Breaking; ಸಂಸದ ರಮೇಶ್ ಜಿಗಜಿಣಗಿ ಕಾರು ಚಾಲಕನಾಗಿದ್ದವನ ಭೀಕರ ಹತ್ಯೆ
ವಿಜಯಪುರ, ಜನವರಿ 19; ಕೇಂದ್ರದ ಮಾಜಿ ಸಚಿವ, ವಿಜಯಪುರದ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಕಾರು ಚಾಲಕನಾಗಿದ್ದ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಕೊಲೆಯಾದವರನ್ನು ಮಲ್ಲಿಕಾರ್ಜುನ ದೊಡ್ಡಮನಿ (43) ಎಂದು ಗುರುತಿಸಲಾಗಿದೆ. ವಿಜಯಪುರ ನಗರದ ಅಲಕುಂಟೆಯಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ.
ಗುರುವಾರ ಮುಂಜಾನೆ ವ್ಯಕ್ತಿಯೊಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವವನ್ನು ನೋಡಿ ಆದರ್ಶ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ನೋಡಿದಾಗ ಕೊಲೆಯಾದ ವ್ಯಕ್ತಿ ಸಂಸದರ ಕಾರು ಚಾಲಕನಾಗಿದ್ದ ಎಂಬುದು ತಿಳಿದಿದೆ.

ವಿಜಯಪುರ ಎಸ್ಪಿ ಶಂಕರ ಮಾರಿಹಾಳ ಸಹ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಕೊಲೆಗೆ ನಿಖರವಾ ಕಾರಣ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಆದರ್ಶ ನಗರ ಠಾಣೆ ಪಿಎಸ್ಐ ಯತೀಶ್ ಸ್ಥಳದಲ್ಲಿದ್ದಾರೆ. ಶ್ವಾನದಳವನ್ನು ಕರೆಸಲಾಗಿದೆ. ತಲೆಯ ಮೇಲೆ ಕಲ್ಲು ಎತ್ತಿಹಾಕಿ ಮಲ್ಲಿಕಾರ್ಜುನ ದೊಡ್ಡಮನಿ ಹತ್ಯೆ ಮಾಡಲಾಗಿದೆ. ಜೇಬಿನಲ್ಲಿದ್ದ ದಾಖಲೆಗಳ ಮೂಲಕ ಗುರುತು ಪತ್ತೆಹಚ್ಚಿ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ.
ಆಟೋ ಓಡಿಸುತ್ತಿದ್ದರು; ಮಲ್ಲಿಕಾರ್ಜುನ ದೊಡ್ಡಮನಿ ಸಂಸದ ರಮೇಶ್ ಜೊಗಜಿಣಗಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಮೂರು ವರ್ಷದ ಹಿಂದೆ ಕೆಲಸ ಬಿಟ್ಟಿದ್ದರು. ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು.
ಕೊಲೆಯಾದ ಸ್ಥಳದಲ್ಲಿ ಆಟೋ ಸಹ ಪತ್ತೆಯಾಗಿದೆ. ಹಣಕಾಸಿನ ವಿಚಾರಕ್ಕೆ ಕೊಲೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಬಾಡರ ಓಣಿಯಲ್ಲಿ ವಾಸವಾಗಿದ್ದ ಮಲ್ಲಿಕಾರ್ಜುನ ದೊಡ್ಡಮನಿ ಕೆಲವು ದಿನಗಳಿಂದ ಆಟೋವನ್ನು ಎಲ್ಲೆಲ್ಲೋ ಬಿಟ್ಟು ಬಿಡುತ್ತಿದ್ದರು.
ಬುಧವಾರ ರಾತ್ರಿ ಅಕ್ಕನನ್ನು ಮನೆಗೆ ಬಿಡಲು ತೆರಳಿದ್ದರು. ವಾಪಸ್ ಬರುವಾಗ ದುಷ್ಕರ್ಮಿಗಳು ಅಡ್ಡಗಟ್ಟಿ ಹತ್ಯೆ ಮಾಡಿದ್ದಾರೆ. ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೊಲೆ ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ.












Click it and Unblock the Notifications