ಯಾದಗಿರಿಯಲ್ಲಿ ಉದ್ಯೋಗಾಕಾಂಕ್ಷಿಗಳ ಜಿಲ್ಲಾ ಸಮಾವೇಶ
ಯಾದಗಿರಿ, ಸೆ.12: ರಾಜ್ಯದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ನಿರುದ್ಯೋಗ ಯುವಜನ ಹೊರಾಟ ಸಮಿತಿಯ ಯಾದಗಿರಿ ಜಿಲ್ಲಾ ಘಟಕ ಸೋಮವಾರ ಸಮಾವೇಶ ನಡೆಸಿದೆ.
"ರಾಜ್ಯದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂಬ ತೀರ್ಮಾನ ಉದ್ಯೋಗಾಕಾಂಕ್ಷಿಗಳು ತೆಗೆದುಕೊಳ್ಳಬೇಕು" ಎಂದು ಎಐಡಿವೈಒ ರಾಜ್ಯ ಉಪಾದ್ಯಕ್ಷ ಜಗನ್ನಾಥ್ ಎಸ್.ಎಚ್ ಉದ್ಯೋಗಾಕಾಂಕ್ಷಿಗಳಿಗೆ ಕರೆ ನೀಡಿದರು.
ನಬಾರ್ಡ್ ನೇಮಕಾತಿ 2022: 177 ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸೋಮವಾರ ಅಖಿಲ ಭಾರತ ನಿರುದ್ಯೋಗ ಯುವಜನ ಹೋರಾಟ ಸಮಿತಿ(ಎಐಯುವೈಎಸ್ಸಿ)ಯ ಯಾದಗಿರಿ ಜಿಲ್ಲಾ ಘಟಕ ಸ್ತ್ರೀ ಶಕ್ತಿ ಭವನದಲ್ಲಿ ಹಮಿಕೊಂಡಿದ್ದ ಸಮಾವೇಶದಲ್ಲಿ, ಖಾಲಿ ಹುದ್ದೆಗಳನ್ನು ಭರ್ತಿಮಾಡಿ, ನೇಮಕಾತಿಯಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟಲು ಆಗ್ರಹಿಸಲಾಗಿದೆ.
44 ಇಲಾಖೆಗಳಲ್ಲಿ 3 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿಯಿವೆ
ರಾಜ್ಯ ಉಪಾದ್ಯಕ್ಷ ಜಗನ್ನಾಥ್ ಎಸ್.ಎಚ್ ಮಾತನಾಡಿ, "ಲಕ್ಷಾಂತರ ಯುವಜನರು ಪದವಿ ಮುಗಿಸಿ ಹೊರ ಬರುತಿದ್ದಾರೆ. ಆದರೆ ಅವರು ಪಡೆದ ಅರ್ಹತೆಗೆ ತಕ್ಕಂತೆ ಉದ್ಯೋಗ ಸಿಗುತ್ತಿಲ್ಲ. ರಾಜ್ಯದ 44 ಇಲಾಖೆಗಳಲ್ಲಿ 3 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಆದರೆ ಸರಕಾರ ಮಾತ್ರ ಕೇವಲ ಕೆಲ ನೂರು ಹುದ್ದೆಗಳನ್ನು ಭರ್ತಿ ಮಾಡುತಿದ್ದು, ಅದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ" ಎಂದರು.
"ಅಕ್ರಮಗಳು ದಿನನಿತ್ಯ ಹೊರಬರುತ್ತಿವೆ. ಇದರ ವಿರುದ್ದ ಹಾಗು ಖಾಲಿ ಹುದ್ದೆಗಳು ಭರ್ತಿ ಮಾಡುವವರೆಗೆ ಯುವಜನರು ಸಂಘಟಿತ ಹೋರಾಟಕ್ಕೆ ಸಜ್ಜಾಗಬೇಕು. ರಾಜ್ಯ ಸರಕಾರ ಇತ್ತೀಚಿಗೆ ಉದ್ಯೋಗ ನೀತಿ ಪ್ರಕಟಿಸಿದೆ. ಖಾಲಿ ಇರುವ 3 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಏನು ಮಾತನಾಡದೇ, ಮುಂದಿನ 3 ವರ್ಷಗಳಲ್ಲಿ 7.5 ಲಕ್ಷ ಉದ್ಯೋಗಗಳನ್ನು ಸೃಷ್ಟಿ ಮಾಡುವುದಾಗಿ ಹೇಳಿದೆ. ಅದರ ಚುನಾವಣೆ ಲಾಭ ಪಡೆಯಲು ಯುವಕರನ್ನು ಯಾಮಾರಿಸಲು ಮುಂದಾಗಿದೆ" ಎಂದು ಆರೋಪಿಸಿದರು.
ಬಿಡಿಬಿಡಿಯಾಗಿರುವ ಯುವಕರು ಒಗ್ಗಟ್ಟು ಪ್ರದರ್ಶಿಸಬೇಕು
ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕಾರ್ಮಿಕ ಮುಖಂಡರಾದ ರಾಮಲಿಂಗಪ್ಪ ಬಿ.ಎನ್, "ಯಾವದೇ ಸಮಸ್ಯೆ ಪರಿಹಾರ ಆಗಲು ಸಂಘಟನೆ ಬೇಕು. ಅದಕ್ಕಾಗಿ ಯುವಕರು ಸರಿಯಾದ ಸಂಘಟನೆ ವಿಚಾರದ ಆಧಾರದಲ್ಲಿ ಸಂಘಟಿತರಾದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಬಿಡಿಬಿಡಿಯಾಗಿರುವ ಯುವಕರು ಒಗ್ಗಟ್ಟು ಪ್ರದರ್ಶಿಸಲು ಮುಂದಾಗಬೇಕು" ಎಂದರು.
ಗುತ್ತಿಗೆ, ಹೊರ ಗುತ್ತಿಗೆ ಹೆಸರಿನಲ್ಲಿ ಯುವಕರ ದೌರ್ಜನ್ಯ
ಈ ಸಮಾವೇಶದ ಅಧ್ಯಕ್ಷತೆಯನ್ನು ಅಖಿಲ ಭಾರತ ನಿರುದ್ಯೋಗಿ ಯುವಜನರ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಚನ್ನಬಸವ ಜಾನೇಕಲ್ ವಹಿಸಿದ್ದರು. ಅವರು ಮಾತನಾಡಿ, "ಅಧಿಕಾರಕ್ಕೆ ಬಂದ ಎಲ್ಲಾ ಪಕ್ಷಗಳು ಯುವಜನರನ್ನು ಕಡೆಗಣಿಸಿವೆ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ನೀತಿಗಳು ಜಾರಿಗೆ ತಂದ ಮೇಲೆ ಗುತ್ತಿಗೆ, ಹೊರ ಗುತ್ತಿಗೆ, ಅತಿಥಿ ಹೆಸರಿನಲ್ಲಿ ಪುಡಿಗಾಸಿಗೆ ದುಡಿಸಿಕೊಳ್ಳಲಾಗುತ್ತಿದೆ. ಲಕ್ಷಾಂತರ ಕೈಗಾರಿಕೆಗಳು ಮುಚ್ಚಿವೆ" ಎಂದು ಆಕ್ರೋಶ ಹೊರ ಹಾಕಿದರು.
"ಕೋವಿಡ್ ಬಂದ ನಂತರ ನಿರುದ್ಯೋಗ ಇನ್ನಷು ಭೀಕರವಾಗಿದೆ. ಇದಕ್ಕೆ ಅಧಿಕಾರ ನಡೆಸಿದ ಎಲ್ಲಾ ಸರಕಾರಗಳು ಅನುಸರಿಸಿದ ಆರ್ಥಿಕ ನೀತಿಗಳು ಕಾರಣವಾಗಿವೆ. ನಿರುದ್ಯೋಗ ಹಾಗೂ ನೇಮಕಾತಿಯಲ್ಲಿ ನಡೆಯುವ ಭ್ರಷ್ಟಾಚಾರದ ವಿರುದ್ದ ಯುವಜನರು ದೆಹಲಿಯ ರೈತರ ಮಾದರಿಯಲ್ಲಿ ಹೋರಾಟ ಕಟ್ಟಬೇಕು" ಎಂದರು.
ಇದೇ ತಿಂಗಳು ರಾಜ್ಯ ಮಟ್ಟದಲ್ಲಿ ಸಮಾವೇಶ
"ಇದೇ ತಿಂಗಳು ರಾಜ್ಯ ಮಟ್ಟದಲ್ಲಿ ಸಮಾವೇಶ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಮತ್ತಿತರ ಸಾಮಾಜಿಕ ಹೋರಾಟಗಾರರು ಭಾಗವಹಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯ ಮಟ್ಟದಲ್ಲಿ ಸಮಾವೇಶದಲ್ಲಿ ಭಾಗವಹಿಸಬೇಕು" ಎಂದು ಚನ್ನಬಸವ ಜಾನೇಕಲ್ ಮನವಿ ಮಾಡಿದರು.
ಸಮಾವೇಶದಲ್ಲಿ
ಹಕ್ಕೊತ್ತಾಯಗಳ
ಮನವಿ
ಪತ್ರವನ್ನು
ಮಂಡಿಸಲಾಗಿದೆ.