ಮಾ.9ರಿಂದ 9ದಿನ ಮುಂಬೈನಲ್ಲಿ ಹೊರನಾಡ ಕನ್ನಡಿಗರ ಸಮಾವೇಶ
ಹುಬ್ಬಳ್ಳಿ : ಮುಂಬಯಿ ಕರ್ನಾಟಕ ಸಂಘವು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ಒಂಬತ್ತು ದಿನಗಳ ಹೊರನಾಡ ಕನ್ನಡಿಗರ ಸಮಾವೇಶವನ್ನು ಆಯೋಜಿಸಿದೆ. ಈ ಮಹತ್ವದ ಸಮಾವೇಶವು ಮಾರ್ಚ್ 9ರಿಂದ 17ರವರೆಗೆ ಮುಂಬೈನಲ್ಲಿ ನಡೆಯಲಿದೆ.
‘ಕರ್ನಾಟಕ ಸರಕಾರದಿಂದ ತಾವು ಉಪೇಕ್ಷಿಸಲ್ಪಟ್ಟಿದ್ದೇವೆ’ ಎಂಬ ಹೊರನಾಡ ಕನ್ನಡಿಗರ ಆತಂಕವನ್ನು ಹೋಗಲಾಡಿಸಿ, ಅವರಿಗೆ ಆತ್ಮಸ್ಥೈರ್ಯ ತುಂಬಲು ಈ ಸಮಾವೇಶ ನಡೆಸಲಾಗುತ್ತಿದೆ. ಮಾತುಂಗದ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆಯಲಿರುವ ಈ ಸಮಾವೇಶದ ಅಧ್ಯಕ್ಷತೆಯನ್ನು ಖ್ಯಾತ ಸಾಹಿತಿ ಬಿ.ಎ. ಸನದಿ ಅವರು ವಹಿಸಲಿದ್ದಾರೆ.
ಸಮಾವೇಶದ ನಿಮಿತ್ತ ಹಲವು ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಗಳು ಮುಂಬಯಿಯ ಗೋರೆಗಾವ್, ಚಂಬೂರ್, ಥಾಣೆ ಮತ್ತಿತರ ಪ್ರದೇಶಗಳಲ್ಲಿ ನಡೆಯಲಿವೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಈ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮುಂಬಯಿಯಲ್ಲಿರುವ ಕನ್ನಡ ಸಂಘವು ಹಲವು ವರ್ಷಗಳಿಂದ ಕನ್ನಡದ ಸಾಹಿತಿ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಬಂದಿದ್ದು, ಈ ಸಂದರ್ಭದಲ್ಲಿ ಕರ್ನಾಟಕದ ಖ್ಯಾತ ಸಾಹಿತಿ - ಕಲಾವಿದರನ್ನು ಸನ್ಮಾನಿಸಲಾಗುವುದು ಎಂದು ವಿದ್ಯಾವರ್ಧಕ ಸಂಘದ ಮೂಲಗಳು ತಿಳಿಸಿವೆ.
(ಇನ್ಫೋ ವಾರ್ತೆ)