ಟಿಕೆಟ್ ನೀಡುವುದು ಅಮಿತ್ ಷಾ ಅಲ್ಲ, ನಾನೂ ಅಲ್ಲ : ಯಡಿಯೂರಪ್ಪ
ವಿಜಯಪುರ, ನವೆಂಬರ್ 30 : ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದ್ದಂತೆಯೇ ಯಡಿಯೂರಪ್ಪ ಅವರು ಟಿಕೆಟ್ ಆಕಾಂಕ್ಷಿಗಳನ್ನು ಗುರಿಯಾಗಿಸಿಕೊಂಡು ಸರಿಯಾದ ಬಾಂಬ್ ಸಿಡಿಸಿದ್ದಾರೆ.
ವಿಜಯಪುರದ ಮುದ್ದೆಬಿಹಾಳದಲ್ಲಿ ನಡೆದ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು "ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವುದು ದೆಹಲಿಯಲ್ಲಿ ಕೂತ ಅಮಿತ್ ಷಾ ಅಲ್ಲ, ಬೆಂಗಳೂರಿನಲ್ಲಿ ಕೂತ ನಾನೂ ಅಲ್ಲ' ಎಂದಿದ್ದಾರೆ.
ಪರಿವರ್ತನಾ ಯಾತ್ರೆ : 17ದಿನದಲ್ಲಿ ಬಿಜೆಪಿ ಸಾಧಿಸಿದ್ದೇನು?
ಅಭ್ಯರ್ಥಿಗಳ ಆಯ್ಕೆಗೆ ಕ್ಷೇತ್ರದಲ್ಲಿ ಎರಡು ಹಂತದ ಸಮೀಕ್ಷೆ ನಡೆಸಿ ಗೆಲ್ಲುವ ಅಭ್ಯರ್ಥಿಗಷ್ಟೆ ಟಿಕೆಟ್ ನೀಡಲಾಗುತ್ತದೆ ಎಂದಿದ್ದಾರೆ ಯಡಿಯೂರಪ್ಪ. ರಾಜ್ಯದ 224 ಕ್ಷೇತ್ರಗಳಲ್ಲಿಯೂ ಇದೇ ತಂತ್ರ ಅನುಸರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಈಗಾಗಲೇ ಗುಜರಾತ್ ಚುನಾವಣೆಯಲ್ಲಿ ಇದೇ ತಂತ್ರ ಅನುಸರಿಸಿ ಬಿಜೆಪಿ ಟಿಕೆಟ್ ನೀಡಿದ್ದು, ಹಲವು ಮಾಜಿ ಶಾಸಕರು, ಸಂಸದರಿಗೆ ಟಿಕೆಟ್ ನೀಡಲಾಗಿಲ್ಲ.
ರಾಜ್ಯದಲ್ಲಿಯೂ ಇದೇ ಮಾದರಿಯಲ್ಲಿ ಟಿಕೆಟ್ ನೀಡಿದರೆ ಕೆಲವು ಹಿರಿಯ ಮುಖಂಡರಿಗೆ ಟಿಕೆಟ್ ಕೈ ತಪ್ಪುವುದು ಖಾಯಂ ಎನ್ನಲಾಗುತ್ತಿದೆ.
ಬಿಜೆಪಿಯ ಪರಿವರ್ತನಾ ಯಾತ್ರೆ : ಕಾಂಗ್ರೆಸ್ಸಿಗೆ ಆಗುವ 5 ಲಾಭಗಳು!
ರ್ಯಾಲಿ ಮಾತನಾಡುತ್ತಾ ಮಾಮೂಲಿನಂತೆ ಸಿದ್ದರಾಮಯ್ಯ ಅವರ ಮೇಲೆ ಹರಿಹಾಯ್ದ ಯಡಿಯೂರಪ್ಪ ಅವರು ;ಸಿಎಂ ಸಿದ್ದರಾಯಮ್ಯ ಸರ್ಕಾರದ ಅಧಿಕಾರ 4 ತಿಂಗಳು ಬಾಕಿ ಉಳಿದಿದ್ದು, ನಿಮ್ಮ ಸರ್ಕಾರ ದಿವಾಳಿ ಹಿಡದಿದೆ, ಚುನಾವಣೆ ಸಂದರ್ಭದಲ್ಲಿ ಬಾಯಿಗೆ ಬಂದ ಹಾಗೆ ಯೋಜನೆಗಳನ್ನು ಘೋಷಣೆ ಮಾಡುತ್ತಿದ್ದಾರೆ, ಇದು ಜನರ ದಿಕ್ಕು ತಪ್ಪಿಸುವ ಷಡ್ಯಂತ್ರ' ಎಂದರು.
ಸಿದ್ದರಾಮಯ್ಯ ಅವರ ಬಗ್ಗೆ ವೈಯಕ್ತಿಕ ವಾಗ್ದಾಳಿ ನಡೆಸಿದ ಅವರು " ಪ್ರಧಾನಿ ನರೇಂದ್ರ ಮೋದಿ ಅವ್ರ ಬಗ್ಗೆ ಕೇವಲವಾಗಿ ಮಾತನಾಡುವ ಸಿಎಂ ಸಿದ್ದರಾಮಯ್ಯ ಮೋದಿ ಮುಂದೆ ಇನ್ನು ಬಚ್ಚಾ ಎಂದರು. ಸಿಎಂ ಸಿದ್ದರಾಮಯ್ಯ ಮೀನು ತಿಂದು ಧರ್ಮಸ್ಥಳ ಪ್ರವೇಸಿದ್ದ ವಿಷಯ ಕೆದಕಿ 'ಇದು 6.5 ಕೋಟಿ ಜನರಿಗೆ ಮಾಡಿದ ಅಪಮಾನ' ಎಂದರು.
ಬಿಜೆಪಿಗೆ ಮತ ನೀಡುವಂತೆ ಅಕ್ಷರಷಃ ಅಂಗಲಾಚಿದ ಯಡಿಯೂರಪ್ಪ ಅವರು 'ಈ ಬಾರಿ ಬಿಜೆಪಿಗೆ ಆಶೀರ್ವಾದ ಮಾಡಿ ನಾನು ನಿಮಗೆ ದ್ರೋಹ ಮಾಡಲ್ಲವೆಂದು ರಕ್ತದಲ್ಲಿ ಬರೆದುಕೊಡ್ತೇನಿ' ಎಂದು ಬೇಡಿಕೊಂಡರು.