ವಿಜಯಪುರ ಪಾಲಿಕೆ ಮೇಯರ್ ಚುನಾವಣೆ: ಸಚಿವ ಎಂ. ಬಿ. ಪಾಟೀಲ್ ವಿರುದ್ಧ ಬಿಜೆಪಿ ದೂರು
ವಿಜಯಪುರ, ಜನವರಿ 28: ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಯ ಚುನಾವಣೆ ಬಗ್ಗೆ ರಾಜ್ಯದ ಪ್ರತಿಪಕ್ಷ ಬಿಜೆಪಿ ಅಸಮಾಧಾನಗೊಂಡಿದೆ. ಮಹಾನಗರ ಪಾಲಿಕೆ ಅಧಿಕಾರಿಗಳು ಪಾರದರ್ಶಕವಾಗಿ ಚುನಾವಣೆಯನ್ನು ನಡೆಸಿಲ್ಲ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ್ ಕುಮ್ಮಕ್ಕಿನಿಂದ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಮರೆತು ಸಚಿವರ ಅಣತಿಯಂತೆ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪವನ್ನು ಮಾಡಿದೆ.
ಈ ಕುರಿತು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಸೇರಿದಂತೆ ಬಿಜೆಪಿ ಮುಖಂಡರ ನಿಯೋಗ ಪಕ್ಷದ ರಾಜ್ಯ ಕಾನೂನು ಪ್ರಕೋಷ್ಠದ ವತಿಯಿಂದ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಕೆ ಮಾಡಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಹಾಗೂ ಜಿಲ್ಲಾ ಉಸ್ತುವಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ದೂರಿನ ವಿವರಗಳು: ಈ ದೂರು ವಿಜಯಪುರ ಮಹಾನಗರ ಪಾಲಿಕೆಯ 22ನೇ ಅವಧಿಗೆ ಮಹಾಪೌರರ ಹಾಗೂ ಉಪ-ಮಹಾಪೌರರನ್ನು ಚುನಾಯಿಸಲು ದಿನಾಂಕ 27.01.2025ರ ಸೋಮವಾರದಂದು ನಡೆದ ಚುನಾವಣೆಯ ಕುರಿತು ಎಂಬ ವಿಷಯ ಒಳಗೊಂಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಹಾಪೌರರ ಹಾಗೂ ಉಪ-ಮಹಾಪೌರರನ್ನು ಚುನಾಯಿಸಲು ಪ್ರಕ್ರಿಯೆಯನ್ನು ಪ್ರಾರಂಭಿಸಿದ ಚುನಾವಣಾಧಿಕಾರಿಗಳಾದ RC-Regional Commissioner ಅವರು ಮಹಾಪೌರ ಹುದ್ದೆಯ ಚುನಾವಣೆಯನ್ನು ನಿಯಮ ಬದ್ಧವಾಗಿ ಪೂರ್ಣಗೊಳಿಸಿರುತ್ತಾರೆ.
ನಂತರ ಉಪ-ಮಹಾಪೌರರ ಚುನಾವಣೆಯ ಪ್ರಕ್ರಿಯೆಯನ್ನು ಪ್ರಾರಂಭಿಸಿದ ಚುನಾವಣಾಧಿಕಾರಿಗಳಾದ RC- Regional Commissioner ಅವರು ಬಿಜೆಪಿ ಅಭ್ಯರ್ಥಿ ಸುಮಿತ್ರ ರಾಜು ಜಾಧವ್ ಅವರ ಆಯ್ಕೆ ಪ್ರಕ್ರಿಯೆ ನಡೆಯುವ ಸಂದರ್ಭದಲ್ಲಿ ಸುಮಿತ್ರ ರಾಜು ಜಾಧವ್ ಅವರ ಪರವಾಗಿ ಮತ ಚಲಾಯಿಸುವವರು ಕೈ ಮೇಲೆತ್ತಿಸಿದ ನಂತರ ಅವರ ಆಯ್ಕೆಗೆ ಸಂಬಂಧಿಸಿದಂತೆ ಕೈ ಎತ್ತಿದ ಎಲ್ಲಾ ಸದಸ್ಯರ ಸಹಿಯನ್ನು ಪಡೆದಿರುತ್ತಾರೆ.
ನಂತರದ ಪ್ರಕ್ರಿಯೆ ಸುಮಿತ್ರ ರಾಜು ಜಾಧವ್ ಅವರ ಆಯ್ಕೆಯ ವಿರುದ್ಧ ಮತ ಚಲಾಯಿಸುವವರ ಕೈಎತ್ತಿ ಎನ್ನುವ ಬದಲು ಕಾಂಗ್ರೆಸ್ ಅಭ್ಯರ್ಥಿಯಾದ ವಿಮಲಾ ಗಂ. ರಫೀಕ ಅಹ್ಮದ್ ಕಾಣೆ ಅವರ ವಿರುದ್ಧವಾಗಿ ಮತ ಚಲಾಯಿಸುವವರು ಕೈ ಎತ್ತಬೇಕು ಎಂದು ಹೇಳಿರುತ್ತಾರೆ.
ವಿಮಲಾ ಗಂ. ರಫೀಕ್ ಅಹ್ಮದ್ ಕಾಣೆ ವಿರುದ್ಧವಾಗಿ ಮತ ಚಲಾಯಿಸಿದವರ ಸಹಿ ಪಡೆಯುವ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ನ ಮಹಾನಗರ ಪಾಲಿಕೆ ಸದಸ್ಯರು ಹಾಗೂ ವಿಧಾನಪರಿಷತ್ ಸದಸ್ಯರು ಚುನಾವಣಾ ಪ್ರಕ್ರಿಯೆ ನಡೆಯದಂತೆ ತಡೆಯೊಡ್ಡಿರುತ್ತಾರೆ. ತೀವ್ರವಾಗಿ ವಿರೋಧ ಮಾಡುತ್ತಾ ಚುನಾವಣಾ ಅಧಿಕಾರಿಗಳ ವಿರುದ್ಧ ಘೋಷಣೆಯನ್ನು ಕೂಗುತ್ತಾ ಚುನಾವಣಾ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ಒತ್ತಡ ಹೇರಿರುತ್ತಾರೆ. ಸಭೆಯಲ್ಲಿ ಗದ್ದಲ ಸೃಷ್ಠಿಸಿ ಚುನಾವಣಾ ಅಧಿಕಾರಿಗಳ ಮೇಲೆ ತೀವ್ರ ಒತ್ತಡವನ್ನು ಒಡ್ಡಿರುತ್ತಾರೆ ಎಂದು ಬಿಜೆಪಿ ದೂರಿನಲ್ಲಿ ಹೇಳಿದೆ.
ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು, ಶಾಸಕರು, ಸಂಸದರು ಚುನಾವಣಾ ಪ್ರಕ್ರಿಯೆಯನ್ನು ಶಾಂತ ರೀತಿಯಲ್ಲಿ ಮುಂದುವರೆಸಿ ಪ್ರಕ್ರಿಯೆಯು ತಪ್ಪಾಗಿದ್ದಲ್ಲಿ ಸರಿಪಡಿಸಿಕೊಂಡು ಮುಕ್ತಾಯ ಮಾಡಿ ಎಂದು ಚುನಾವಣಾಧಿಕಾರಿಗಳನ್ನು ಪರಿಪರಿಯಾಗಿ ವಿನಂತಿಸಿದೆವು. ಅದಕ್ಕೆ ಯಾವುದೇ ಸ್ಪಂದನೆ ಸಿಗಲಿಲ್ಲ. ಕಾಂಗ್ರೆಸ್ ಸದಸ್ಯರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಒತ್ತಡಕ್ಕೆ ಮಣಿದು ಚುನಾವಣಾಧಿಕಾರಿಗಳು ನಮ್ಮ ವಿನಂತಿಗೆ ಯಾವ ಬೆಲೆಯನ್ನೂ ನೀಡದೇ, ನಾನು ಉಪ-ಮಹಾಪೌರರ ಚುನಾವಣೆಯನ್ನು ಮುಂದೂಡುತ್ತಿದ್ದೇನೆ ಎಂದು ಘೋಷಿಸಿರುತ್ತಾರೆ.
ನಾವು ನಮ್ಮ ಸ್ಥಾನಗಳಲ್ಲಿಯೇ ಕುಳಿತು ಚುನಾವಣಾಧಿಕಾರಿಗಳಿಗೆ ತಾವು ಒತ್ತಡಕ್ಕೆ ಈಡಾಗದೇ ತಮ್ಮ ನಿರ್ಣಯವನ್ನು ಪರಿಶೀಲಿಸಿ ಉಪ-ಮಹಾಪೌರರ ಹುದ್ದೆ ಚುನಾವಣಾ ಪ್ರಕ್ರಿಯೆಯನ್ನು ಮತ್ತೊಮ್ಮೆ ನಡೆಸಬೇಕೆಂದು ವಿನಂತಿಸಿದರೂ ಚುನಾವಣಾಧಿಕಾರಿಗಳು ಪ್ರತಿಕ್ರಿಯಿಸದೆ ಕೋರ್ಟ್ನಲ್ಲಿ ಎಲ್ಲವನ್ನೂ ಪ್ರಶ್ನಿಸಿ ಎಂದು ಉತ್ತರಿಸಿರುತ್ತಾರೆ. ಚುನಾವಣಾಧಿಕಾರಿಗಳು ಉಪ ಮಹಾಪೌರರ ಆಯ್ಕೆ ಸಂಬಂಧದಲ್ಲಿ ಬಾಯಿ ತಪ್ಪಿನಿಂದ ಆದದ್ದು ಎಂದು ಹೇಳಿರುತ್ತಾರೆ ಮತ್ತು ಸಹಿ ಪಡೆದಿರುವುದು ಸರಿಯಾಗಿದೆ ಎಂದು ಹೇಳಿದ್ದಾರೆ.
ಚುನಾವಣಾಧಿಕಾರಿಗಳು ಉಪ-ಮಹಾಪೌರರ ಚುನಾವಣೆಯನ್ನು ನಡೆಸುವ ಸಂದರ್ಭದಲ್ಲಿ ಸುಮಿತ್ರ ರಾಜು ಜಾಧವ್ ಅವರ ಪರವಾಗಿ ಮತ ಚಲಾಯಿಸಿದವರ ಸಹಿ ಪಡೆದ ನಂತರ, ಅವರ ವಿರುದ್ಧವಾಗಿ ಮತ ಚಲಾಯಿಸುವವರ ಮತ ಕೇಳದೆ ಕಾಂಗ್ರೆಸ್ ಅಭ್ಯರ್ಥಿಯಾದ ವಿಮಲಾ ಗಂ. ರಫೀಕ್ ಅಹ್ಮದ್ ಕಾಣೆ ವಿರುದ್ಧವಾಗಿ ಮತ ನೀಡುವವರು ಯಾರು ಎಂದು ಕೇಳಿರುವುದು ಬಾಯಿತಪ್ಪಿನಿಂದ ಆಗಿರದೆ ಇದು ಒಂದು ಪೂರ್ವನಿಯೋಜಿತ ಯೋಜನೆಯಾಗಿದೆ ಎಂಬ ಸಂಶಯ ನಮಗೆ ಇದೆ. ಈ ರೀತಿ ನಡೆದಾಗ ಕಾಂಗ್ರೆಸ್ ಸದಸ್ಯರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಗದ್ದಲವನ್ನುಂಟುಮಾಡಿ ಚುನಾವಣಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ ಒಂದು ಪೂರ್ವನಿಯೋಜಿತ ಪ್ರಯತ್ನವಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಇದನ್ನು ತಾವು ಅತ್ಯಂತ ಗಂಭೀರವಾಗಿ ಪರಿಗಣಿಸಿ ಉಪ ಮಹಾಪೌರರ ಹುದ್ದೆಯ ಪ್ರಕ್ರಿಯೆಯನ್ನು ಮುಂದೂಡಿರುವ ಚುನಾವಣಾಧಿಕಾರಿಗಳ ವಿರುದ್ಧ ಸೂಕ್ತ ಕ್ರಮವನ್ನು ಜರುಗಿಸಬೇಕೆಂದು ಕೋರುತ್ತೇವೆ. ಚುನಾವಣೆಯನ್ನು ತಕ್ಷಣವೇ ನಡೆಸಬೇಕೆಂದು ವಿನಂತಿಸುತ್ತೇವೆ. ಚುನಾವಣೆಯ ಪ್ರಕ್ರಿಯೆ ಪೂರ್ವಗೊಳಿಸುವ ಸಮಯ ಸಂಜೆ 5:30ರ ವರೆಗೂ ಬಿಜೆಪಿ ಎಲ್ಲಾ ಸದಸ್ಯರು ಚುನಾವಣಾ ಸ್ಥಳದಲ್ಲಿಯೇ ಉಪಸ್ಥಿತರಿದ್ದೆವು.
ನ್ಯಾಯಾಲಯದ ಆದೇಶವನ್ನು ಗಂಭೀರವಾಗಿ ಪರಿಗಣಿಸಿ ಶಿಸ್ತು ಬದ್ಧವಾಗಿ ಹಾಗೂ ನಿಯಮಾನುಸಾರ ಚುನಾವಣೆಯನ್ನು ನಡೆಸದೇ ಕಾಂಗ್ರೆಸ್ ಪಕ್ಷದ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಉಸ್ತುವಾರಿ ಸಚಿವರಾದ ಎಂ. ಬಿ. ಪಾಟೀಲ್ ಮತ್ತು ವಿಧಾನಸಭಾ ಸದಸ್ಯರ ತಾಳಕ್ಕೆ ತಕ್ಕಂತೆ ಚುನಾವಣಾಧಿಕಾರಿಗಳು ನಡೆದುಕೊಂಡಿರುವುದು ಅಕ್ಷಮ್ಯ ಅಪರಾಧವಾಗಿದ್ದು ಅವರ ವಿರುದ್ಧ ಶಿಸ್ತುಕ್ರಮ ಜಾರಿಗೊಳಿಸಬೇಕೆಂದು ಕೋರುತ್ತೇವೆ.
ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷದ ಮಹಾನಗರ ಪಾಲಿಕೆ ಸದಸ್ಯರು ಮತ್ತು ವಿಧಾನಪರಿಷತ್ ಸದಸ್ಯರೊಡಗೂಡಿ ಸೋಲುವ ಭೀತಿಯಿಂದ ಇಡೀ ಚುನಾವಣಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವ ಪ್ರಯತ್ನ ಮಾಡಿದ ಎಂ. ಬಿ. ಪಾಟೀಲ್ ವಿರುದ್ಧ ಕ್ರಮ ಜರುಗಿಸಬೇಕೆಂದು ವಿನಂತಿಸುತ್ತೇವೆ ಎಂದು ಬಿಜೆಪಿ ದೂರಿನಲ್ಲಿ ಆಗ್ರಹಿಸಿದೆ.
-
By Election: ಸಿದ್ದರಾಮಯ್ಯರಿಂದ ಅಹಿಂದ ಜೊತೆಗೆ ಗುತ್ತಿಗೆ ರಾಜಕಾರಣ: ಮಾಜಿ ಸಿಎಂ ಗಡುಗು -
ಸೋಷಿಯಲ್ ಮೀಡಿಯಾಗೆ ವಯೋಮಿತಿ ಫಿಕ್ಸ್?: ಕಠಿಣ 'ಎಐ' ಕಾನೂನು ಜಾರಿಗೆ ಸಂಸದೀಯ ಸಮಿತಿ ಶಿಫಾರಸು -
IPL Tickets: ನಾವು ವಿಐಪಿಗಳು; 5 ಫ್ರೀ ಟಿಕೆಟ್ ಕೊಡಲಿ: ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ -
ದಾವಣಗೆರೆ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಬೆಂಬಲಕ್ಕೆ ನಿರ್ಧಾರ -
Price Hike: ಕೇಂದ್ರದಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಹೇಳಿಕೆ, ದರ ಹೆಚ್ಚಿಸಿದ್ದೇ ಕಾಂಗ್ರೆಸ್; ಡಿಕೆಶಿಗೆ ತಿರುಗೇಟು -
Gen Z ಪ್ರತಿಭಟನೆಯಲ್ಲಿ 'ಪಾತ್ರ': ಬಲೆನ್ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ನೇಪಾಳ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ಬಂಧನ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ












Click it and Unblock the Notifications