ಲಾಕ್ಡೌನ್; ಜನರ ಕಷ್ಟಕ್ಕೆ ಮಿಡಿದ ಅಜೀಂ ಪ್ರೇಮ್ ಜಿ ಫೌಂಡೇಷನ್
ಯಾದಗಿರಿ, ಮೇ 25; ಯಾದಗಿರಿ ಜಿಲ್ಲೆಯಲ್ಲಿ ಸುಮಾರು 6 ಸಾವಿರ ಬಡಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್ಗಳನ್ನು ಅಜೀಂ ಪ್ರೇಮ್ ಜೀ ಫೌಂಡೇಶನ್ ವತಿಯಿಂದ ವಿತರಿಸಲಾಗುತ್ತಿದೆ. ಜಿಲ್ಲಾಧಿಕಾರಿ ಡಾ. ರಾಗಪ್ರಿಯ ಆರ್. ಈ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಸಾಂಕೇತಿಕವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಫಲಾನುಭವಿಯೊಬ್ಬರಿಗೆ ಫುಡ್ಕಿಟ್ ವಿತರಿಸುವ ಮೂಲಕ ಜಿಲ್ಲಾಧಿಕಾರಿಗಳು ಫೌಂಡೇಶನ್ನ ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಕೋವಿಡ್ 2 ನೇ ಅಲೆ ಹರಡದಂತೆ ತಡೆಯಲು ಲಾಕ್ಡೌನ್ ಘೋಷಣೆ ಮಾಡಿರುವ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜಿಲ್ಲೆಯ ಜನರಿಗೆ ಫೌಂಡೇಷನ್ ಸಹಾಯ ನೀಡುತ್ತಿದೆ.
ಶಿಕ್ಷಕರ ಸಹಾಯದಿಂದ ಅಜೀಂ ಪ್ರೇಮ್ ಜೀ ಫೌಂಡೇಶನ್ ಯಾದಗಿರಿ ಜಿಲ್ಲೆಯ ವಿವಿಧ ಭಾಗಗಳಲ್ಲಿನ ಬಡಕುಟುಂಬಗಳನ್ನು ಗುರುತಿಸಿದೆ. ಅವರಿಗೆ ಆಹಾರದ ಕಿಟ್ಗಳನ್ನು ಹಂಚಿಕೆ ಮಾಡುತ್ತಿದೆ. ಈ ಮೂಲಕ ಲಾಕ್ಡೌನ್ ಸಮಯದಲ್ಲಿ ಮಾನವೀಯತೆ ಮೆರೆಯುತ್ತಿದೆ.

ಕೋವಿಡ್ ಲಾಕ್ಡೌನ್ ಕಾಲದಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಿರುವ ಕಾರಣದಿಂದ ಇಂತಹ ಕುಟುಂಬಗಳು ಕೆಲಸಕ್ಕೆ ತೆರಳುವಂತಿಲ್ಲ. ಹೀಗಾಗಿ ಇಂತಹ ಕುಟುಂಬಗಳ ಪರಿಸ್ಥಿತಿಯನ್ನು ಅರಿತು ಈ ಸಂಸ್ಥೆಯ ಕಾರ್ಯಕರ್ತರು ಮನೆ-ಮನೆಗೆ ಭೇಟಿ ನೀಡಿ ಅವರ ಅಗತ್ಯತೆಯನ್ನು ತಿಳಿದುಕೊಂಡು ದವಸ-ಧಾನ್ಯಗಳ ಕಿಟ್ ವಿತರಣೆ ಮಾಡುತ್ತಿದ್ದಾರೆ.
ಕೊರೊನಾ ಸೋಂಕಿತರ ಕುಟುಂಬಕ್ಕೂ ನೆರವು ನೀಡಿ ಎಂದು ಜಿಲ್ಲಾಧಿಕಾರಿಗಳು ಫೌಂಡೇಶನ್ಗೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ ರಜಪೂತ, ಅಜೀಂ ಪ್ರೇಮ್ಜೀ ಫೌಂಡೇಶನ್ನ ಯಾದಗಿರಿ ಘಟಕದ ಮುಖ್ಯಸ್ಥರಾದ ಅನಿಲ್ ಅಂಗಡಕಿ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications