Get Updates
Get notified of breaking news, exclusive insights, and must-see stories!

ನಕ್ಕರು,ನಗುನಗುತಾ ದಿನಾರ್ ಕೊಟ್ಟರು

ಉತ್ತರಕರ್ನಾಟಕದ ನೆರೆ ಸಂತ್ರಸ್ಥರ ಪರಿಹಾರ ನಿಧಿಗಾಗಿ 'ನಾವು ನಮ್ಮ ಕನ್ನಡ' ದುಬೈ ಯು.ಎ.ಇ. ಇದೇ ಡಿಸೆಂಬರ್ 4 ಶುಕ್ರವಾರ ದುಬೈ ನ ಜೆ.ಎಸ್.ಎಸ್ ಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ ಪ್ರಪ್ರಥಮಬಾರಿ ಆಧುನಿಕ "ಬೀಚಿ" ಪ್ರಾಣೇಶ್ ಹಾಗೂ ರವಿ ಭಜಂತ್ರಿ ಅವರ ಹಾಸ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಕೇವಲ ಒಂದು ವರ್ಷದಲ್ಲಿ ಸುಮಾರು 11 ದೇಶಗಳಲ್ಲಿ ಸುತ್ತಾಡಿ ತಮ್ಮಹಾಸ್ಯಲಹರಿಯನ್ನು ಹರಿಸಿರುವ ಪ್ರಾಣೇಶ್, ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಬಾಗಲಕೋಟೆಯಲ್ಲಿ ಪರಿಚಯವಾಗಿ, ಪ್ರಪ್ರಥಮವಾಗಿ ವಿದೇಶಿ ನೆಲದಲ್ಲಿ ಹಾಸ್ಯ ಕಾರ್ಯಕ್ರಮಕ್ಕೆ ಅವಕಾಶಕ್ಕೆ ಕಾರಣೀಭೂತರಾದ ದುಬೈ ನ ಕವಿ ಈರಣ್ಣ ಮೂಲೀಮನಿ ಅವರಿಗೆ ಕೃತಜ್ಞತೆ ಅರ್ಪಿಸಿದರು. ನಂತರ ತಮ್ಮ ಅಭಿಮಾನಿ, ಶಿಷ್ಯ ರವಿ ಭಜಂತ್ರಿಯವರ ಸಾಧನೆ ಕುರಿತು ಮೆಚ್ಚುಗೆಯ ಮಾತನಾಡುತ್ತಾ ಅಂದಿನ ಹಾಸ್ಯದ ರಸದೌತಣ ಉಣಬಡಿಸುವ ಮೊದಲ ಆದ್ಯತೆ ತಮ್ಮ ಶಿಷ್ಯ ರವಿ ಭಜಂತ್ರಿಯವರಿಗೆ ನೀಡಿದರು.

ಮೊದಲ ಬಾರಿ ವಿದೇಶದ ಕಾರ್ಯಕ್ರಮಕ್ಕೆ ಅವಕಾಶವಿತ್ತ "ನಾವು ನಮ್ಮ ಕನ್ನಡ"ದುಬೈ ಯು.ಎ.ಇ. ಸಂಘ‌ಟನೆಗೆ ತಮ್ಮ ಕೃತಜ್ಞತೆಯೊಂದಿಗೆ ತಮ್ಮ ನವಿರಾದ ಹಾಸ್ಯ ಆರಂಭಿಸಿದ ರವಿ ಭಜಂತ್ರಿಯವರು ನೆರೆದ ಕನ್ನಡಿಗರೆಲ್ಲರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದರು.ಅದ್ಭುತ ಕಂಚಿನಕಂಠಸಿರಿಯಿಂದ ಮದುವೆಯಾಗುವ ಮುನ್ನ,ಮದುವೆಯಾದ ನಂತರ ವೇದನೆ,ಸಂವೇದನೆಗಳನ್ನು ಸ್ವತಃ ಅನುಭವಿಸಿದಂತೆ ಹಾಡಿದ"ಅನಿಸುತಿದೆ ಯಾಕೋ ಇಂದು..? ನೀ..ನೇನಾ..ಆ...ಎಂದು"ಎಂದು ತಮ್ಮ ಪತ್ನಿಯನ್ನು ಅಣಕಿಸುವ ಹಾಡನ್ನು ಹಾಡಿದಾಗ ಸೇರಿದ ಜನ ಕೇಕೇ ಹಾಕಿ ನಕ್ಕಿತು.

ಆ ನಂತರದ ಹಾಸ್ಯದ ಹೊನಲಲ್ಲಿ ತೇಲಿಸಿದ ಆ ಎಸ್.ಎಮ್.ಎಸ್ ಜೋಕ್ ಮರೆಯಲಾದೀತೆ? ಓರ್ವ ತನ್ನ ಸ್ನೇಹಿತನಿಗೆ ಫೋನಿನಲ್ಲಿ ಹೇಳುತ್ತಾನೆ " ನೋಡಪ್ಪಾ ಜೂನ್ 2 ನೇ ತಾರೀಖಿಗೆ ನನ್ನ ಮದುವೆ ಇದೆ. ಫರ್ಸ್ಟ್ ನೈಟಿಗೇ ಬಂದು ಬಿಡು" ಇಲ್ಲಿ ಫರ್ಸ್ಟ್ ನೈಟ್ ಅಂದರೆ ಮಧುಚಂದ್ರ ಎಂದರ್ಥವಲ್ಲ, ಜೂನ್ ಒಂದನೆಯ ತಾರೀಖಿನಂದೇ ಬಂದುಬಿಡು ಎಂದರ್ಥ.

ಅನಂತರ ಉತ್ತರರ್ನಾಟಕದ ಗಂಡು ಭಾಷೆಯಲ್ಲಿ ತುಸು ಖಾರವಾಗಿಯೆ ಹಾಸ್ಯ ಆರಂಭಿಸಿದ ಪ್ರಾಣೇಶ್ ಕನ್ನಡ ಭಾಷೆಯ ಮಹತ್ವ "ಅ" ಮತ್ತು "ಹ" ಕಾರ ಪ್ರಯೋಗ ಖ್ಯಾತನಟರುಗಳಿಗೆ ಯಾಕೆ ಅರಿವಾಗುತ್ತಿಲ್ಲ. ತದ ನಂತರ ದುಬೈನ ಮಕ್ಕಳಲ್ಲಿರುವ ಆ ಇಂಗ್ಲೀಶ್ ವ್ಯಾಮೋಹವನ್ನು ಸ್ವಲ್ಪ ಕಡಿಮೆ ಮಾಡಿ ಕನ್ನಡವನ್ನು ಕಲಿಸಿ ಕನ್ನಡ ಭಾಷಾ ಪ್ರೇಮವನ್ನು ಮಕ್ಕಳಲ್ಲಿ ಬೆಳೆಸಬೇಕೆಂದು ಕೇಳಿಕೊಂಡರು.

ಕನ್ನಡಿಗರನ್ನು ಪದೇ ಪದೇ ಕಾಡುತ್ತಿರುವ ಪರ ಭಾಷಾ ವ್ಯಾಮೋಹ ಕುರಿತು ಬೇರೆ ಭಾಷೆಗಳು ಕಿಟಕಿಗಳಾದರೂ,ಮನೆ ಹೆಬ್ಬಾಗಿಲು ಮಾತ್ರ ಕನ್ನಡವಾಗಿರಲಿ ಎಂದು ಕೇಳಿಕೊಂಡರು. ನಂತರ ಹಾಸ್ಯ ಎಂದರೇನೆಂಬುದೇ ಗೊತ್ತಿರದ ಸಾಫ್ಟ್ ವೇರ್ ಇಂಜನೀಯರುಗಳ ಪರಿಸ್ಥಿತಿ ಅವರನ್ನು ಮದುವೆಯಾದ ಹೆಣ್ಣುಮಕ್ಕಳ ಬಗ್ಗೆ ಕಳಕಳಿಯನ್ನು ತೋಡಿಕೊಂಡರು.

ಕನ್ನಡಾಭಾಷೆಯಲ್ಲಿ ಕೇವಲ ಒಂದೇ ಒಂದು ಅಕ್ಷರ ಬಿಡಿಸಿ ಓದಿದಾಗ ಆಗುವ ಪ್ರಮಾದಗಳನ್ನು ತಮ್ಮ ನವಿರಾದ ಹಾಸ್ಯದ ಮೂಲಕ ವಿಷದಪಡಿಸಿದರು.ಅದು ಹೀಗಿದೆ :

"ಜಾತ್ರೆಯಲ್ಲಿ ಎಳೆಯುವ ತೇರು ಚೆನ್ನ"ಎಂಬ ವಾಕ್ಯ ಬಿಡಿಸಿದಾಗ- ಹಿರಿಯರಿಗೆ ಏನೂ ಅನ್ನಿಸದು. ಆದರೆ "ಜಾತ್ರೆಯಲ್ಲಿ ಎಳೆ ಯುವತೆ ರು ಚೆನ್ನ"ಎಂದು ಬಿಡಿಸಿ ಓದಿದಾಗ ಯುವಕರಿಗೆ ಕಚಗುಳಿ ಇಡುವುದಂತೂ ಖಚಿತ.

ವಿಭಿನ್ನ ರೀತಿಯ ನವಿರುಹಾಸ್ಯದೊಂದಿಗೆ ಇಂದಿನ ಶಿಕ್ಷಣದ ವ್ಯವಸ್ಥೆ ಕುರಿತು ಕಟುವಾಗಿ ಟೀಕಿಸಿದರು ಪರೀಕ್ಷೆಯಲ್ಲಿ ಫೇಲಾದ ಯುವಕ, ಯುವತಿಯರ ಆತ್ಮಹತ್ಯೆಗೆ ಶರಣು ಹೋಗುತ್ತಿರುವದನ್ನು ಕಂಡು ಮರುಕ ವ್ಯಕ್ತ ಪಡಿಸಿದರು. ಈ ಉಚ್ಚರೀತಿ ಮಾರ್ಕ್ಸ್ ತೆಗೆಯುವ ಯಂತ್ರಗಳಾಗದೇ ಸಾಮಾನ್ಯಜ್ಞಾನದ ಪ್ರಜ್ಞೆ ಗಳಿಸಿಕೊಳ್ಳಬೇಕು ಎನ್ನುವುದಕ್ಕೆ "ಗುರವ"ನ ಹಾಸ್ಯಚುಟುಕು ಹೇಳಿ ನಗೆಗಡಲಲ್ಲಿ ತೇಲಿಸಿದರು.ಒಟ್ಟಾರೆ ಹೇಳಬೇಕಂದರೆ ಪ್ರಾಣೇಶ್ ನಗಿಸುತ್ತಲೇ ಬದುಕಿನ ಸೂಕ್ಶ್ಮತೆಗಳ ಅರಿವನ್ನು ಮೂಡಿಸಿದರೆಂದರೆ ತಪ್ಪಾಗಲಿಕ್ಕಿಲ್ಲ. ನಾಡಿನ ಇಂಥ ಅದ್ಭುತ ಹಾಸ್ಯಚಕ್ರವರ್ತಿಗಳು ಎರಡನೇಬಾರಿ ದುಬೈಗೆ ಬರಲು ಕಾರಣೀಭೂತರಾದ ಮಲ್ಲಿಕಾರ್ಜುನ ಮುಳ್ಳೂರು ಹಾಗೂ "ನಾವು ನಮ್ಮ ಕನ್ನಡ"ದುಬೈ ಸಂಘ‌ಟನೆ ನಿಜವಾಗಲೂ ಅಭಿನಂದನಾರ್ಹರು.

ಪ್ರಾಣೇಶ್ ರಿಗೆ ಜೆ.ಎಸ್.ಎಸ್ ನ ಪ್ರಾಂಶುಪಾಲರಾದ ಶ್ರೀಮತಿ ಗೀತಾ ಬಸವರಾಜ್ ಪುಷ್ಪಗುಚ್ಚ ಅರ್ಪಿಸಿದರೆ, ಗಿರೀಶ್ ಪಾಟೀಲ್ "ನಾವು ನಮ್ಮ ಕನ್ನಡ" ದುಬೈ ವತಿಯಿಂದ ಹಾಸ್ಯ ಚಕ್ರವರ್ತಿ ಶ್ರೀ ರವಿ ಭಜಂತ್ರಿ ಅವರಿಗೆ ಪುಪ್ಷಗುಚ್ಚ ಅರ್ಪಿಸಿದರು.ಪ್ರಾಣೇಶ್ ರಿಗೆ ಶಿವಾನಂದ ಚಳ್ಳಮರದ ಅವರು ಸ್ಮರಣಿಕೆ ಅರ್ಪಿಸಿದರೆ, ಮುರುಗೇಶ್ ಗಾಜರೆ ಅವರು ರವಿ ಭಜಂತ್ರಿ ಅವರಿಗೆ ಸ್ಮರಣಿಕೆ ಅರ್ಪಿಸಿದರು.

ಕೊನೆಯದಾಗಿ ಶ್ರೀಮತಿ ಆಶಾರಾಣಿಯವರು ಈ "ಹಾಸ್ಯೋತ್ಸವ"ಕಾರ್ಯಕ್ರಮ ಯಶಸ್ವಿಯಾಗಲು ಶ್ರಮಿಸಿದ "ನಾವು ನಮ್ಮ ಕನ್ನಡ"ದುಬೈನ ಎಲ್ಲಾ ಕಾರ್ಯಕರ್ತರುಗಳಿಗೆ, ಮುಖ್ಯ ಪ್ರಾಯೋಜಕರುಗಳಿಗೆ, ಭವ್ಯ ಪ್ರಾಂಗಣವಿತ್ತು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಜೆ.ಎಸ್.ಎಸ್ ಸ್ಕೂಲ್ ನ ಬಳಗಕ್ಕೂ ಹಾಗೂ ನೆರೆದ ಕನ್ನಡಿಗರೆಲ್ಲರಿಗೂ ತಮ್ಮ ವೈಯಕ್ತಿಕ ಹಾಗೂ "ನಾವು ನಮ್ಮ ಕನ್ನಡ" ದುಬೈ ವತಿಯಿಂದ ವಂದನೆಗಳನ್ನು ಅರ್ಪಿಸಿದರು.

ಈ ಕಾರ್ಯಕ್ರಮದಲ್ಲಿ ಸಂಗ್ರಹವಾಗುವ ದೇಣಿಗೆಯನ್ನು ಮೈಸೂರಿನ ದ ಮೈಸೂರು ಸಿಟಿಜನ್ ಫೋರಂ' ಸಂಸ್ಥೆಗೆ ನೀಡಲಿದ್ದು ಸಕಲ ಸಂಗ್ರಹ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೆರವಾಗಲಿದೆ ಎಂದು "ನಾವು ನಮ್ಮ ಕನ್ನಡ"ದುಬೈ ಸಂಘ‌ಟನೆಯ‌ ಗಿರೀಶ್ ಪಾಟೀಲ್ ಹಾಗೂ ವಾಸುದೇವ ದೇವಗಿರಿ ತಿಳಿಸಿದ್ದಾರೆ.

ತಮ್ಮ ವೈವಿಧ್ಯಮಯ ಶೈಲಿಯ ನಿರೂಪಣೆಯೊಂದಿಗೆ ಆರಂಭಿಸಿದ ಶ್ರೀಮತಿ ಮೇಘಾ ಜ್ಯೋಶಿ ಹಾಗೂ ಶ್ರೀಮತಿ ರಶ್ಮಿ ಯವರು ಹಾಡಿದ ದೇವರ ಪ್ರಾರ್ಥನೆಯಿಂದ ಆರಂಭಗೊಂಡ ಹಾಸ್ಯೋತ್ಸವ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀನಾಥ್ ರಾಜಣ್ಣ ಹಾಗೂ ಶ್ರೀಮತಿ ಜ್ಯೋತಿ ಬಡ್ಡಿಯವರು ಹಾಸ್ಯಭರಿತವಾಗಿಯೆ ನಿರ್ವಹಿಸುತ್ತ ಮಧ್ಯೆ ಮಧ್ಯೆ ತಮ್ಮ ಹಾಸ್ಯಚಟಾಕಿಗಳಿಂದ ಸಭಿಕರ ಗಮನ ಸೆಳೆದರು.

ಹಾಸ್ಯೋತ್ಸವ ಕಾರ್ಯಕ್ರಮಕ್ಕೆ ನಾಡಿನಿಂದ ವಿಶೇಷವಾಗಿ ಆಹ್ವಾನಿತರಾದ ಪ್ರಾಣೇಶ್ ರ ಪರಿಚಯ ಸಾದರ ಪಡಿಸಿದ ಶ್ರೀಮತಿ ಆಶಾ ರಮೇಶ್ ಹಾಗೂ ಇನ್ನೋರ್ವ ಹಾಸ್ಯಚಕ್ರವರ್ತಿ ಎಂದೇ ಖ್ಯಾತರಾದ ರವಿ ಭಜಂತ್ರಿ ಯವರ ಪರಿಚಯವನ್ನು ಶ್ರೀಮತಿ ಸುಮಂಗಲಾ ಗಾಜರೆ ನಿರ್ವಹಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+