ರಾಜ್ಯದಲ್ಲಿ ಬಂಡವಾಳ ಹೂಡಿದ ಎನ್ಆರ್ಐ ರವಿ ಹರಸೂರ
ಆದರೆ ಆ ಕನಸುಗಳು ಕನಸಾಗಿಯೇ ಉಳಿದು ಬಿಡುತ್ತವೋ ಎಂಬ ಅಳುಕು ಕನ್ನಡಿಗ ರವಿ ಹರಸೂರಿಗೆ ಸಹಜವಾಗಿ ಕಾಡುತ್ತಿತ್ತು. ಆದರೆ ದೂರದ ಶಿಕಾಗೋದಿಂದ ಕನ್ನಡ ನೆಲದ ಮೇಲೆ ಕಾಲಿಟ್ಟ ಕೂಡಲೇ ಆ ಅಳುಕು ಆವಿಯಂತೆ ಮಾಯವಾಗಿ, ಕನಸುಗಳು ಸಾಕಾರವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಕಂಡ ಕನಸು ಮೂರ್ತ ರೂಪ ಪಡೆಯುತ್ತಿದೆ.
ಕಲಬುರ್ಗಿಯ ಮಧ್ಯಮ ವರ್ಗದಲ್ಲಿ ಜನಿಸಿದ ರವಿ ಹರಸೂರರಿಗೆ ಇಂಜಿನಿಯರಿಂಗ್ ಓದಿ, ಮುಂಬಯಿ - ಬೆಳಗಾವಿಯಲ್ಲಿ ನೌಕರಿ ಮಾಡುತ್ತಿರುವಾಗ ಕೈ ಬೀಸಿ ಕರೆದಿತ್ತು ಅಮೆರಿಕಾ. ತಿಂಗಳಿಗೆ ಒಂದು ಲಕ್ಷ ರೂಪಾಯಿಯಾದರೂ ಬಂದೇ ಬರುತ್ತದೆ. ಸಂಬಳ ಎಂದು ಕ್ಯಾಲಕ್ಯುಲೇಟರ್ ಕುಟ್ಟಿ ಖಾತ್ರಿ ಮಾಡಿಕೊಂಡು, ಸೂಟಕೇಸ್ ಹೊತ್ತು ನ್ಯೂಯಾರ್ಕ್ಗೆ ತೆರಳಿದರು.
ಅಮೆರಿಕಾ ತಲುಪಿದಾಗ ತಾನು ತಿಂಗಳಿಗೆ ಒಂದು ಲಕ್ಷ ರೂಪಾಯಿಗೆ ಮಾತ್ರ ಸೀಮಿತ ಎಂದು ಲೆಕ್ಕಾಚಾರ ಹಾಕಿದ್ದು ತಪ್ಪು ಎಂದು ಗೊತ್ತಾಯಿತು. ತಮ್ಮಲ್ಲದ್ದ ವಿದ್ಯೆ ಮತ್ತು ಪ್ರತಿಭೆಯಿಂದ ವ್ಯವಹಾರಕ್ಕೆ ಕೈಹಾಕಿದರು. ಯಾವುದರಲ್ಲೂ ಕೈ ಸುಟ್ಟುಕೊಳ್ಳದೆ, ಯಾರಿಂದಲೂ ಮೋಸ ಹೋಗದೆ ಇಂದು ಕೆಲವು ಕೋಟಿಗಳ ಒಡೆಯರು ರವಿ ಹರಸೂರ.
ಪತ್ನಿ ಸುನೀತಾ ಹರಸೂರ ವೈದ್ಯೆ, ಮಕ್ಕಳು ರಿಯಾ ಮತ್ತು ದಿವಾ ಹೈಸ್ಕೂಲ್ ಓದುತ್ತಿದ್ದಾರೆ. ಕೆಲಸ ಕಾರ್ಯಗಳಲ್ಲಿಯೇ ಮುಳುಗಿದ್ದರಿಂದ ಅವರಿಗೆ ಆರೆಂಟು ವರ್ಷಗಳಿಂದ ಕರ್ನಾಟಕಕ್ಕೆ ಬಂದಿರಲಿಲ್ಲ, 2011ರಲ್ಲಿ ಬಂದರು. ತಮ್ಮ ಜನ್ಮ ಭೂಮಿಯಲ್ಲಿ ಉದ್ಯಮವನ್ನು ಶುರುಮಾಡಿ ಬೇರು ಎಂದು ನಿರ್ಧರಿಸಿದರು, ಹೊಸದೇನನ್ನೋ ಮಾಡುವ ಕನಸು ಕಂಡರು.
ಆ ನಿಟ್ಟಿನಲ್ಲಿ ದುಡಿಯಲು ಶುರುಮಾಡಿದ ರವಿ ತನ್ನ ಕೆಲವು ಅಮೆರಿಕಾ ಗೆಳೆಯರಿಗೆ ಕರ್ನಾಟಕದಲ್ಲಿರುವ ಅವಕಾಶಗಳನ್ನು ವಿವರಿಸಿ, ಇಲ್ಲಿ ಹಣ ಹೂಡಲು ಒಪ್ಪಿಸಿ, ಹಾವೇರಿಯಲ್ಲಿ ಒಂದು ಬೃಹದಾಕಾರದ ಆಸ್ಪತ್ರೆಯನ್ನು ಕಟ್ಟಲು ನಿರ್ಧರಿಸಿದ್ದಾರೆ. ಹಾಗೆ ಒಂದು ವೈದ್ಯಕೀಯ ಕಾಲೇಜು ಮತ್ತೊಂದು ಆಟೋ ಪಾರ್ಟ್ಗಳನ್ನು ತಯಾರಿಸುವ ಘಟಕವನ್ನು ಧಾರವಾಡ ಜಿಲ್ಲೆಯಲ್ಲಿ ನಿರ್ಮಿಸಬಯಸಿದ್ದಾರೆ.
ಇವರ ಜೊತೆಯಲ್ಲಿ ಶ್ರೀಶೈಲ ವಿರುಪಣ್ಣವರ ಎಂಬ ಅಕ್ಕಿ ಆಲೂರಿನ ಗೆಳೆಯ ಕೈಜೋಡಿಸಿದ್ದಾರೆ. ವಿರುಪಣ್ಣವರ ಸಹ ರವಿಯಂತೆ ಕಷ್ಟಜೀವಿ, ಎರಡು ದಶಕಗಳ ಹಿಂದೆ ಅಮೆರಿಕಾಕ್ಕೆ ತೆರಳಿ ಕಷ್ಟಪಟ್ಟು ಹೆಸರು ಸಂಪಾದಿಸಿ ಉತ್ತಮ ಉದ್ಯಮಿಯಾಗಿದ್ದಾರೆ.
ಇವರಿಬ್ಬರ ಪ್ರಯತ್ನಕ್ಕೆ ನಮ್ಮ ಸರಕಾರವೂ ಸಹಕಾರ ತೋರಿದೆ. ಪ್ರಥಮ ಹಂತವಾಗಿ ಸರಕಾರದೊಂದಿಗೆ ಒಪ್ಪಂದವಾಗಿದೆ. ಮುಖ್ಯಮಂತ್ರಿ ಡಿವಿ ಸದಾನಂದ ಗೌಡ, ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ, ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ, ಉದ್ಯಮ ಸಚಿವ ಮುರುಗೇಶ ನಿರಾಣಿ, ಸಂಸದರಾದ ಸಜ್ಜನ ಇವರ ಬೆಂಬಲ ಶಿಕಾಗೋದ ರವಿ ಹರಸೂರಗೆ ಸಿಕ್ಕಿದೆ.
ಜೂನ್ 7 ಮತ್ತು 8ರಂದು ಬೆಂಗಳೂರಿನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮ್ಮೇಳನದಲ್ಲಿ ಈ ಕುರಿತಂತೆ ಒಪ್ಪಂದಕ್ಕೆ ಸಹಿ ಹಾಕಿದ ರವಿ ಹರಸೂರ ಅವರಿಗೆ ಕಲೆ, ಸಂಸ್ಕೃತಿ, ಸಾಹಿತ್ಯದಲ್ಲೂ ಆಸಕ್ತಿ. ಅಮೆರಿಕಾದಲ್ಲಿ ಮತ್ತು ಕರ್ನಾಟಕದಲ್ಲಿ ಸಾಂಸ್ಕೃತಿಕ ಚಟುವಟಿಕೆಗೆ ಪ್ರೋತ್ಸಾಹವಾಗಿ ಕನ್ನಡದ ಕಲೆಯನ್ನು ಉಳಿಸುವುದಕ್ಕಾಗಿ ಹರಸೂರ ಫೌಂಡೇಶನನ್ನು ಹುಟ್ಟುಹಾಕಿದ್ದಾರೆ ಮತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.