ಉದ್ಯೋಗ ಇಲ್ಲದವರಿಂದ ಸೇಸಿಎಂ ಅಭಿಯಾನ; ಯಾದಗಿರಿಯಲ್ಲಿ ಸಿಎಂ ತಿರುಗೇಟು
ಯಾದಗಿರಿ, ಅಕ್ಟೋಬರ್, 19: ''ಕಾಂಗ್ರೆಸ್ ಪಕ್ಷ "ಸೇ ಸಿಎಂ" ಅಭಿಯಾನವನ್ನು ಕೈಗೊಂಡಿದ್ದು, ಇದನ್ನು ಉದ್ಯೋಗ ಇಲ್ಲದವರು ಮಾಡುವುದು. ನಾವು ಮಾತನಾಡುವುದಕ್ಕಿಂತ ಕೆಲಸಗಳು ಮಾತನಾಡಬೇಕು ಎಂಬುದರ ಬಗ್ಗೆ ನಮಗೆ ನಂಬಿಕೆ ಇದೆ'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾದಗಿರಿಯಲ್ಲಿ ತಿಳಿಸಿದರು.
ಅವರು ಇಂದು ಯಾದಗಿರಿ ಜಿಲ್ಲೆಯ ಹುಣಸಗಿ ಹೆಲಿಪ್ಯಾಡ್ನಲ್ಲಿ ಮಾತನಾಡಿದ್ದು, ಕಾಂಗ್ರೆಸ್ನವರು ಏನು ಮಾಡುತ್ತಾರೆಯೋ ಮಾಡಲಿ. ಆದರೆ ನಮಗೆ ಜವಾಬ್ದಾರಿ ಇದೆ. ನಾವು ಸರ್ಕಾರದಲ್ಲಿ ಜನಕಲ್ಯಾಣದ ಕೆಲಸವನ್ನು ಮಾಡುತ್ತಿದ್ದೇವೆ. ನಾವು ನಮ್ಮ ಕೆಲಸದ ಮುಖಾಂತರ ಜನರ ಬಳಿ ತೆರಳುತ್ತಿದ್ದೇವೆ ಎಂದರು.
ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ನಡೆದಿರುವ ಅಕ್ರಮ ವ್ಯವಹಾರಗಳ ದಾಖಲೆಗಳನ್ನು ರಾಹುಲ್ ಗಾಂಧಿಗೆ ಕಳುಹಿಸುತ್ತೀರೇಕೆ? ನಿಮಗೆ ಧಮ್ ಇದ್ದರೆ ಸಚಿವ ಸಂಪುಟದಲ್ಲಿಟ್ಟು ತನಿಖೆ ಮಾಡಿಸಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸವಾಲು ಹಾಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಈಗಾಗಲೇ ಮೂರು ಪ್ರಕರಣಗಳು ತನಿಖೆಗೆ ಒಳಪಟ್ಟಿವೆ.
ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮವಾಗಿರುವ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು 20 ಜನರನ್ನು ಬಂಧಿಸಿದ್ದಾರೆ. ಪಿಎಸ್ಐ ನೇಮಕಾತಿಯಲ್ಲಿ ಅಕ್ರಮದ ಸಿಐಡಿ ಈಗಾಗಲೇ ವರದಿ ಸಲ್ಲಿಸಿದ್ದಾರೆ. ಸರ್ಕಾರಿ ಅಭಿಯೋಜಕರ ನೇಮಕಾತಿ ಪ್ರಕರಣದಲ್ಲಿ ಅಮಾನತುಗೊಳಿಸಲಾಗಿದ್ದು, ಕ್ರಮ ಕೈಗೊಳ್ಳಲಾಗಿದೆ. ರಾಹುಲ್ ಗಾಂಧಿ ಅವರ ಪಕ್ಷ ಅಧಿಕಾರದಲ್ಲಿದ್ದಾಗ ಆಗಿರುವ ಹಗರಣಗಳ ಬಗ್ಗೆ ಕಣ್ಣು ತೆಗೆದು ನೋಡಲಿ. ಅವರ ಪಕ್ಷದವರು ಈಗಲೂ ಅಧಿಕಾರದಲ್ಲಿದ್ದಾರೆ. ಏನು ಕ್ರಮ ತೆಗೆದುಕೊಳ್ಳುತ್ತಾರೆ ನೋಡೋಣ ಎಂದರು.

ಪ್ರಕರಣದ ಸಂಪೂರ್ಣ ತನಿಖೆಗೆ ಆದೇಶ
ಬೆಂಗಳೂರಿನ ರಸ್ತೆ ಗುಂಡಿಗಳನ್ನು ಸಮಾರೋಪದಲ್ಲಿ ಮುಚ್ಚಲು ಸೂಚನೆ ನೀಡಲಾಗಿದೆ. ಪ್ರಕರಣದ ಸಂಪೂರ್ಣ ತನಿಖೆಗೂ ಆದೇಶ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ರಸ್ತೆ ಗುಂಡಿಗಳಿಂದಾಗುವ ಅಪಘಾತಗಳಿಗೆ ಸರ್ಕಾರವೇ ನೇರ ಹೊಣೆ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿಯವರೂ ಈ ಹಿಂದೆ ಆಡಳಿತ ಮಾಡಿದ್ದರು. ಅವರ ಕಾಲದಲ್ಲಿಯೂ ರಸ್ತೆ ಗುಂಡಿಗಳಿಂದಾಗಿ ಸಾವು ಸಂಭವಿಸಿದ್ದವು ಎಂದರು.

ಶೀಘ್ರವೇ ತೀರ್ಪು ಹೊರಬೀಳುವ ವಿಶ್ವಾಸ
ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸುವ ಸಂಬಂಧ ನಿನ್ನೆ ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆ ಆಗಿದೆ. ಕಳೆದ 8-10 ತಿಂಗಳಿಂದ ನ್ಯಾಯಾಧೀಶರು ಒಬ್ಬರು ಮಹಾರಾಷ್ಟ ಮತ್ತು ಕರ್ನಾಟಕದವರು ಆಗಿದ್ದರಿಂದ ವಿಚಾರಣೆಯನ್ನು ನಿರಾಕರಿಸಿದ್ದರು. ಇಬ್ಬರು ಹೊಸ ನ್ಯಾಯಾಧೀಶರ ನೇಮಕಾತಿ ಆಗಿದ್ದು, ವಿಚಾರಣೆಯಾಗಿ ನಂತರ ಮುಂದೂಡಲಾಗಿದೆ. ಡಿಸೆಂಬರ್ ತಿಂಗಳ ಮೊದಲನೇ ವಾರದಲ್ಲಿ ಪುನ: ವಿಚಾರಣೆ ಆಗಲಿದೆ. ಬಹುತೇಕವಾಗಿ ಎಲ್ಲಾ ಸವಾಲುಗಳಿಗೆ ಉತ್ತರ ನೀಡಲಾಗಿದೆ. ಶೀಘ್ರವಾಗಿ ತೀರ್ಪು ಹೊರಬೀಳಲಿದೆ ಎಂದರು.

ಹಲವು ಜಿಲ್ಲೆಗಳಲ್ಲಿ ಯಾತ್ರೆ ಯಶಸ್ವಿ
ಜನಸಂಕಲ್ಪ ಯಾತ್ರೆ ಯಾದಗಿರಿಯಲ್ಲಿ ಇಂದು ಪ್ರಾರಂಭ ಆಗುತ್ತಿದೆ. ಎಲ್ಲೆಡೆ ಅಭೂತಪೂರ್ವವಾದ ಜನಬೆಂಬಲ ದೊರೆಯುತ್ತಿದೆ. ಜನರ ಉತ್ಸಾಹ ದೊಡ್ಡದಿದ್ದು, ರಾಯಚೂರು, ಕೊಪ್ಪಳ, ಬಳ್ಳಾರಿ, ಬೀದರ್ ಜಿಲ್ಲೆಗಳಲ್ಲಿ ಯಾತ್ರೆ ಅತ್ಯಂತ ಯಶಸ್ವಿ ಆಗಿದೆ. ಜನಸಂಕಲ್ಪ ಯಾತ್ರೆ ವಿಜಯ ಸಂಕಲ್ಪ ಯಾತ್ರೆಯಾಗಿ ಪರಿವರ್ತನೆ ಆಗಲಿದೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಸಭೆ ಚುನಾವಣೆ, ಎಚ್ಡಿಕೆ ಪ್ರತಿಕ್ರಿಯೆ
ಇನ್ನು ಕುಮಾರಸ್ವಾಮಿ ಮಾತನಾಡಿ, ಮುಂಬರುವ ವಿಧಾನಸಭೆ ಚುನಾವಣೆಗೆ ಮೊದಲ ಹಂತದಲ್ಲಿ 126 ವಿಧಾನಸಭಾ ಕ್ಷೇತ್ರಗಳ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ನವೆಂಬರ್ 1ರಂದು ಪ್ರಕಟಿಸಲಾಗುವುದು. ಯಾರೊಂದಿಗೂ ಕೈಜೋಡಿಸುವ ಪ್ರಶ್ನೆಯೇ ಇಲ್ಲ. ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ. ಎಲ್ಲ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಹಾಕಲಾಗುವುದು. 123 ಸ್ಥಾನಗಳನ್ನು ಗೆಲ್ಲಬೇಕು ಎನ್ನುವುದು ನಮ್ಮ ಗುರಿ ಆಗಿದೆ ಎಂದು ಹೇಳಿದರು.












Click it and Unblock the Notifications