ಯುಎಇ ಸಮ್ಮೇಳನ ಲಾಂಛನ ಬಿಡುಗಡೆ
ಲಾಂಛನ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅವರು ವಹಿಸಿದ್ದರು. ಧ್ವನಿ ಪ್ರತಿಷ್ಠಾನದ ಬೆಳ್ಳಿ ಹಬ್ಬದ ಆಚರಣೆಯ ಅಂಗವಾಗಿ ಕನ್ನಡ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸಮಾರಂಭದಲ್ಲಿ ಸ್ವಾಗತ ಭಾಷಣ ಮಾಡಿದ ಪ್ರತಿಷ್ಠಾನ ಬಳಗದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಅವರು ಧ್ವನಿ ನಡೆದು ಬಂದ ದಾರಿಯ ಸಿಂಹಾವಲೋಕನ ಮಾಡಿದರು. ಸಮ್ಮೇಳನ ಯಶಸ್ವಿಗೊಳಿಸಲು ಮಧ್ಯಪ್ರಾಚ್ಯದಲ್ಲಿರುವ ಸಕಲ ಕನ್ನಡ ಸಂಘ ಸಂಸ್ಥೆಗಳ ಸಹಕಾರವನ್ನು ಅವರು ಕೋರಿದರು.
ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ನೋವೆಲ್ ಅಲ್ಮೇಡಾ, ದುಬೈ ಕನ್ನಡ ಕೂಟದ ಅಧ್ಯಕ್ಷ ಅರುಣ್, ಗಲ್ಫ್ ಕನ್ನಡಿಗದ ಬಿ.ಜಿ. ಮೋಹನದಾಸ್, ಬಿಲ್ಲವ ಬಳಗದ ಮೋಹನ್ ಅತ್ತಾವರ, ಮಂಗಳೂರು ಕೊಂಕಣ್ಸ್ ಅಧ್ಯಕ್ಷ ಸಂತೋಷ್, ಉದ್ಯಮಿ ಜೇಮ್ಸ್ ಮೆಂಡೊನ್ಸಾ, ಸಾಹಿಲ್ ಅಂತರ್ಜಾಲದ ಅರ್ಶದ್ ಹುಸೇನ್ ಮುಂತಾದವರು ಉಪಸ್ಥಿತರಿದ್ದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಸುಂದರವಾದ ಲಾಂಛನ ರಚಿಸಿದ ಕಲಾವಿದ ಬಿ.ಕೆ.ಗಣೇಶ್ ರೈ ಅವರಿಗೆ ಹೂ ಗುಚ್ಚ ನೀಡಿ ಗೌರವಿಸಲಾಯಿತು.ಧ್ವನಿ ಪ್ರತಿಷ್ಠಾನದ ಕೋಶಾಧಿಕಾರಿ ಆನಂದ ಬೈಲೂರ್, ಸಲಹೆಗಾರ ಜಯರಾಂ ಸೋಮಯಾಜಿ ಹಾಗೂ ಕಾರ್ಯದರ್ಶಿ ಮಧುಸೂಧನ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವೇದಿತ ಅರವಿಂದರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಸಮಾರಂಭ ಅರ್ಥರ್ ಪಿರೇರಾ ವಂದಿಸುವುದರೊಂದಿಗೆ ಮುಕ್ತಾಯವಾಯಿತು.