮುಖ್ಯ ಭಾಷಣಕಾರರಾಗಿ ಆಗಮಿಸುತ್ತಿದ್ದಾರೆ. ಅಲ್ಲದೆ ಕನ್ನಡದ ಹೆಸರಾಂತ ಸಾಹಿತಿ-ಕಲಾವಿದರುಗಳಾದ ಮುಖ್ಯಮಂತ್ರಿ ಚಂದ್ರು, ಪ್ರೊ.ಕೃಷ್ಣೇಗೌಡ, ಅರ್ಚನಾ ಉಡುಪ, ಪ್ರವೀಣ್ ಡಿ. ರಾವ್, ಅಕ್ಕಿಕಾಳು ವೆಂಕಟೇಶ್, ಪ್ರೊ.ಲಕ್ಷ್ಮೀ ಚಂದ್ರಶೇಖರ್, ಶ್ರೀನಿವಾಸ ಉಡುಪ ಮುಂತಾದವರು ಪಾಲ್ಗೊಳ್ಳುತ್ತಿದ್ದಾರೆ. ಪ್ರೊ.ವಲೈರಿ ಸ್ಟೋಕರ್ (ಯು.ಎಸ್.ಎ.) ಇವರು "ಹಂಪಿ"ಯ ಬಗ್ಗೆ ಮಾತನಾಡಲಿದ್ದಾರೆ. ಕಲಾವಿದ ಹಿರೇಮಠ್ ಮತ್ತು ಸಂಗಡಿಗರು ಜನಪದ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಕನ್ನಡ ಬಳಗ, ಯು.ಕೆ. ಸಾಗರದಾಚೆ ಕನ್ನಡತನವನ್ನು ಉಳಿಸಿ-ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಕೆಲವೇ ಸದಸ್ಯರಿಂದ ಪ್ರಾರಂಭವಾದ ಈ ಸಂಸ್ಥೆ, ಇಂದು ಸಹಸ್ರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ ಪ್ರತಿಷ್ಠಿತ ಸಂಸ್ಥೆಯಾಗಿ ಹೊರಹೊಮ್ಮಿದೆ. 60 ವರ್ಷಗಳ ಹಿಂದೆ ಕೇವಲ 500 ಕನ್ನಡ ಕುಟುಂಬಗಳಿದ್ದ ಬಿಟನ್ನಿನಲ್ಲಿ ಇಂದು ಸುಮಾರು 4000 ಕುಟುಂಬಗಳು ನೆಲೆಸಿವೆ. ಹಿಂದೆಂದಿಗಿಂತ ಇಂದು ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಹೆಚ್ಚಿನ ಶ್ರಮದ್ದಾಗಿದೆ. ತನ್ನ ನಿಸ್ವಾರ್ಥ ಸದಸ್ಯರ ಬೆಂಬಲದಿಂದ ಸಂಸ್ಥೆ "ಕನ್ನಡ ಕಲಿ" ತರಗತಿಗಳನ್ನು ಕೂಡಾ ನಡೆಸುತ್ತಿದೆ. ಈ ಮೂಲಕ ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಪ್ರಮುಖ ಹಜ್ಜೆಯನ್ನಿಟ್ಟಿದೆ.
30ನೇ ವಾರ್ಷಿಕೋತ್ಸವದ ಅಂಗವಾಗಿ ಸ್ಮರಣ ಸಂಚಿಕೆಯನ್ನು ಪ್ರಕಟಿಸಲಾಗುತ್ತಿದೆ. ಡಾ.ಶಿವರಾಮ ಕಾರಂತ, ದಿ.ಶಂಕರನಾಗ್.... ಮುಂತಾದ ಹಲವು ಸಾಹಿತಿ-ಕಲಾವಿದರು ಸಂಸ್ಥೆಯ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಹಲವಾರು ಕನ್ನಡದ ಕಲಾವಿದರಿಗೆ ಅಂತಾರಾಷ್ಟ್ರೀಯ ವೇದಿಕೆಯಾಗಿ ಈ ಸಂಸ್ಥೆ ಕೆಲಸ ಮಾಡಿದೆ. ಬಹುತೇಕ ವೈದ್ಯರುಗಳೇ ಇದ್ದ ಈ ಸಂಸ್ಥೆಯಲ್ಲಿ ಇಂದು ಸಾಫ್ಟ್ ವೇರ್ ಎಂಜಿನಿಯರಗಳು ಸದಸ್ಯರಾಗಿ ಸೇರ್ಪಡೆಯಾಗುತ್ತಿದ್ದಾರೆ. ಕನ್ನಡ ಬಳಗ, ಯು.ಕೆ.ಯ ಹಲವಾರು ಸದಸ್ಯರು ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ ಮತ್ತು ಬ್ರಿಟನ್ ಸರ್ಕಾರದ O.B.E. ಮತ್ತು M.B.E. ಪುರಸ್ಕಾರಕ್ಕೆ ಪಾತ್ರರಾಗಿ ನಾಡಿಗೆ ಕೀರ್ತಿ ತಂದಿದ್ದಾರೆ.
ವರ್ಷಕ್ಕೆರಡು ಪ್ರಮುಖ ಹಬ್ಬಗಳಾದ ಯುಗಾದಿ ಮತ್ತು ದೀಪಾವಳಿಗಳನ್ನು ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದೆ. ತಮ್ಮೆಲ್ಲರ ಪ್ರೋತ್ಸಾಹದಿಂದ ಸಂಸ್ಥೆ ಇನ್ನೂ ಹೆಚ್ಚಿನ ಸೇವೆಯನ್ನು ಮಾಡುವ ಉದ್ದೇಶ ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ www.kannadabalaga.co.uk ನೋಡಬಹುದಾಗಿದೆ.
ಇತಿ ವಂದನೆಗಳೊಂದಿಗೆ,
ಸುರೇಣು ಜಯರಾಂ, ಅಧ್ಯಕ್ಷೆ-2013