ಕಾಂಗ್ರೆಸ್ ಸೋಲಿಸುವುದೇ ಜೆಡಿಎಸ್ನ ಗುರಿ: ಸಿದ್ದರಾಮಯ್ಯ
ವಿಜಯಪುರ, ಅ.27: ಜೆಡಿಎಸ್ ನಾಯಕರಿಗೆ ಬಿಜೆಪಿಯನ್ನು ಸೋಲಿಸುವುದಕ್ಕಿಂತ ಕಾಂಗ್ರೆಸ್ ಸೋಲಿಸುವುದೇ ಮುಖ್ಯ ಗುರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
"ಕಾಂಗ್ರೆಸ್ನ್ನು ಸೋಲಿಸುವ ಉದ್ದೇಶದಿಂದಲೇ ಜೆಡಿಎಸ್ ಉಪಚುನಾವಣೆ ನಡೆಯುವ ಎರಡೂ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ ಎಂದು ಸಿದ್ದರಾಮಯ್ಯ ಹಿಂದೆ ಆರೋಪಿಸಿದ್ದರು. ಅದಕ್ಕೆ ಪ್ರತಿಯಾಗಿ, ಜೆಡಿಎಸ್ ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಕಾಂಗ್ರೆಸ್ನವರು ಹೇಳಬೇಕಿಲ್ಲ. ಹಾಗಿದ್ದರೆ ಅವರೇ ಮುಸ್ಲಿಮರಿಗೆ ಟಿಕೆಟ್ ನೀಡಬಹುದಿತ್ತು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದರು. ಈಗ ಮುಂದುವರಿದು, ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸೋಲಿಸುವುದೇ ಜಡಿಎಸ್ನ ಗುರಿಯಾಗಿದೆ ಎಂದು ಹೇಳಿದ್ದಾರೆ"
ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮಾತನಾಡಿದರು.

ಬಿಜೆಪಿಗೂ ಜೆಡಿಎಸ್ಗೂ ಯಾವದೇ ವ್ಯತ್ಯಾಸ ಇಲ್ಲ. ಜೆಡಿಎಸ್ಗೆ ಮತ ಹಾಕಿದರೆ ಅದು ಪರೋಕ್ಷವಾಗಿ ಜೆಡಿಎಸ್ಗೆ ಹಾಕಿದಂತೆ ಆಗುತ್ತದೆ. ಹಾಗಾಗಿ ಜೆಡಿಎಸ್ಗೆ ಯಾವ ಕಾರಣಕ್ಕೂ ಮತ ನೀಡಬಾರದು ಎಂದು ಹೇಳಿದರು.
"ಜೆಡಿಎಸ್ ನಾಯಕರು ಮಾತುಗಳನ್ನು ಕೇಳುತ್ತಿದ್ದೇವೆ. ಅವರಿಗೆ ಆಡಳಿತದಲ್ಲಿರುವ ಬಿಜೆಪಿಗಿಂತ ಕಾಂಗ್ರೆಸ್ ಬಗ್ಗೆಯೇ ಹೆಚ್ಚು ಮಾತನಾಡುತ್ತಾರೆ. ಅವರಿಗೆ ಬಿಜೆಪಿ ಸೋಲುವುದಕ್ಕಿಂತ ಕಾಂಗ್ರೆಸ್ ಸೋಲುವುದು ಪ್ರಮುಖ ಗುರಿಯಾಗಿದೆ" ಎಂದು ಟೀಕಿಸಿದರು.
ಅಚ್ಚೇದಿನ ಎಂಬ ಭ್ರಮೆ:
ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಚೇ ದಿನದ ಭ್ರಮೆಗೆ ಒಳಗಾಗಿ ಮತ ನೀಡಿದ ಜನರು ಇವತ್ತು ಪರಿತಪಿಸುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ, ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆ ಬಡವರು ಖರೀದಿಸದಷ್ಟು ದುಬಾರಿಯಾಗಿವೆ. ಅಭಿವೃದ್ಧಿ ಮಾಡುತ್ತೇವೆ ಎಂದು ಸುಳ್ಳು ಹೇಳಿ ಜನರ ಸುಲಿಗೆ ಮಾಡುತ್ತಿದ್ದಾರೆ. ಸದನದಲ್ಲಿ ಬೆಲೆಯೇರಿಕೆ ಬಗ್ಗೆ ಮಾತನಾಡುವಾಗ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಮಾಡಿ ಎಂದು ಬಸವರಾಜ ಬೊಮ್ಮಾಯಿಯವರಿಗೆ ಹೇಳಿದೆ. ಆದರೆ ಅವರು ಕಡಿಮೆ ಮಾಡಲ್ಲ ಎಂದರು.

ನಮ್ಮ ಸರ್ಕಾರದ ಜನಪರ ಯೋಜನೆಗಳನ್ನು ನಿಲ್ಲಿಸುವ ಮೂಲಕ ತಮ್ಮಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಬಿಜೆಪಿ ಸರ್ಕಾರ ಸಾಬೀತು ಮಾಡಿದೆ. ರಾಜ್ಯಕ್ಕೆ ಬಿಜೆಪಿ ಸರ್ಕಾರದ ಕೊಡುಗೆ ಶೂನ್ಯ. ಏನಾದರೂ ಅಭಿವೃದ್ಧಿ ಮಾಡಿದ್ದರೆ ಬಸವರಾಜ ಬೊಮ್ಮಾಯಿಯವರು ನನ್ನ ಸವಾಲು ಸ್ವೀಕರಿಸಿ ಒಂದೇ ವೇದಿಕೆ ಮೇಲೆ ಚರ್ಚೆಗೆ ಬರುತ್ತಿದ್ದರು. ಇವತ್ತಿನವರೆಗೂ ಅವರು ಸುಮ್ಮನಿದ್ದಾರೆ ಎಂದರೆ ಸೋಲು ಒಪ್ಪಿಕೊಂಡಿದ್ದಾರೆ ಎಂದರ್ಥ ಎಂದು ಹೇಳಿದರು.
"ನಾನು ಬಸವಣ್ಣನವರ ಅನುಯಾಯಿ. ಬಸವ ಜಯಂತಿಯಂದೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅವರ ಸಮಾನತೆಯ ಸಮಾಜ ನಿರ್ಮಾಣದ ಕನಸನ್ನು ನನಸಾಗಿಸಲು ಐದು ವರ್ಷಗಳ ಕಾಲ ಶ್ರಮಿಸಿದ್ದೆ. ನಮ್ಮ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಬಸವಣ್ಣನವರ ದಾಸೋಹ ತತ್ವ ಪ್ರೇರಣೆ. ಈ ಅನ್ನಭಾಗ್ಯದ ಅಕ್ಕಿಗೆ ಸರ್ಕಾರ ಕತ್ತರಿ ಹಾಕಿ ಈಗ ಐದು ಕೆ.ಜಿ ಗೆ ಇಳಿಸಿದೆ. ಬಡವರ ಹೊಟ್ಟೆ ಮೇಲೆ ಹೊಡಿಬೇಡಿ ಎಂದರೆ ಸರ್ಕಾರ ನನ್ನ ಮಾತಿಗೆ ಬೆಲೆ ಕೊಡಲಿಲ್ಲ'' ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರವನ್ನು ಲಾಕ್ ಮಾಡಿ:
ಬಡವರ ಮನೆಗಳಿಗೆ ಅನುದಾನ ನೀಡದೆ ಖಜಾನೆಯನ್ನು ಲಾಕ್ ಮಾಡಿಕೊಂಡಿರುವ ರಾಜ್ಯ ಸರ್ಕಾರವನ್ನು ಲಾಕ್ ಮಾಡಲು 30 ನೇ ತಾರೀಖು ಉಪಚುನಾವಣೆ ರೂಪದಲ್ಲಿ ಜನರಿಗೆ ಅವಕಾಶ ಬಂದಿದೆ. ಬಿಜೆಪಿಗೆ ಮತ ನೀಡದೆ ತಕ್ಕ ಶಾಸ್ತಿ ಮಾಡಬೇಕು. ರಾಜ್ಯದಲ್ಲಿ ರೈತರಿಗೆ ಗೊಬ್ಬರ ಸಿಗುತ್ತಿಲ್ಲ, ರೈತರು ಗೊಬ್ಬರದ ಅಂಗಡಿಗಳಿಗೆ ಹೋಗಿ ಖಾಲಿ ಚೀಲದ ಜೊತೆ ಮನೆಗೆ ಬರುತ್ತಿದ್ದಾರೆ, ಬಸವರಾಜ ಬೊಮ್ಮಾಯಿ, ಬಿ.ಸಿ ಪಾಟೀಲ್ ದುಡ್ಡಿನ ಚೀಲ ತಗೊಂಡು ಬಂದು ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರದಲ್ಲಿ ಕೂತಿದ್ದಾರೆ. ಆಡಳಿತ ಯಂತ್ರ ನಿಷ್ಕ್ರಿಯವಾಗಿದೆ ಎಂದು ಟೀಕಿಸಿದರು.
ಸಿಂದಗಿಯಲ್ಲಿ ಕಳೆದ ಹಲವು ದಿನಗಳಿಂದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ, ಇಷ್ಟು ದಿನದ ಜನರ ಉತ್ಸಾಹ ಗಮನಿಸಿದರೆ ಅಶೋಕ್ ಮನಗೂಳಿ ಅವರು ಗೆಲುವು ಖಚಿತ ಎಂಬುದು ಕಂಡುಬರುತ್ತಿದೆ. ನಮ್ಮ ಸರ್ಕಾರದ ಯೋಜನೆಗಳು ಮತ್ತು ಎಂ.ಸಿ ಮನಗೂಳಿ ಅವರ ಅಭಿವೃದ್ಧಿ ಕಾರ್ಯಗಳು ಅಶೋಕ್ ಮನಗೂಳಿ ಅವರಿಗೆ ಶ್ರೀರಕ್ಷೆಯಾಗಿವೆ ಎಂದು ಹೇಳಿದರು.












Click it and Unblock the Notifications