ಕೌದಿ ಕಲೆಯ ಶಾಣಮ್ಮಗೆ ಒಲಿದು ಬಂತು ರಾಜ್ಯೋತ್ಸವ ಪ್ರಶಸ್ತಿ
ಯಾದಗಿರಿ, ಅಕ್ಟೋಬರ್ 31 : ಈ ಅಜ್ಜಿ ಜೀವನದ ಬಹುಪಾಲನ್ನು ಕೌದಿ ಹೊಲೆಯುತ್ತ ಸಾಗಿಸಿದ್ದಾರೆ. ಆಸಕ್ತಿಗಾಗಿ ಕೌದಿ ಹೊಲೆಯುವುದನ್ನು ಕಲಿತವರು ಇಂದು ಅದನ್ನು ವೃತ್ತಿಯಾಗಿ ಮಾಡಿಕೊಂಡಿದ್ದಾರೆ. ಈಗ ರಾಜ್ಯೋತ್ಸವ ಪ್ರಶಸ್ತಿ ಅಜ್ಜಿಯನ್ನು ಅರಸಿ ಬಂದಿದೆ.
ಕಣ್ಣಲ್ಲಿ ಕಣ್ಣಿಟ್ಟು ಸೂಜಿ-ದಾರದಿಂದ ಹೊಲಿಗೆ ಹಾಕುವ, ಬಣ್ಣ-ಬಣ್ಣದ ಬಟ್ಟೆಗಳನ್ನು ಸೇರಿಸಿ ಅಲಂಕಾರ ಮಾಡುವ ಅಜ್ಜಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ. 40 ವರ್ಷಗಳಿಂದ ಕೌದಿ ಕಲೆಯಲ್ಲಿ ತೊಗಡಿಸಿಕೊಂಡಿರುವ ಯಾದಗಿರಿಯ ಡಾ.ಬಿ.ಆರ್.ಅಂಬೇಡ್ಕರ್ ನಗರದ ಶಾಣಮ್ಮ ಮ್ಯಾಗೇರಿ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ.

ಶಾಣಮ್ಮ ಮ್ಯಾಗೇರಿ ಕಳೆದ 4 ದಶಕಗಳಿಂದ ಕೌದಿ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೊದ ಮೊದಲು ಆಸಕ್ತಿಯಿಂದ ಕೌದಿ ಹೊಲೆಯುವಿಕೆ ಆರಂಭಿಸಿದ ಇವರು, ನಂತರ ಕೌದಿ ಕಲೆಯನ್ನು ವೃತ್ತಿಯಾಗಿ ಮಾಡಿಕೊಂಡರು. ಇಂದಿಗೂ ಮನೆಯ ಕಟ್ಟೆ ಮೇಲೆ ಕುಳಿತು ಕೌದಿ ಹೊಲೆಯುತ್ತಾರೆ.

ಶಾಣಮ್ಮ ಅವರು ಇಲ್ಲಿಯ ತನಕ ಸುಮಾರು 400ಕ್ಕೂ ಹೆಚ್ಚು ಕೌದಿಗಳನ್ನು ಹೊಲೆದಿದ್ದಾರೆ. ಕೌದಿಯ ಹೊಲಿಕೆಯ ಜೊತೆಗೆ ಕಲಾ ಕುಸುರಿ ಮೂಲಕ ಕೈ ಚಳಕ ತೋರಿಸುತ್ತಾರೆ. ಕೌದಿಯ ಮೇಲೆ ವಿವಿಧ ಚಿತ್ತಾರಗಳನ್ನು ಹೊಲಿಗೆಯ ಮೂಲಕ ಅನಾವರಣ ಮಾಡುತ್ತಾರೆ. ಇವರು ತುಂಬಾ ಆಸಕ್ತಿಯಿಂದ ಹೊಲೆಯುವ ಕೌದಿಗಳು ಜನರನ್ನು ಆಕರ್ಷಿಸುತ್ತವೆ.

ಕೌದಿ ಹೊಲೆಯುತ್ತ ತತ್ವಪದ, ಭಜನಾ ಪದಗಳನ್ನು ಹಾಡುತ್ತಿದ್ದರೆ ಕೇಳುಗರು ನಿಬ್ಬೆರಾಗುತ್ತಾರೆ. ವಯಸ್ಸಾದಂತೆ ದೃಷ್ಠಿದೋಷ ಕಾಡಲಾರಂಭಿಸಿದೆ. ಆದರೂ ಕೌದಿ ಹೊಲೆಯುವುದನ್ನು ಮಾತ್ರ ನಿಲ್ಲಿಸಿಲ್ಲ. ಶಾಣಮ್ಮ ಕಡು ಬಡವರಾಗಿದ್ದು, ಪ್ರಶಸ್ತಿಯ ಜೊತೆಗೆ ಒಂದು ನಿವೇಶನ ನೀಡದರೆ ಅನುಕೂಲ ಎನ್ನುತ್ತಾರೆ ಕುಟುಂಬದವರು.

ಕೌದಿ ಕಲೆ ವಿಭಾಗದ ಅಡಿ ಯಾದಗಿರಿ ಜಿಲ್ಲೆಗೆ 2ನೇ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಗುತ್ತಿದೆ. 15-20 ವರ್ಷಗಳ ಹಿಂದೆ ಕೌದಿ ಕಲೆಯನ್ನು ನಂಬಿಕೊಂಡು ಹಲವು ಸಮುದಾಯಗಳು ಜೀವನ ನಡೆಸುತ್ತಿದ್ದವು. ಆಧುನಿಕ ಭರಾಟೆಯ ಬಿಸಿಯಿಂದ ಕಲೆ ಅಳವಿನಂಚಿಗೆ ತಲುಪಿದೆ.












Click it and Unblock the Notifications