ಯುಎಇ ಚುಟುಕು ಸಮ್ಮೇಳನಕ್ಕೆ ಮುಕ್ತ ಪ್ರಶಂಸೆ
ಸಮ್ಮೇಳನಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಇಂಧನ ಖಾತೆಯ ಸಚಿವೆ ಕು.ಶೋಭಾ ಕರಂದ್ಲಾಜೆ ಅವರು, ಯಾವುದೆ ಸರ್ಕಾರಿ ಸಹಾಯವನ್ನು ತೆಗೆದುಕೊಳ್ಳದೆ ಸತತ ಇಪ್ಪತ್ತೈದು ವರ್ಷಗಳಿಂದ ಕನ್ನಡ ಸಂಘಟನೆಯೊಂದನ್ನು ಹೊರನಾಡಿನಲ್ಲಿ ನಡೆಸುತ್ತಾ ಬಂದಿರುವ ಪ್ರಕಾಶ್ ರಾವ್ ಪಯ್ಯಾರ್ ಅವರನ್ನು ಮುಕ್ತ ಕಂಠದಿಂದ ಶ್ಲಾಘಿಸಿ, ಭಾಷೆಯ ಮೇಲಿನ ಅಭಿಮಾನ ಬಿಡುವಿಲ್ಲದ ದಿನಚರಿಯಲ್ಲೂ ನನ್ನನ್ನು ಕನ್ನಡ ಸಮ್ಮೇಳನಕ್ಕೆ ಸೆಳೆದುತಂದಿತು ಎಂದು ಹೇಳಿದರು. [ಚಿತ್ರಪಟ]
ಸಮ್ಮೇಳನವನ್ನು ಅನಿವಾಸಿ ಉದ್ಯಮಿ ಶ್ರೀನಿವಾಸ್ ಶ್ರೀರಂಗಂ ಅವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಪ್ರಖ್ಯಾತ ಕವಿ ಎಚ್ ಡುಂಡಿರಾಜ್ ಅವರು ವಹಿಸಿದ್ದರು. ದುಂಡಿರಾಜ್ ಅವರು ತಮ್ಮ ಬಾಷಣದಲ್ಲಿ ಸಮ್ಮೇಳನಕ್ಕೆ ತಮ್ಮ ನಿರೀಕ್ಷೆಗೂ ಮೀರಿ ಆಗಮಿಸಿದ ಕನ್ನಡಿಗರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನನ್ನ ಅಭಿಮಾನಿಗಳು ವಿಶ್ವವ್ಯಾಪ್ತಿ ಪಸರಿಸಿದ್ದರೂ ಮೊದಲ ಬಾರಿಗೆ ವಿದೇಶಕ್ಕೆ ಆಹ್ವಾನಿಸಿದ ಧ್ವನಿ ಪ್ರತಿಷ್ಠಾನಕ್ಕೆ ವಂದನೆ ಸಲ್ಲಿಸಿ ತಮ್ಮ ಹಲವಾರು ಹೊಸ ಚುಟುಕುಗಳನ್ನು ವಾಚಿಸಿದರು.
ಸಮಾರಂಭಕ್ಕೆ ಅತಿಥಿಗಳನ್ನು ಪಂಚವಾದ್ಯ ಹಾಗೂ ಪೂರ್ಣ ಕುಂಭ ಕಳಶದೊಂದಿಗೆ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು. ಅಶ್ವಿನಿ ಅವರ ಪ್ರಾಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಅವರು ಸ್ವಾಗತಿಸಿ, ಧ್ವನಿ ಪ್ರತಿಷ್ಠಾನ ಕಳೆದ ಇಪ್ಪತ್ತೈದು ವರ್ಷಗಳಿಂದ ಸತತವಾಗಿ ಹೊರನಾಡಿನಲ್ಲಿ ಕನ್ನಡ ಚಟುವಟಿಕೆಗಳನ್ನು ಹಮ್ಮಿಕೊಂಡು ಬಂದಿದೆ. ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2010ರಲ್ಲಿ ಯಶಸ್ವಿಯಾಗಿ ನಡೆಸಿ ಇಂದು ಯು.ಎ.ಇ.ಚುಟುಕು ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.
ಅತಿಥಿಗಳಾದ ಅನಿವಾಸಿ ಕನ್ನಡಿಗ ಪೋರಂನ ಉಪಾಧ್ಯಕ್ಷ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಸಮ್ಮೇಳನಕ್ಕೆ ಶುಭ ಕೋರಿದರು. ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿಯವರು ಯು.ಎ.ಇಯ ಸಕಲ ಕನ್ನಡ ಪರ ಸಂಘಟನೆಗಳ ಪರವಾಗಿ ಧ್ವನಿ ಪ್ರತಿಷ್ಠಾನದ ಇಪ್ಪತ್ತೈದು ವರ್ಷಗಳ ಕಾಲದ ಕನ್ನಡ ಸೇವೆಗೆ ಅಭಿನಂದನೆ ಸಲ್ಲಿಸಿದರು.
ಸಾಧಕರಿಗೆ ಪ್ರಶಸ್ತಿ ಪ್ರದಾನ : ಉದ್ಘಾಟನಾ ಸಮಾರಂಭದಲ್ಲಿ ಯು.ಎ.ಇ.ಯಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರನ್ನು ಸನ್ಮಾನಿಸಲಾಯಿತು. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗಲ್ಫ್ ಕನ್ನಡಿಗದ ಸಂಸ್ಥಾಪಕ ಬಿ.ಜಿ.ಮೋಹನದಾಸ್, ಉದ್ಯಮ ಕ್ಷೇತ್ರದಲ್ಲಿನ ಸಾಧನೆಗಾಗಿ ಸತೀಶ್ ವೆಂಕಟರಮಣ, ಸಾಹಿತಿ ಈರಣ್ಣ ಮೂಲಿಮನಿ, ಸಂಗೀತ ಕ್ಷೇತ್ರದ ಸೇವೆಗಾಗಿ ಸುಮಾ ನಾರಾಯಣ, ನೃತ್ಯ ವಿದುಷಿ ನಮಿತ ಅನಂತ್, ಕನ್ನಡ ಸಂಘಟನೆಗಾಗಿ ಸತೀಶ್ ಪೂಜಾರಿ, ಯಕ್ಷಗಾನ ಕ್ಷೇತ್ರದ ಕಿಶೋರ್ ಗಟ್ಟಿ ಅವರನ್ನು ಸಮ್ಮೇಳನಾಧ್ಯಕ್ಷರು ಹಾಗೂ ಮುಖ್ಯ ಅತಿಥಿಗಳು ಮತ್ತು ಉದ್ಘಾಟಕರಿಂದ ಸನ್ಮಾನಿಸಲಾಯಿತು. ಉದ್ಘಾಟಕ ಶ್ರೀನಿವಾಸ್ ಶ್ರೀರಂಗಂ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪ್ರದಾನ ಸಮರಂಭದಲ್ಲಿ ಆದ್ಯರಂಗಾಚಾರ್ಯರ ನೆನಪಿನಲ್ಲಿ ನೀಡುವ 'ಧ್ವನಿ ಶ್ರೀರಂಗ' ಪ್ರಶಸ್ತಿಯನ್ನು ರಂಗಕರ್ಮಿ ಡಾ. ನಾ ದಾಮೋದರ ಶೆಟ್ಟಿ ಅವರಿಗೆ ಹಾಗೂ ಧ್ವನಿ ಅಂತಾರಾಷ್ಟ್ರೀಯ ನಾಟಕ ರಚನಾ ಸ್ಪರ್ಧೆಯಲ್ಲಿ ಪ್ರಶಸ್ತಿ ಪುರಸ್ಕೃತ 'ಅಭಿಯಾನ' ನಾಟಕದ ಲೇಖಕ ಡಾ.ಜಯಪ್ರಕಾಶ್ ಮಾವಿನಕುಳಿ ಅವರಿಗೆ "ವಿಶ್ವ ಕನ್ನಡ ನಾಟಕ' ಪ್ರಶಸ್ತಿಯನ್ನು ಕಿರುತೆರೆ ನಟಿ ಗಿರಿಜಾ ಲೋಕೇಶ್ ಪ್ರಶಸ್ತಿ ಪ್ರದಾನಮಾಡಿದರು.
ಚುಟುಕು ಕವಿಗೋಷ್ಠಿಯಲ್ಲಿ ಕವಿಗಳಾದ ಇರ್ಶಾದ್ ಮೂಡಬಿದ್ರೆ, ಗೋಪಿನಾಥ್ ರಾವ್, ಪ್ರಕಾಶ್ ರಾವ್ ಪಯ್ಯಾರ್, ಈರಣ್ಣ ಮೂಲಿಮನಿ, ಸತೀಶ್ ಕುಲಾಲ್, ಅವಿನಾಶ್ ಭಟ್, ಮಂಗಳಾ ಶೆಟ್ಟಿ, ಗಣೇಶ್ ರೈ, ಮಲ್ಲಿಕಾರ್ಜುನ ಗೌಡ ಚುಟುಕು ವಾಚಿಸಿದರು. ರಾಜೇಶ್ ಕುತ್ತಾರ್ ಕಂಸಾಲೆ ನೃತ್ಯ ಹಾಗೂ ಕನ್ನಡ ಕೂಟ, ಕಲಾಶ್ರೀ, ಲಕ್ಷ್ಮೀ ಸೂರ್ಯ ಕುಮಾರ್, ಹರೀಶ್ ರಾಮನ್ ತಂಡದವರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು. ಸವಿಸವಿ ನೆನಪು ಖ್ಯಾತಿಯ ಚಿತ್ರನಟಿ ತೇಜಸ್ವಿನಿ ಪ್ರಕಾಶ್ ಅವರ ನೃತ್ಯ ವಿಶೇಷ ಆಕರ್ಷಣೆಯಾಗಿತ್ತು.
ಉದ್ಘಾಟನಾ ಸಮಾರಂಭದಲ್ಲಿ ಅರಬ್ ಉಡುಪಿ ಗ್ರೂಪ್ ನ ನಿರ್ದೇಶಕ ಶೇಖರ್ ಬಿ.ಶೆಟ್ಟಿ, ಚಿಲ್ಲಿ ವಿಲ್ಲಿ ಗ್ರೂಪ್ ನ ನಿರ್ದೇಶಕ ಸತೀಶ್ ವೆಂಕಟರಮಣ, ರಿಲೈಬೆಲ್ ಪ್ಯಾಬ್ರೀಕೆಟರ್ ನ ನಿರ್ದೇಶಕ ಜೇಮ್ಸ್ ಮೆಂಡೋನ್ಸಾ, ಫಾರ್ಚುನ್ ಗ್ರೂಪ್ ಅಫ್ ಹೋಟೆಲ್ ನ ಮಾಲಿಕರಾದ ರವೀಶ್ ಗೌಡ ಹಾಗೂ ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು. ಯು.ಇ.ಎ.ಎಕ್ಸ್ ಚೆಂಜ್ ನ ಸಂಸ್ಥಾಪಕ ಸುಧೀರ್ ಶೆಟ್ಟಿ, ಸ್ವಿಸ್ ಅರೆಬಿಯನ್ ನ ಶಿವಾನಾಂದ ಹೆಬ್ಬಾರ್ ಕಾರ್ಯಕ್ರಮಕ್ಕೆ ಶುಭ ಕೊರಿದರು.
ಕಾರ್ಯಕ್ರಮವನ್ನು, ಅನಂತ್, ಮಧುಸೂದನ್ ಹಾಗೂ ರಾಮ್ ಪ್ರಸಾದ್ ನಿರೂಪಿಸಿ , ಗುರುರಾಜ್ ಪುತ್ತೂರ್, ಶ್ರೀಧರ್ ಲಾಡೆ, ಸಂಪತ್ ಶೆಟ್ಟಿ, ಸರಳಾ ರಘುನಾಥ್, ಸೋನಿ ಗುರುರಾಜ್, ಕುಸುಮಾಕ್ಷಿ ರಾವ್, ಲತಾ ಹೆಗ್ದೆ, ಸಂತೊಷ್ ಪೂಜಾರಿ, ಅನಂದ್ ಬೈಲೂರ್, ಸದನ್ ದಾಸ್, ಮುರ್ಗೆಶ್ ಗಾಜರೆ, ಸತೀಶ್ ಪೂಜಾರಿ, ಗಣೇಶ್ ಕುಲಾಲ್, ಪದ್ಮರಾಜ್ ಎಕ್ಕಾರ್ ಮುಂತಾದವರು ಹಿನ್ನೆಲೆಯಲ್ಲಿ ಸಹಕರಿಸಿದ್ದರು. ಕಾರ್ಯದರ್ಶಿ ಮಧುಸೂದನ್ ವಂದಿಸುವುದರೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.