ಇಂಗ್ಲೆಂಡಿನಲ್ಲಿ ಸಿಹಿಕಹಿ ರಾಜ್ಯೋತ್ಸವ

ನಮ್ಮ ಕರ್ನಾಟಕದಲ್ಲಿ ಈಗಿನ ಪರಿಸ್ಥಿತಿ ಯಾವ ದೃಷ್ಟಿಕೋನದಲ್ಲಿ ನೋಡಿದರೂ ಸರಿಯಿದ್ದಂತಿಲ್ಲ. ಫಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಭಾರೀ ನೈಸರ್ಗಿಕ ಅನಾಹುತದಿಂದ ನಮ್ಮ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಚೇತರಿಸಿಕೊಂಡಿಲ್ಲ. ನೆರೆ ಪರಿಹಾರ ಕಾರ್ಯಗಳು ಅಲ್ಲಲ್ಲಿ ಆರಂಭವಾಗುತ್ತಿರುವ ಸುದ್ದಿಗಳನ್ನು ನಾವಿಲ್ಲಿ ಕುಳಿತು ಓದುತ್ತೇವಷ್ಟೆ. ಪ್ರವಾಹದ ಮಟ್ಟ ತಗ್ಗಿದರೂ ಸಂತ್ರಸ್ತರ ಬವಣೆ ತಪ್ಪಿಲ್ಲ. ಇಂಥ ಪರಿಸ್ಥಿತಿಯಲ್ಲಿಯೂ, ಆಂಗ್ಲ ನಾಡಿನ ಕನ್ನಡಿಗರಾದ ನಾವು ಈ ವರ್ಷದ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಬೇಕೆಂದು ಪಣ ತೊಟ್ಟಿದ್ದೇವೆ. ಕಾರಣ, ನೆರೆಯಿರಲಿ, ಪ್ರವಾಹವಿರಲಿ, ಭೂಕಂಪವಿರಲಿ ಎನೇ ಬರಲಿ ಒಗ್ಗಟ್ಟಿರಲಿ!ನಮ್ಮ ನಾಡು ಮತ್ತು ನುಡಿಯನ್ನು ಎಲ್ಲೆಡೆ ಎತ್ತಿ ಹಿಡಿಯುವುದಕ್ಕೆ ದ್ಯೋತಕವಾಗಿ ನಿಲ್ಲುವ ಕನ್ನಡ ರಾಜ್ಯೋತ್ಸವ ಆಚರಿಸುವ ವ್ರತವನ್ನು ನಾವು ತಪ್ಪಿಸುವುದೇ ಇಲ್ಲ.
ಇದೇ ನವೆಂಬರ್ 21 ರಂದು, ಶನಿವಾರದಂದು ರೆಡಿಂಗ್ ಮಹಾ ನಗರದಲ್ಲಿ, ಕನ್ನಡಿಗರು ಯು.ಕೆ ರಾಜ್ಯೋತ್ಸವ 2009 ಆಚರಣೆಯನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮಕ್ಕೆ ಕನ್ನಡ ನೆಲದ ಪ್ರತಿಭಾವಂತ ಗಾಯಕರಾದ ಶ್ರೀಮತಿ. ಸೀಮಾ ರಾಯ್ಕರ್ ಮತ್ತು ರವೀಂದ್ರ ಸರ್ಗಾವಿ ಆಗಮಿಸಿ ಇಲ್ಲಿಯ ಕನ್ನಡಿಗರನ್ನು ರಂಜಿಸಲಿದ್ದಾರೆ. ಅಷ್ಟೆ ಅಲ್ಲದೆ, ಇಲ್ಲಿನ ಸ್ಥಳೀಯ ಮಕ್ಕಳು ಮತ್ತು ಯುವಕರು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಸಿದ್ಧರಾಗಿದ್ದಾರೆ. ಇವೆಲ್ಲಕ್ಕೂ ಮುಕುಟ ಪ್ರಾಯದಂತೆ, ಈ ಕಾರ್ಯಕ್ರಮಕ್ಕೆ ನಮ್ಮೆಲ್ಲರ ನೆಚ್ಚಿನ ಕಲಾವಿದ ಹಾಗು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮತ್ತು ಅವರ ಬಾಳ ಸಂಗಾತಿ ಶ್ರೀಮತಿ. ಪದ್ಮಾ ಚಂದ್ರು ಆಗಮಿಸಿ ನಮ್ಮೆಲ್ಲರಿಗೂ ಮುದ ನೀಡಲಿದ್ದಾರೆ.
ನೆನಪಿಡಿ : ಸದ್ಯದ ಪರಿಸ್ಥಿತಿಯಲ್ಲಿ ಕನ್ನಡಿಗರು ಯು.ಕೆ ಈ ಕಾರ್ಯಕ್ರಮವನ್ನು ತನ್ನ ಆಡಂಬರ ಅಥವಾ ಪ್ರತಿಷ್ಠೆಗಾಗಿ ನಡೆಸುತ್ತಿಲ್ಲ. ಈ ರಾಜ್ಯೋತ್ಸವದ ಸಂಪ್ರದಾಯವನ್ನು ಆಂಗ್ಲ ನಾಡಿನಲ್ಲಿ 5 ಸಂವತ್ಸರಗಳ ಹಿಂದೆ ಬಿತ್ತಿ ಇನ್ನು ಮುಂದೆಯೂ ಹೆಮ್ಮರವಾಗಿ ಬೆಳೆಸುವ ಒಂದು ಆಶಾದಾಯಕ ಕನಸು ಕರಗಬಾರದೆಂಬ ನಿಲುವಿನಿಂದ ಈ ರಾಜ್ಯೋತ್ಸವದ ಆಚರಣೆಗೆ ಬದ್ಧವಾಗಿ ನಿಂತಿದೆ. ಇಷ್ಟೇ ಹೊರತು, ಯಾವುದನ್ನೂ ಅತಿರೇಕವಾಗಿ ವಿಜೃಂಭಿಸುವ ಇರಾದೆಯಂತೂ ಖಂಡಿತ ಇಲ್ಲ.
ನಿಮ್ಮೆಲ್ಲರ ಪ್ರೋತ್ಸಾಹ, ಸಹಕಾರ ಮತ್ತು ನೆರವಿನಿಂದ ಕೇವಲ ಒಳ್ಳೆಯ ಭೋಜನ, ಮನರಂಜನೆ ಮತ್ತು ರಾಜ್ಯೋತ್ಸವನ್ನಷ್ಟೇ ಅಲ್ಲ, ನಮ್ಮ ಕನ್ನಡ ನಾಡಿನ ಅನೇಕ ಪ್ರಾಂತ್ಯಗಳ ಮತ್ತು ಕನ್ನಡಿಗರ ಜೀವನವನ್ನು ಪುನರ್ನಿರ್ಮಾಣ ಮಾಡುವ ಸತ್ಕಾರ್ಯಕ್ಕೆ ನಮ್ಮನ್ನು ತೊಡಗಿಸಿಕೊಳ್ಳುವ ಬಗ್ಗೆ ವಿಚಾರ ವಿನಿಮಯವನ್ನೂ ಮಾಡೋಣ. ಬನ್ನಿ, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳೋಣ. ಹಾಗೆಯೇ ನಮ್ಮ ತಾಯ್ನಾಡಿನ ವತಿಯಿಂದ ನಮ್ಮನ್ನೆಲ್ಲಾ ರಂಜಿಸಲು ಆಗಮಿಸುತ್ತಿರುವ ಕಲಾವಿದರ ಮುಖದಿಂದ ಹೊರಡುವ ಸುಮಧುರ ನಾದದ ಜತೆಯಲ್ಲಿ ನಮ್ಮ ತಾಯ್ನಾಡಿನ ಮಹಾಜನತೆಯ ನೋವುಗಳನ್ನೂ ಹಂಚಿಕೊಳ್ಳೋಣ. ಜೈ ಕರ್ನಾಟಕ ಮಾತೆ.
* ಕನ್ನಡಿಗರು ಯು.ಕೆ ವತಿಯಿಂದ
* ಈ ಕಾರ್ಯಕ್ರಮಕ್ಕೆ ನೋಂದಾಯಿಸಲು ಇನ್ನು ಕೆಲವೇ ದಿನಗಳು ಉಳಿದಿವೆ.
* ಕಾರ್ಯಕ್ರಮಕ್ಕೆ ಭಾಗವಹಿಸಲು ಇಲ್ಲಿ ಕ್ಲಿಕ್ಕಿಸಿ











Click it and Unblock the Notifications