ಎಚ್ಚರ ಬೇಕಿತ್ತು: ಪ್ರಯಾಣಿಕನ ಸಾವಿಗೆ ಕಾರಣವಾದ KSRTC ಚಾಲಕನಿಗೆ ಜೈಲು
ಚಿಕ್ಕಬಳ್ಳಾಪುರ: ಇಲ್ಲಿನ ಬಸ್ ನಿಲ್ದಾಣದಲ್ಲಿ ನಡೆದಿದ್ದ ಹಳೆಯ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಕೆಎಸ್ಆರ್ಟಿಸಿ (KSRTC) ಚಾಲಕನಿಗೆ ವಿಧಿಸಲಾಗಿದ್ದ ಜೈಲು ಶಿಕ್ಷೆಯನ್ನು ಎತ್ತಿಹಿಡಿದಿದೆ. 2019ರಲ್ಲಿ ಚಿಕ್ಕಬಳ್ಳಾಪುರ ಬಸ್ ನಿಲ್ದಾಣದ ಆವರಣದಲ್ಲಿ ಕೆಎಸ್ಆರ್ಟಿಸಿ ಬಸ್ ಚಾಲಕ ನಾಗರಾಜ್ ಎಂಬಾತ ಪ್ರಯಾಣಿಕರೊಬ್ಬರ ಮೇಲೆ ಬಸ್ ಹರಿಸಿದ್ದ. ಈ ಭೀಕರ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಪ್ರಯಾಣಿಕರೊಬ್ಬರು ಮೃತಪಟ್ಟಿದ್ದರು. ಈ ಸಂಬಂಧ ಚಾಲಕನ ವಿರುದ್ಧ ಅಜಾಗರೂಕತೆಯ ಚಾಲನೆ ಮತ್ತು ಸಾವು ಉಂಟುಮಾಡಿದ ಆರೋಪದಡಿ ಪ್ರಕರಣ ದಾಖಲಾಗಿತ್ತು.
ಕೆಳ ನ್ಯಾಯಾಲಯಗಳ ತೀರ್ಪು ಏನು?
2023ರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಚಾಲಕ ನಾಗರಾಜ್ನನ್ನು ಅಪರಾಧಿ ಎಂದು ಘೋಷಿಸಿ, ಐಪಿಸಿ ಸೆಕ್ಷನ್ 304ಎ (ಅಜಾಗರೂಕತೆಯಿಂದ ಸಾವು ಉಂಟುಮಾಡುವುದು) ಅಡಿಯಲ್ಲಿ 1 ವರ್ಷದ ಸಾಧಾರಣ ಜೈಲು ಶಿಕ್ಷೆ ಹಾಗೂ 5,000 ರೂ. ದಂಡ ವಿಧಿಸಿತ್ತು. ಜೊತೆಗೆ ಐಪಿಸಿ ಸೆಕ್ಷನ್ 279 (ಅಪಾಯಕಾರಿ ಚಾಲನೆ) ಅಡಿಯಲ್ಲಿ 1 ತಿಂಗಳ ಜೈಲು ಶಿಕ್ಷೆ ಮತ್ತು 1,000 ರೂ. ದಂಡ ಕೂಡ ವಿಧಿಸಲಾಗಿತ್ತು. ಈ ಆದೇಶವನ್ನು ಈಗ ಸೆಷನ್ಸ್ ನ್ಯಾಯಾಲಯವೂ ಎತ್ತಿಹಿಡಿದಿತ್ತು.

ಹೈಕೋರ್ಟ್ ಮೆಟ್ಟಿಲೇರಿದ್ದ ಚಾಲಕ
ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಚಾಲಕ ನಾಗರಾಜ್ 2023ರಲ್ಲಿ ಹೈಕೋರ್ಟ್ಗೆ ಕ್ರಿಮಿನಲ್ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದ. "ಒಂದು ವೇಳೆ ಶಿಕ್ಷೆ ಖರಾರಾದರೆ ತಾನು ಸರ್ಕಾರಿ ಕೆಲಸ ಕಳೆದುಕೊಳ್ಳಬೇಕಾಗುತ್ತದೆ" ಎಂಬ ವಾದವನ್ನು ಆತ ಮಂಡಿಸಿದ್ದ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಏಕಸದಸ್ಯ ಪೀಠವು ಚಾಲಕನ ಮನವಿಯನ್ನು ತಿರಸ್ಕರಿಸಿದೆ. ಹೈಕೋರ್ಟ್ ತನ್ನ ತೀರ್ಪಿನಲ್ಲಿ ಪ್ರಮುಖವಾಗಿ ಎರಡು ಅಂಶಗಳನ್ನು ಉಲ್ಲೇಖಿಸಿದೆ.
ಬಸ್ ನಿಲ್ದಾಣದ ಒಳಗೆ ಸಾರ್ವಜನಿಕರು ಮತ್ತು ಪ್ರಯಾಣಿಕರ ಓಡಾಟ ನಿರಂತರವಾಗಿರುತ್ತದೆ. ಒಬ್ಬ ವೃತ್ತಿಪರ ಚಾಲಕನಾಗಿ ನಾಗರಾಜ್, ನಿಲ್ದಾಣದೊಳಗೆ ಬಸ್ ಚಲಾಯಿಸುವಾಗ ಯಾವುದೇ ಕ್ಷಣದಲ್ಲಿ ಏನಾದರೂ ಅನಿರೀಕ್ಷಿತ ಘಟನೆ ಸಂಭವಿಸಬಹುದು ಎಂಬ ಮುನ್ನೆಚ್ಚರಿಕೆ ವಹಿಸಬೇಕಿತ್ತು. ಆತ ನಿಯಂತ್ರಿತ ವೇಗದಲ್ಲಿ ಜಾಗರೂಕತೆಯಿಂದ ಬಸ್ ಚಲಾಯಿಸಿದ್ದರೆ ಸಕಾಲದಲ್ಲಿ ಬ್ರೇಕ್ ಹಾಕಿ ಅಪಘಾತವನ್ನು ತಪ್ಪಿಸಬಹುದಿತ್ತು. ಶಿಕ್ಷೆ ಅನುಭವಿಸಿದರೆ ಕೆಲಸ ಹೋಗುತ್ತದೆ ಎಂಬ ಒಂದೇ ಕಾರಣಕ್ಕೆ ಅಪರಾಧದ ತೀವ್ರತೆಯನ್ನು ಕಡಿಮೆ ಮಾಡಲು ಅಥವಾ ಜೈಲು ಶಿಕ್ಷೆಯನ್ನು ರದ್ದುಪಡಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.
ಶಿಕ್ಷೆಯಲ್ಲಿ ಆದ ಸಣ್ಣ ಬದಲಾವಣೆ
ಹೈಕೋರ್ಟ್ ಚಾಲಕನ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ್ದು, ಶಿಕ್ಷೆಯ ಪ್ರಮಾಣದಲ್ಲಿ ಸಣ್ಣ ಮಾರ್ಪಾಡು ಮಾಡಿದೆ. ಐಪಿಸಿ ಸೆಕ್ಷನ್ 304ಎ ಅಡಿಯಲ್ಲಿ ವಿಧಿಸಲಾಗಿರುವ 1 ವರ್ಷದ ಜೈಲು ಶಿಕ್ಷೆ ಮತ್ತು 5,000 ರೂ. ದಂಡವನ್ನು ನ್ಯಾಯಾಲಯ ಖಾಯಂಗೊಳಿಸಿದೆ. ಆದರೆ, ಸೆಕ್ಷನ್ 279ರ ಅಡಿಯಲ್ಲಿ ನೀಡಲಾಗಿದ್ದ ಹೆಚ್ಚುವರಿ 1 ತಿಂಗಳ ಪ್ರತ್ಯೇಕ ಜೈಲು ಶಿಕ್ಷೆಯನ್ನು ಮಾತ್ರ ರದ್ದುಪಡಿಸಿದೆ. ಬೇರೆ ಯಾವುದೇ ಕಾರಣಗಳೂ ಶಿಕ್ಷೆ ಕಡಿತಗೊಳಿಸಲು ಪೂರಕವಾಗಿಲ್ಲ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ.













Click it and Unblock the Notifications