ಪೂಜೆಯೆಂದರೆ ಸತ್ಯನಾರಾಯಣ ಪೂಜೆಯಯ್ಯಾ
ಸಿಂಗಾಪುರದ ಕರ್ನಾಟಕ ವೈಭವ ಸಂಸ್ಥೆಯ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಆಗಸ್ಟ್ 15ನೇ ಭಾನುವಾರ ಬೆಳಿಗ್ಗೆ 8.30 ಗಂಟೆಗೆ ಶ್ರೀ ಪೆರುಮಾಳ್ ದೇವಾಲಯದಲ್ಲಿ ಏರ್ಪಡಿಸಲಾಗಿತ್ತು. ವಿಶೇಷವಾಗಿ ಕನ್ನಡಿಗರಿಗೋಸ್ಕರವಾಗಿ ಪ್ರತಿವರ್ಷವೂ ನಡೆಸಲಾಗುತ್ತಿರುವ ಈ ಕಾರ್ಯಕ್ರಮದಲ್ಲಿ 50 ಜೋಡಿ ದಂಪತಿಗಳು, ಮಕ್ಕಳು ಹಾಗೂ ಕುಟುಂಬವರ್ಗದವರೂ ಸೇರಿದಂತೆ ಸುಮಾರು 200 ಜನರು ಪಾಲ್ಗೊಂಡಿದ್ದರು. (ಗ್ಯಾಲರಿ ನೋಡಿರಿ) ತಮ್ಮ ಕೆಲಸದ ಅತಿಯಾದ ಒತ್ತಡದಲ್ಲಿಯೂ ಎಲ್ಲವನ್ನು ಮರೆತು ಸತಿಪತಿಗಳಿಬ್ಬರೂ ಮದುಮಕ್ಕಳಂತೆ ಸಾಂಪ್ರದಾಯಿಕ ಉಡುಗೆಯಲ್ಲಿ ಪೂಜೆಗೆ ಭಾಗವಹಿಸಿದ್ದುದು ಅದ್ಭುತವಾಗಿತ್ತು. ದೇವಾಲಯದ ಪುರೋಹಿತರು ಅತ್ಯಂತ ಅಚ್ಚುಕಟ್ಟಾಗಿ ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಅಧ್ಯಕ್ಷರಾದ ರಾಮಚಂದ್ರ ಹೆಗ್ಗಡೆರವರಿಂದ ಕನ್ನಡದಲ್ಲಿ ಶ್ರೀ ಸತ್ಯನಾರಾಯಣ ವೃತದ ಕಥೆಯ ಪೂರ್ಣ ವಿವರಣೆಯೊಂದಿಗೆ ಸಾಂಗವಾಗಿ ನೆರವೇರಿತು.
ಬಂದ ಅತಿಥಿಗಳಿಗೆ ಅಚ್ಚುಕಟ್ಟಾದ ಊಟದ ವ್ಯವಸ್ಥೆಯನ್ನು ಮಾಡಿದ್ದರು. ಮಹಾಪೂಜೆಯಾದ ನಂತರ ಪ್ರಸಾದ ರೂಪದಲ್ಲಿ ಬಣ್ಣವಿಲ್ಲದ ಕೇಸರೀಬಾತ್ನ ಹಾಗೆ ಕಾಣುವ ಸಪಾದ ಭಕ್ಷ್ಯವನ್ನು ಎಲ್ಲರಿಗೂ ವಿತರಿಸಲಾಯಿತು.
ವ್ರತದ ಮಹತ್ವ : ಭಾರತದ ಸನಾತನ ಆಚಾರವಿಚಾರಗಳಲ್ಲಿ ಪೂಜೆ-ಪುನಸ್ಕಾರ, ವ್ರತಾಚರಣೆಗಳಿಗೆ ವಿಶೇಷ ಮಹತ್ವವಿದೆ. ಇಂತಹ ಆಚರಣೆಗಳು ಜನಕಲ್ಯಾಣಪರವಾಗಿರುತ್ತವೆ. ಧಾರ್ಮಿಕ ಆಚರಣೆಗಳಲ್ಲಿ ಪ್ರಮುಖವಾಗಿರುವ ವ್ರತ ಹಾಗೂ ಉಪವಾಸಗಳನ್ನು ಆಧುನಿಕ ತಲೆಮಾರಿನವರು ಗೊಡ್ಡು ಆಚರಣೆ ಎಂದು ಹೇಳಬಹುದಾದರೂ ಇದಕ್ಕೆ ವೈಜ್ಞಾನಿಕ ತಳಹದಿ ಇದೆ. ಉಪವಾಸ ಹಾಗೂ ವ್ರತಗಳು ದೈವ ಪ್ರೀತಿಗಾಗಿ ದೇಹದಂಡನೆಯ ವಿಧಾನಗಳು ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಆಚರಣೆಯಿಂದ ದೇಹ ಹಾಗೂ ಮನಸ್ಸು ಬಲಗೊಳ್ಳುತ್ತದೆ ಎಂಬುದಾಗಿ ಸಂಶೋಧನೆಗಳು ತಿಳಿಸಿವೆ. ಉಪವಾಸ ಕಾಲದಲ್ಲಿ ದೇಹದ ಅಂತರವಯವಗಳು ಶುಚೀಕರಣ ಕಾರ್ಯ ನಡೆದರೆ, ವ್ರತಗಳು ಮನಸ್ಸನ್ನು ಶುಚಿಗೊಳಿಸುತ್ತವೆ. ಚಂಚಲವಾಗಿರುವ ಮನಸ್ಸನ್ನು ಏಕಾಗ್ರತೆಗೊಳಿಸಲು ಇಂತಹ ವ್ರತಗಳಿಂದ ಮಾತ್ರ ಸಾಧ್ಯ. ಜೊತೆಗೆ ವ್ಯಕ್ತಿಯ ಮನಃಸ್ಥೈರ್ಯ ವೃದ್ಧಿಸುತ್ತದೆ. ಮನೋಬಲವಿಲ್ಲದ ವ್ಯಕ್ತಿಯಿಂದ ಯಾವ ಸಾಧನೆಯೂ ಅಸಾಧ್ಯ. ಆದುದರಿಂದಲೇ ಕರ್ನಾಟಕವೈಭವ ಕಳೆದ 5 ವರ್ಷಗಳಿಂದಲೂ ಸಿಂಗಪುರದ ಕನ್ನಡಿಗರಿಗೋಸ್ಕರ ಇಂಥದ್ದೊಂದು ಪವಿತ್ರ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಸಿಂಗಪುರದ ಕನ್ನಡಿಗರೆಲ್ಲಾ ಒಂದೆಡೆ ಕಲೆತು ಕನ್ನಡತನದ ಸುಗಂಧವನ್ನು ಪಸರಿಸಲು ಇಂತಹ ಧಾರ್ಮಿಕ ಕಾರ್ಯಕ್ರಮವು ಸಹಕಾರಿಯಾಗುತ್ತದೆ ಎನ್ನುವುದು ಒಂದು ವಿಶೇಷ!
ನಾರಾಯಣಾ
ನಿನ್ನ
ನಾಮದ
ಬೀಜವ
|
ನಾನೆಲ್ಲಿ
ಬಿತ್ತಿ
ಬೆಳೆಯಲಿ|
ನಿನ್ನ
ನಾಮ
ನಾಲೀಗಿ
ಮೇಲೆ
ಬೆಳೆದೇನೊ|