ಇಲಿನಾಯ್ನಲ್ಲಿ ಸಂಭ್ರಮದ ಗಣೇಶೋತ್ಸವ
ಅಂದು ಆಗಸ್ಟ್ 25, ಶನಿವಾರ. ಚೌತಿ ಹೋಗಿ ಸಪ್ತಮಿ ಬಂದಿತ್ತೆಂಬುದು ಯಾರ ಉತ್ಸಾಹಕ್ಕೂ ಭಂಗ ತಂದಿರಲಿಲ್ಲ . ಎಲ್ಲೆಲ್ಲೂ ಸ್ನೇಹಿತರ ವಿಶ್ವಾಸ ಪೂರ್ವಕ ಉಭಯಕುಶಲೋಪರಿ- 'ಏನ್ರೀ? ಚೆನ್ನಾಗಿದ್ದೀರಾ?" ಎಂದಾಗ ಪ್ರೀತಿಪೂರ್ವಕ ಮುಗುಳ್ನಗೆ.
ದೇವಸ್ಥಾನದ ಅರ್ಚಕರಿಂದ ಗಣೇಶನ ಪೂಜೆ ನಡೆದ ಮೇಲೆ ನಾಗಮಣಿ ವಿದ್ಯಾಸಾಗರ್ ಅವರ ಪ್ರಾರ್ಥನೆಯಾಂದಿಗೆ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮ ಶುರುವಾಯಿತು. ಮಕ್ಕಳಿಂದ ಭಾರತ, ಅಮೆರಿಕಾ ಎರಡೂ ದೇಶಗಳ ರಾಷ್ಟ್ರಗೀತೆ, ರೋಹಿಣಿ ಉಡುಪ, ಕಲ್ಯಾಣಿ ಪ್ರಸಾದ್ ಮತ್ತು ಸಂಗಡಿಗರಿಂದ ಭಜನೆ, ಹಾಗೂ ಸಾವಿತ್ರಿ ಬಸವಯ್ಯ ಅವರಿಂದ ಸುಗಮ ಸಂಗೀತ ಕಾರ್ಯಕ್ರಮಗಳಿದ್ದವು. ಸ್ಥಳೀಯ ಕನ್ನಡಿಗರಾದ ಸಾವಿತ್ರಿ ಅವರಿಗೆ ಹಿಮ್ಮೇಳದ ವಾದ್ಯಕ್ಕೆ ನುರಿತ ಕಲಾವಿದರಾದ ಹಿತೇಶ್ ದೇಸಾಯಿ (ಕೀ ಬೋರ್ಡ್) ಮತ್ತು ಪೂರನ್ ವ್ಯಾಸ್ (ತಬಲಾ) ಜೊತೆ ನೀಡಿದ್ದರು. ಸಾವಿತ್ರಿ ಅವರ ಪತಿ ಜಯರಾಮ್ ಅವರು ಬಾಂಗೊ ಡ್ರಮ್ ನುಡಿಸಿದರು.
ಕಾರ್ಯಕಾರಿ ಸಮಿತಿಯ ಯುವ ಸದಸ್ಯರು ಏರ್ಪಡಿಸಿದ್ದ ಗಣೇಶ ಕ್ವಿಜ್ ಎಳೆಯರಿಗೆಲ್ಲ ತಮಗೆ ಗಣೇಶನ ಬಗ್ಗೆ ಇರುವ ಜ್ಞಾನವನ್ನು ಒರೆ ಹಚ್ಚುವಂತೆ ಮಾಡಿತು. ಹಬ್ಬದೌತಣವಾದ ಮೇಲೆ ಕೊನೆಯಲ್ಲಿ ಜಯಶ್ರೀ ಅವರ ವೀಣಾವಾದನವಿತ್ತು . ಜೊತೆಗೆ ವಿನೋದ್ ಗೋಪಿನಾಥ್ ಅವರು ಮೃದಂಗ ನುಡಿಸಿದರು.
ಕನ್ನಡಿಗರೊಡನೆ ಒಡನಾಡಿ, ಕನ್ನಡ ಕಾರ್ಯಕ್ರಮಗಳನ್ನು ನೋಡಿ, ಕನ್ನಡದೂಟವನ್ನು ಮಾಡಿದ ಪ್ರತಿಯಾಬ್ಬ ಕನ್ನಡಿಗನ ಹೃದಯವೂ ಏನೋ ಸಂತೃಪ್ತ ಭಾವವನ್ನು ತಾಳಿತ್ತು. ಅಮೆರಿಕಾದ ನೆಲದಲ್ಲಿ ಮತ್ತೊಮ್ಮೆ ಕರ್ನಾಟಕದ ಕಂಪನ್ನು ಪಸರಿಸಿದ ಕನ್ನಡ ಕೂಟ ಸಾರ್ಥಕತೆಯನ್ನು ಪಡೆದಿತ್ತು.