"ಆ ಭೀಕರ ಅಪಘಾತವನ್ನು ಕಣ್ಣಾರೆ ಕಂಡೆ, ಅಮ್ಮ ಕಿಟಕಿಯಿಂದ ಮಗುವನ್ನು ತಳ್ಳುತ್ತಿದ್ದರು!"
ನ್ಯೂಯಾರ್ಕ್, ಜೂನ್ 08: "ಒಂದೇ ಒಂದು ಕ್ಷಣದಲ್ಲಿ ಏನೆಲ್ಲ ಆಗಿಬಿಡಬಹುದು! ರಸ್ತೆಯಲ್ಲಿ ಚಲಿಸುತ್ತಿದ್ದ ನಾನು ಆ ಒಂದು ಕ್ಷಣ ರೆಪ್ಪೆ ಮುಚ್ಚಿ ಬಿಡುವಷ್ಟರಲ್ಲಿ ಕಾರು ಛಿದ್ರವಾಗಿತ್ತು. ಹತ್ತಿರ ಹೋಗಿ ನೋಡಿದರೆ ಇಂಜಿನ್ ನಲ್ಲಿ ಹೊಗೆ ಬರುತ್ತಿತ್ತು. ಮಗುವನ್ನು ಮಹಿಳೆಯೊಬ್ಬರು ಕಿಟಿಯಿಂದ ತಳ್ಳುತ್ತಿದ್ದರು. ಪಾಪ, ಅದಾದರೂ ಬದುಕಲಿ ಎಂದಿರಬೇಕು!" ಬೀದರ್ ಮೂಲದ ದಂಪತಿ ಅಮೆರಿಕದಲ್ಲಿ ಭೀಕರ ಅಪಘಾತಕ್ಕೆ ತುತ್ತಾದ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಪ್ರತ್ಯಕ್ಷದರ್ಶಿ ಎರಿಕ್ ಮೆಕ್ಕಲಮ್ ಆ ಕರಾಳ ಕ್ಷಣದ ವಿವರಣೆ ನೀಡಿದರು.
ಮಗಳ ಹುಟ್ಟು ಹಬ್ಬ ಆಚರಿಸಲೆಂದು ಸಂಭ್ರಮದಿಂದ ಬೀಚ್ ವೊಂದಕ್ಕೆ ದಂಪತಿ ಮತ್ತು ಮಗು ತೆರಳುತ್ತಿದ್ದ ಸಂದರ್ಭದಲ್ಲಿ ಉಂಟಾದ ಭೀಕರ ರಸ್ತೆ ಅಪಘಾತದಲ್ಲಿ, ಮರುದಿನ ಹುಟ್ಟು ಹಬ್ಬ ಆಚರಿಸಿಕೊಳ್ಳಬೇಕಿದ್ದ ಮಗು ಮತ್ತು ಆಕೆಯ ತಂದೆ ಮೃತರಾದರು. ಬೀದರ್ ಮೂಲದ ಈ ದಂಪತಿ ಅಮೆರಿಕದಲ್ಲೇ ಕೆಲ ವರ್ಷದಿಂದ ವಾಸವಿದ್ದರು. ಘಟನೆಯಲ್ಲಿ ವಿಪ್ರೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮುಖೇಶ್ ದೇಶ್ ಮುಖ್ ಮತ್ತು ಅವರ ಎರಡು ವರ್ಷ ವಯಸ್ಸಿನ ಪುತ್ರಿ ಮೃತರಾದರು.
ಕೋಲಂಬಸ್ ಕೌಂಟಿಯ ಬಳಿ ಘಟನೆ ನಡೆದಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಮೋನಿಕಾ ದೇಶ್ ಮುಖ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಮುಖೇಶ್ ದೇಶ್ ಮುಖ್ ಸ್ಥಳದಲ್ಲೇ ಮೃತರಾದರೆ, ಪುತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಮೃತರಾದರು.

ಅದೊಂದು ಕ್ಷಣ ಕಾರು ನಿಲ್ಲಿಸಿದ್ದರೆ...
ಎರಿಕ್ ಮೆಕ್ಕಲಮ್ ಹೇಳುವ ಪ್ರಕಾರ, ಕಾರು ಚಲಾಯಿಸುತ್ತಿದ್ದ ಮೋನಿಕಾ ಮುಂದಿದ್ದ ಸ್ಟಾಪ್ ಸೈನ್ ಬೋರ್ಡ್ ಅನ್ನು ನೋಡಿ, ಕಾರನ್ನು ನಿಲ್ಲಿಸಿಬಿಟ್ಟಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ಅವರು ಅದನ್ನು ನೋಡದೆ ಇದ್ದ ಕಾರಣ ಟ್ರಕ್ ವೊಂದಕ್ಕೆ ಕಾರು ಗುದ್ದಿ ಈ ಘಟನೆ ಸಭವಿಸಿದೆ.

ಮಗುವನ್ನು ರಕ್ಷಿಸಲು ಯತ್ನಿಸುತ್ತಿದ್ದ ತಾಯಿ
"ಕಾರಿನ ಸೀಟಿನಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ತಾಯಿ, ಆ ನೂವಿನಲ್ಲೂ ಮಗುವನ್ನು ಮತ್ತು ಪತಿಯನ್ನು ಕಾರಿನಿಂದ ಆಚೆ ತಳ್ಳಲು ಪ್ರಯತ್ನಿಸುತ್ತಿದ್ದರು. ಆದರೆ ಪತಿ ಅದಾಗಲೇ ಮೃತರಾಗಿದ್ದರು ಎಂಬುದು ಆಕೆಗೆ ಗೊತ್ತಿರಲಿಲ್ಲ.ನಾನು ಹತ್ತಿರ ಹೋಗಿ ನೋಡಿದೆ ಮಗುವಿನ ಕಾಲುಗಳು ಹೊರಗಿದ್ದವು. ಆದರೆ ದೇಹ ಒಳಗಿತ್ತು. ಮಗುವನ್ನು ತಳ್ಳುತ್ತಿದ್ದ ಮಹಿಳೆಯ ಕಾಣಿಸುತ್ತಿತ್ತು.ಪೊಲೀಸರಿಗೆ ವಿಷಯ ತಿಳಿಸಿ, ತಾಯಿ ಮತ್ತು ಮಗುವನ್ನು ಒಂದಷ್ಟು ಜನರು ಸೇರಿ ಹೊರ ತೆಗೆದೆವು. ಕೂಡಲೆ ಏರ್ ಅಂಬುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಮೃತವಾಯಿತೆಂದು ತಿಳಿದು ಬೇಸರವಾಯಿತು" ಎಂದು ಕಣ್ಣೀರು ಸುರಿಸಿದರು ಮೆಕ್ಕಲಂ

ತಂದೆಯನ್ನು ಉಳಿಸಿಕೊಳ್ಳೋದಕ್ಕೆ ಸಾಧ್ಯವಾಗಲಿಲ್ಲ!
"ನನಗೆ ಅಪಘಾತ ಇಷ್ಟೆಲ್ಲ ಭೀಕರವಾಗಿರುತ್ತದೆ ಎಂಬುದು ಗೊತ್ತಾಗಿದ್ದೇ ಆಗ. ಕಾರಿಗೆ ಬೆಂಕಿ ಹೊತ್ತಿಕೊಳ್ಳುತ್ತಿತ್ತು. ಬೆಂಕಿ ಸಂಪೂರ್ಣ ವ್ಯಾಪಿಸುವ ಮೊದಲು ನಾವು ಅವರನ್ನು ಹೊರಗೆ ಎಳೆಯಬೇಕಿತ್ತು. ತಾಯಿ-ಮಗಳನ್ನು ಹೊರಗೆಳೆದೆವು. ಆದರೆ ತಂದೆಯನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ" ಎಂದು ಮೆಕ್ಕಲಂ ಬೇಸರದಿಂದ ಹೇಳಿದರು.
ಮನೆಗೆ ಯಾವಾಗ ಹೋಗುತ್ತೇನೋ ಅನ್ನಿಸಿತ್ತು
"ಈ ಘಟನೆಯ ನಂತರ ನನಗೆ ವಾಪಸ್ ಮನೆಗೆ ಬರುವಾಗ ಸಂಕಟವಾಗುತ್ತಿತ್ತು. ಯಾವಾಗ ನನ್ನ ಕುಟುಂಬಸ್ಥರನ್ನು ನೋಡುತ್ತೇನೋ ಅನ್ನಿಸಿಬಿಟ್ಟಿತ್ತು. ನಿಜವಾಗಿಯೂ ಇಂಥ ಘಟನೆಗಳನ್ನು ನೋಡಿದಾಗ ಇರುವಷ್ಟು ದಿನ ನಮ್ಮವರನ್ನೆಲ್ಲ ಎಷ್ಟು ಬೇಕೋ ಅಷ್ಟು ಪ್ರೀತಿಸಿಬಿಡಬೇಕು ಎನ್ನಿಸುತ್ತದೆ" ಎಂದು ಮೆಕ್ಕಲಂ ಕಣ್ಣೀರಿಟ್ಟರು.












Click it and Unblock the Notifications