ಸಿಂಗಪುರದಲ್ಲಿ ಪ್ರತಿಧ್ವನಿಸಿದ ಅಣ್ಣಾ ಹಜಾರೆ ಗುಡುಗು
* ಆಣ್ಣಾ ಹಜಾರೆಯವರ ಆಂದೋಲನ ಸರಿಯಾಗಿದೆ. ಭಯಂಕರವಾಗಿ ಹರಡಿರುವ ಭ್ರಷ್ಟಾಚಾರದ ವಿರುದ್ಧ ಎದ್ದು ನಿಂತಿರುವ 74ರ 'ಯುವಕ'ನಿಗೆ ಎಲ್ಲರ ಬೆಂಬಲ ದೊರೆಯಲೇಬೇಕು. ಜನ ಲೋಕಪಾಲ ಮಸೂದೆ ಜಾರಿಗೆ ಬರಬೇಕು.
* ಆಣ್ಣಾ ಹಜಾರೆಯವರ ನಿಲುವು ತಾತ್ವಿಕ ನೆಲೆಗಟ್ಟಿನಲ್ಲಿ ಸರಿಯಾಗಿದೆ, ಆದರೆ ಅವರ ಜನ ಲೋಕಪಾಲ ವರದಿ ಜಾರಿಗೆ ಬರಲೇಬೇಕೆಂಬುದು ಸಾಂವಿಧಾನಿಕವಾಗಿ ಸರಿಯಾಗಿಲ್ಲ. ಮಸೂದೆಯನ್ನು ಜಾರಿಗೊಳಿಸುವ ಕೆಲಸ ಜನಪ್ರತಿನಿಧಿಗಳದ್ದು. ಅಣ್ಣಾ ಅವರಂತಹ ಪ್ರತ್ಯೇಕ ವ್ಯಕ್ತಿಗಳದ್ದಲ್ಲ.
* ಈ ತರಹದ ಮಸೂದೆಗಳಿಂದ ಏನೂ ಪ್ರಯೋಜನವಿಲ್ಲ. ಭ್ರಷ್ಟರು ಇದರಲ್ಲಿಯೂ ಸಹ ತಪ್ಪಿಸಿಕೊಳ್ಳುವ ಉಪಾಯಗಳನ್ನು ಹುಡುಕಿ ತಮ್ಮ ಭ್ರಷ್ಟ ವ್ಯವಹಾರಗಳನ್ನು ಮುಂದುವರೆಸುತ್ತಾರೆ.
ಎಲ್ಲರಿಗೂ ತಿಳಿದಿರುವಂತೆ ಭ್ರಷ್ಟಾಚಾರದ ಕರಾಳ ಹಸ್ತಗಳು ಭಾರತದ ಎಲ್ಲೆಡೆ ಹರಡಿ ಭಾರತದ ಸಾರ್ವತ್ರಿಕ ಪ್ರಗತಿಗೆ ಮುಖ್ಯ ಬಾಧಕವಾಗಿ ನಿಂತಿದೆ. ಸರಕಾರದ ಅತ್ಯಂತ ಕೆಳಗಿನ ಸ್ತರದಿಂದ ತೀರ ಮೇಲಿನ ಸ್ತರಗಳವರೆಗೆ ಹರಡಿರುವ ಭ್ರಷ್ಟಾಚಾರದ ಕಬಂಧ ಬಾಹುಗಳನ್ನು ಕತ್ತರಿಸುವದರ ಬಗ್ಗೆ ಎಲ್ಲರದೂ ಏಕಾಭಿಪ್ರಾಯವಾಗಿದ್ದರೂ ಅಣ್ಣಾ ಅವರ ಜನ ಲೋಕಪಾಲ ಮಸೂದೆಯ ಕರಡು ಮತ್ತು ಅದನ್ನು ಜಾರಿಗೊಳಿಸಲು ಆಗ್ರಹಿಸಿ ಅವರು ಹೂಡಿರುವ ಉಪವಾಸ ಸತ್ಯಾಗ್ರಹದ ಬಗ್ಗೆ ಸ್ವಲ್ಪ ಮಟ್ಟಿಗೆ ಗೊಂದಲ ಮತ್ತು ಸಂಶಯ ಉಂಟಾಗಿರುವದು ಕಂಡು ಬರುತ್ತದೆ.
ಈ ಗೊಂದಲದ ಮುಖ್ಯ ಮೂಲ ಜನರಿಂದ ಚುನಾಯಿತ ಪ್ರತಿನಿಧಿಗಳಲ್ಲದವರು ಭ್ರಷ್ಟಾಚಾರ ವಿರೋಧಿ ಮಸೂದೆಯನ್ನು ಜಾರಿಗೊಳಿಸಲು, ಸರಕಾರವನ್ನು ಆಗ್ರಹಿಸುವುದು, ಉಪವಾಸ ಸತ್ಯಾಗ್ರಹ ಮಾಡಿ ಸರಕಾರವನ್ನು ಬ್ಲಾಕ್ ಮೇಲ್ ಮಾಡುವದು ಸರಿಯೇ ಎಂಬ ಪ್ರಶ್ನೆ ಮತ್ತು ಸಂಶಯದ ಮುಖ್ಯ ಮೂಲ, ಯಾವ ತರಹದ ಕಾಯಿದೆಯಾದರೂ ಭ್ರಷ್ಟಾಚಾರವನ್ನು ಮಟ್ಟಗೊಳಿಸುವದು ಸಾಧ್ಯವೇ ಎಂಬ ನಿರಾಶೆಯ ಭಾವದಲ್ಲಿ.