ಯುಕೆ ಕನ್ನಡ ಬಳಗದ 2010 ದೀಪಾವಳಿ ಕಾರ್ಯಕ್ರಮ

ಈಶಾನ್ಯದಲ್ಲಿ "ಈ ಪರಿಯ ಸೊಬಗು"?: ಅಲ್ಲಿಗೆ ಬರುವ ಮುಂಚೆಯೇ ಕೆಲವರು "ಎಲ್ಲ ಬಿಟ್ಟು ಆ ಮೂಲೆಯಲ್ಲಿ ಯಾಕೆ ಇದನ್ನು ಇಟ್ಟುಕೊಂಡಿದ್ದಾರೆ? ಬೇರೆ ಕಡೆ ನಮಗೆ ಹತ್ತಿರದಲ್ಲಿ ಮಾಡಬಾರದೇ?" ಎಂದು ಮೂಗು ಮುರಿದದ್ದುಂಟು. ಆದರೆ ಆ ಚಿಂತೆಗೆ ಕಾರಣವಿದ್ದಿರಲಿಲ್ಲ. ಅಷ್ಟು ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆದುದು ಸ್ಥಳೀಯ ಕಾರ್ಯಕರ್ತರ ಹಗಲಿರುಳು ದುಡಿದ ಪರಿಶ್ರಮದ ಫಲವೆನ್ನಬೇಕು.
ಇಂಗ್ಲೆಂಡಿನ ಈಶಾನ್ಯ ಪ್ರದೇಶವಾದ Geordielandನ ನ್ಯೂಕಾಸಲ್, ಡಾರ್ಲಿಂಗಟನ್ ಮತ್ತು ಟೀಸೈಡ ಅಕ್ಕಪಕ್ಕದಲ್ಲಿ ಕನ್ನಡ ಸಮುದಾಯದ ವಾಸವಿದೆ. ಯಾಮ್, ಸ್ಟಾಕ್ಟನ್ ನಂತರ ಮಿಡಲ್ಸ್ ಬರಾ, ಉಕ್ಕು, ರೇಲ್ವೆ ಮತ್ತು ಹಡಗು ಕಟ್ಟುವುದಕ್ಕೆ ಒಂದು ಕಾಲಕ್ಕೆ ಪ್ರಸಿದ್ಧವಾದ ಈ ಊರಿನ ಚಿಹ್ನೆ ಸಾಗಾಣಿಕೆಯ ಸೇತುವೆ (Transporter Bridge). ದೀಪಾವಳಿಯ ಕರೆಯೋಲೆಯಲ್ಲಿ ಅದರ ಚಿತ್ರ ನೋಡಿದ್ದೀರಿ.
ಇಂದಿನ ಕನ್ನಡ ಬಳಗ ಎರಡು ಸಂಸ್ಕಾರಗಳ, ಎರಡು ತಲೆಮಾರಿನ ಸೇತುವೆಯಾದಂತೆ ಹುಮ್ಮಸಿನಿಂದ ಕಾರ್ಯಕ್ರಮಗಳ ನೇತೃತ್ವ ಹೊತ್ತ ಯುವಕರೂ ಅದರ ಪ್ರತೀಕವಾಗಿದ್ದರು. ಆಗಂತುಕರನ್ನು ಆದರದಿಂದ ಸ್ವಾಗತಿಸಿದ್ದೇ ಅಲ್ಲದೆ ಉತ್ಸಾಹದಿಂದ ಮತ್ತು ಅತ್ಯಂತ ಆತ್ಮವಿಶ್ವಾಸದಿಂದ ನಿರೂಪಣೆಯನ್ನೂ (compere) ಮಾಡಿದ ನಮ್ಮ ಯುವಪೀಳಿಗೆಯ ಪ್ರತಿಭೆಗೆ (ಅನಿಕೇತ, ಪ್ರಿಯ, ಚೇತನ,ಮುಂತಾದವರು) ತಲೆದೂಗಿದವರು, ನಾವಷ್ಟೇ ಅಲ್ಲ, ಅಂದು ಮುಖ್ಯ ಅತಿಥಿಗಳಾಗಿ ಬಂದ ಪ್ರೊ. ಗ್ರಹಾಮ್ ಹೆಂಡರ್ಸನ್ ಸಹ.
ಹಚ್ಚೇವು ಕನ್ನಡದ ದೀಪ: ಪ್ರಾರ್ಥನೆಯ ನಂತರ ಮುಖ್ಯ ಅತಿಥಿಗಳಾಗಿ ಬಂದ ಕನ್ನಡಿಗರೇ ಆದ ಭಾರತದ ಉಪರಾಯಭಾರಿ ಗುರುರಾಜರಾವ ಅವರು, ಟೀಸೈಡ್ ವಿಶ್ವವಿದ್ಯಾಲಯದ ವ್ಹೈಸ್ ಛಾನ್ಸಲರ್ ಹೆಂಡರ್ಸನ್ ಮತ್ತು ಕರ್ನಾಟಕ ಸರ್ಕಾರದ ಮಾಹಿತಿ ಇಲಾಖೆಯ ನಿರ್ದೇಶಕ ಮತ್ತು ಗಾಯನ ಪಟು ಮುದ್ದುಮೋಹನರವರ ಜೊತೆಯಾಗಿ ದೀಪ ಬೆಳಗಿ ದಿನದ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು. ವೇದಿಕೆಯ ಮೇಲೆ ಇವರಲ್ಲದೆ ನಮ್ಮ ಅಧ್ಯಕ್ಷೆ ಸುರೇಣು ಜಯರಾಂ, ಮುತ್ತು ಪುರಾಣಿಕ, ಆನಂದ ನಾಡಗೀರರಲ್ಲದೆ ಕಾರ್ಯದರ್ಶಿ ಮೋಹನ ಅರ್ಕಾನಾಥರು ಉಪಸ್ಥಿತರಾಗಿದ್ದರು.
ಎಲ್ಲರ ಸ್ವಾಗತದನಂತರ ನಮ್ಮನ್ನು ಅಗಲಿದ ಬಳಗದ ಸದಸ್ಯ, ಆಜೀವ ಸದಸ್ಯ, ಸಂಸ್ಥಾಪಕ ಸದಸ್ಯರ ಸ್ಮರಣಾರ್ಥ ಮೌನವಾಚರಿಸಿದ ನಂತರ ಮನರಂಜನ ಕಾರ್ಯಕ್ರಮಗಳು ಒಂದರ ಹಿಂದೆ ಒಂದಾಗಿ ಇತಿಹಾಸ ಪ್ರಸಿದ್ಧ ಸ್ಟಾಕ್ಟನ್-ಡಾರ್ಲಿಂಗ್ಟನ್ ರೇಲ್ವೆ ಡಬ್ಬಿಗಳಂತೆ ಪ್ರಸ್ತುತವಾದವು. ಇದಕ್ಕೆ ಮೊದಲು ರಾಜ್ಯೋತ್ಸವವನ್ನು ನೆನಪಿಸಿ ರಾಷ್ಟ್ರಕವಿ ಕುವೆಂಪು ವಿರಚಿತ "ಜಯ ಭಾರತ ಜನನಿಯ ತನುಜಾತೆ " ಗೀತೆಯನ್ನು ವೇದಿಕೆಯ ಮೇಲಿಂದಲೇ ಅತ್ಯಂತ ಭಾವಪೂರ್ಣವಾಗಿ ಹಾಡಿ ಮುದ್ದುಮೋಹನ ಅವರು ನಮ್ಮನ್ನೆಲ್ಲ ಮುದಗೊಳಿಸಿದರು.
ಸಮೃದ್ಧವಾದ ಸ್ಥಳೀಯ ಪ್ರತಿಭೆಯಿರುವಾಗ: ಈ ಪ್ರದೇಶದ ಮಣ್ಣಿನ ಗುಣವೆನ್ನಿ ಅಥವಾ ಯುವ ಕಲಾವಿದರ ಪರಿಶ್ರಮವೆನ್ನಿ, ತಾವು ಪ್ರಸ್ತುತ ಪಡಿಸಿದ ಹಾಡು, ನೃತ್ಯ, ಕೋಲಾಟಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದರು. ಶುರುವಿಗೆ ಸ್ವಲ್ಪವೂ ಸಭಾಕಂಪವಿಲ್ಲದೆ ದೀಪಾವಳಿಯ ಮಹಾತ್ಮೆಯನ್ನು ತನ್ನ ಸವಿ ನುಡಿಗಳಲ್ಲಿ ಹೇಳಿದ ಕಿಶೋರ ತರುಣ್ ಕಿಣಗಿಯಿಂದ ಹಿಡಿದು, ಭಗವದ್ಗೀತೆಯ ಅಧ್ಯಾಯವೊಂದನ್ನು ಒಂದೇ ಉಸಿರಿನಲ್ಲಿ ನೀರುಕುಡಿದಂತೆ ಒಪ್ಪಿಸಿದ ಅದಿತಿ, ನಾಟ್ಯ ಪಟುಗಳಾದ ವಿದ್ಯಾ, ಮಾಯಾ, ರಶ್ಮಿ, ಅಪೂರ್ವ, ಚೇತನ ಮುಂತಾದವರೆಲ್ಲ ಇರುವಾಗ ಹೊರಗಿಂದ ಬರುವ ಅಥವಾ ವೃತ್ತಿಪರ ಕಲಾವಿದರಿಗೆ (ವ್ರತಾ, ಮುದ್ದುಮೋಹನ) ಸಮಯ ಮತ್ತು ಪಕ್ಕವಾದ್ಯದ ಅಭಾವದಿಂದ ಸ್ವಲ್ಪ ತೊಂದರೆಯಾಯಿತೇನೋ.
ಆದರೆ ಇಷ್ಟೊಂದು ವೈವಿಧ್ಯತೆಯಿರುವಾಗ ವ್ಯವಸ್ಥಾಪಕರ ಔದಾರ್ಯದಿಂದಾಗಿ ರಸದಲ್ಲಿ ವಿರಸ ಬರಲಿಲ್ಲ, ಚೈತನ್ಯದ ಬ್ರೇಕ್ ಡಾನ್ಸಿನಂತೆ ಮುರಿಯಲಿಲ್ಲ! ವಯಸ್ಸಿನಲ್ಲಿ ಎರಡರಿಂದ ಇಪ್ಪತ್ತರವರು ಭಾಗವಹಿಸಿದ ಫ್ಯಾಷನ್ ಶೋ (ಕೆಲವರಿಗೆ ಒಗ್ಗದಿದ್ದರೂ) ಅಂದಯಾಗಿತ್ತು; ಆದರೆ Catwalkನ ವಯ್ಯಾರ ಬೆಕ್ಕಿನ ಚಿನ್ನಾಟವೆ?
ಕಪ್ಪು-ಬಿಳುಪು: ಈ ದಿನದ ಕಾರ್ಯಕ್ರಮವನ್ನು ಪ್ರಸ್ತುತಗೊಳಿಸಿದ ಕೆಲವು ಕನ್ನಡ ಯುವಕರು KB UK ಹುಟ್ಟಿದಾಗ ಹುಟ್ಟಿರಲಿಕ್ಕಿಲ್ಲ. ಈ ಆಂಗ್ಲನಾಡಿಗೆ ಬಂದ ಹಿಂದಿನ ತಲೆಮಾರಿನವರು ಕಪ್ಪು-ಬಿಳುಪು ಸಿನೇಮಾ ಯುಗದವರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯರ ಅಭಿನಯ-ಕುಣಿತಗಳಿಗೂ ಮೊದಲು ನರ್ತಿಸಿದ ಯುವಕರ ಕಲೆಗೂ ಕಪ್ಪು-ಬಿಳುಪಿನ ಅಂತರವಿತ್ತು! ಅದನ್ನು ನೋಡಿದ ಹಿರಿಯರಿಗೆ ಹಿಡಿಸಲಾರದ ಹಿಗ್ಗು; ಕಿರಿಯರಿಗೋ ಮುಜುಗರ, ಧರ್ಮಸಂಕಟ! ಇಲ್ಲಿಯವರೆಗೆ ಸಲೀಸಾಗಿ ನಡೆದುಬಂದ technical system ಈಗ ಸ್ವಲ್ಪ ತಡವರಿಸಿತು.
ಎಸ್ಟನ್ ಸ್ಪೋರ್ಟ್ಸ್ ಅಕಾಡಮಿ ಹಾಲ್ನ ವ್ಯವಸ್ಥೆ, sound and light system ಇವೆಲ್ಲ ಉಚ್ಚ ಮಟ್ಟದ್ದಾಗಿತ್ತು. ಊಟ, ತಿಂಡಿ-ತೀರ್ಥ(!)ಗಳೂ ಎಲ್ಲರ ಮೆಚ್ಚುಗೆ ಗಳಿಸಿದವು.Three cheers to the organisers! ಒಂದು ಕಡೆ ಮಾಮೂಲಿನಂತೆ ಮಕ್ಕಳಿಗೆ ಮುಖ ಪೇಯಿಂಟಿಂಗ್, ತಿಂಡಿಗಳ ಸ್ಟಾಲುಗಳು, ಚಿತ್ರಪ್ರದರ್ಶನ, ಹೆಲ್ತ್ ಚೆಕ್ಅಪ್ ಇವೆಲ್ಲ ಇದ್ದವು. ರಾಫಲ್ ಮುಗಿಯುತ್ತಿದ್ದಂತೆ ಎಲ್ಲರ ಮೇಲೆ ದೀಪಾವಳಿಯ "ಪುಷ್ಪ ವೃಷ್ಟಿ" ಬೇರೆ! ಆ ನಂತರ ಎಂದಿನಂತೆ ಡಿಸ್ಕೋದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು.
ಮುಂದಿನ KB UK ಉಗಾದಿ ಹಬ್ಬ: ಮನೆಗೆ ಮರಳಿ ಬರುವಾಗ ನಾನು ಮದ್ದೂರಿನ (ಮಿಡಲ್ಸ್ ಬರಾ) ಸವಿಯನ್ನು ಮನದಲ್ಲಿ ಮೆಲಕು ಹಾಕುತ್ತಾ ಬಂದೆ. ಈಶಾನ್ಯ ದೇಶದಲ್ಲಿ ಒಂದು ಮನೆಮಾತಿದೆಯಂತೆ: "Yam was; Stockton is; Middlesbrough will be." ಅದೇ ಧಾಟಿಯಲ್ಲಿ ಹೇಳುವದಾದರೆ, Middlesbrough wa Cardiff will be. ಮುಂದಿನ ಏಪ್ರಿಲ್ 9 ರಂದು ನಿಮ್ಮನ್ನು ಕಾರ್ಡಿಫ್ ನಲ್ಲಿ ನೋಡುವಾ.
* ಶ್ರೀವತ್ಸ ದೇಸಾಯಿ
Kannada Balaga U.K.
Email:Shrivatsa Desai [email protected],











Click it and Unblock the Notifications