Get Updates
Get notified of breaking news, exclusive insights, and must-see stories!

ಕಾಂಗ್ರೆಸ್‌ಗೆ ಅಭ್ಯರ್ಥಿ ಸಿಗದೆ ಮನಗೂಳಿ ಪುತ್ರನನ್ನು ಹೈಜಾಕ್ ಮಾಡಿದೆ; ಎಚ್‌ಡಿಕೆ

ವಿಜಯಪುರ, ಅಕ್ಟೋಬರ್ 20: ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರ ಕುಟುಂಬಕ್ಕೆ, ಜಾತ್ಯತೀತ ಜನತಾದಳ ಮತ್ತು ಸಿಂದಗಿ ಕ್ಷೇತ್ರದ ನಡುವೆ ವಾತ್ಸಲ್ಯಪೂರ್ಣವಾದ ಕರುಳುಬಳ್ಳಿಯ ಸಂಬಂಧ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಣ್ಣಿಸಿದರು.

ಸಿಂದಗಿ ಕ್ಷೇತ್ರದ ಹೊಲಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಮಾಡುವ ವೇಳೆ ಅವರು ಮಾತನಾಡಿದರು. ಸುಮಾರು ಮೂವತ್ತು ವರ್ಷಗಳ ಕಾಲ ದಿವಂಗತ ಎಂ.ಸಿ. ಮನಗೂಳಿ ಕಾಕಾ ದೇವೇಗೌಡರ ಕುಟುಂಬದ ಸದಸ್ಯರಂತೆ ಇದ್ದರು. ಅವರನ್ನು ದೇವೇಗೌಡರು ಸ್ವಂತ ಸಹೋದರನಂತೆ ನೋಡುತ್ತಿದ್ದರು. ಏಳು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಎರಡು ಸಲ ಗೆದ್ದ ಅವರನ್ನು ಎರಡೂ ಸಲವೂ ಪಕ್ಷ ಮಂತ್ರಿ ಮಾಡಿತ್ತು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನೆನಪು ಮಾಡಿಕೊಂಡರು.

ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿ ಆಗಿದ್ದಾಗ ದೇವೇಗೌಡರು ಸಿಂದಗಿ ಕ್ಷೇತ್ರಕ್ಕೆ ಅನೇಕ ಯೋಜನೆಗಳನ್ನು ನೀಡಿದ್ದರು. ನೀರಾವರಿ ಯೋಜನೆಗಳನ್ನು ಜಾರಿ ಮಾಡಿದ್ದರು. ಅದಕ್ಕೆ ಕುರುಹಾಗಿ ದೇವೇಗೌಡರು ಮತ್ತು ಮನಗೂಳಿ ಅವರಿಬ್ಬರ ಪ್ರತಿಮೆಗಳನ್ನು ಜನರು ಕೃತಜ್ಞತಾಪೂರ್ವಕವಾಗಿ ಇಲ್ಲಿ ಸ್ಥಾಪನೆ ಮಾಡಿದ್ದಾರೆ. ಇಂಥ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಳ್ಳುವ ಅದೃಷ್ಟ ನನ್ನದು ಎಂದರು.

Sindagi By- Election: Congress Hijacked MC Managooli Son Says HD Kumaraswamy

ಎಂ.ಸಿ. ಮನಗೂಳಿ ಪುತ್ರನನ್ನು ಹೈಜಾಕ್ ಮಾಡಿದ್ದಾರೆ
ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಯ ಗತಿ ಇಲ್ಲದೆ ಮನಗೂಳಿ ಕಾಕಾರವರ ಪುತ್ರನನ್ನು ಹೈಜಾಕ್ ಮಾಡಿ ಅಭ್ಯರ್ಥಿ ಮಾಡಿದ್ದಾರೆ. ಆದರೆ, ಮನಗೂಳಿಯವರ ಜನಪ್ರಿಯತೆ, ಅವರು ಮಾಡಿದ ಸೇವೆ ಹಾಗೂ ಸಿಂದಗಿ ಕ್ಷೇತ್ರಕ್ಕೆ ಜೆಡಿಎಸ್ ಕೊಟ್ಟಿರುವ ಕೊಡುಗೆಯನ್ನು ಹೈಜಾಕ್ ಮಾಡಲಾಗದು ಎಂದು ಮಾಜಿ ಸಿಎಂ ಎಚ್‌ಡಿಕೆ ಕಾಂಗ್ರೆಸ್ ಪಕ್ಷಕ್ಕೆ ಕುಟುಕಿದರು.

ಮನಗೂಳಿ ಕಾಕಾ ಮಾಡಿರುವ ಸಾಧನೆಗಳನ್ನು ಕಾಂಗ್ರೆಸ್ ಅಭ್ಯರ್ಥಿ ಈಗ ಹೈಜಾಕ್ ಮಾಡಲು ಹೊರಟಿದ್ದಾರೆ. ಅದಕ್ಕಾಗಿ ಸಾಧನೆಗಳ ಪುಸ್ತಕ ಮಾಡಿ ಹಂಚುತ್ತಿದ್ದಾರೆ. ಆದರೆ, ಸಿಂದಗಿ ಜನತೆಗೆ ನಮ್ಮ ಪಕ್ಷದ ಮೇಲೆ ಅಪಾರ ಪ್ರೀತಿ, ನಂಬಿಕೆ ಇದೆ. ಮಾಡಿದ ಸೇವೆಯ ನೆನಪಿದೆ. ಅದನ್ನು ಕಸಿದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಎಂದು ಅವರು ಹೇಳಿದರು.

ನಮ್ಮ ಮನೆ ಬಾಗಿಲಿಗೆ ಬಂದಿದ್ದ ಕಾಂಗ್ರೆಸ್
ವಿಪಕ್ಷ ನಾಯಕ ಸಿದ್ದರಾಮಯ್ಯ ಜೆಡಿಎಸ್ ಪಕ್ಷದ ವಿರುದ್ಧ ನಿರಂತರವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಯಾವ ನಾಲಿಗೆಯಲ್ಲಿ ಕಾಂಗ್ರೆಸ್ ನಾಯಕರು ಜೆಡಿಎಸ್ ಪಕ್ಷ ಬಿಜೆಪಿ ಬಿ ಟೀಮ್ ಎನ್ನುತ್ತಿದ್ದರೋ, ಅದೇ ನಾಯಕರೂ ಕಳೆದ ಚುನಾವಣೆ ನಂತರ ಸರಕಾರ ಮಾಡಬೇಕು ಎಂದು ನಮ್ಮ ಪಕ್ಷದ ಬಾಗಿಲಲ್ಲಿ ನಿಂತಿದ್ದರು.

Sindagi By- Election: Congress Hijacked MC Managooli Son Says HD Kumaraswamy

ಯಾರು ನಮ್ಮ ಪಕ್ಷಕ್ಕೆ ಮತ ಹಾಕಬೇಡಿ ಎಂದು ಜನರಿಗೆ ಹೇಳಿದರೋ ಅವರೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ದೇವೇಗೌಡರ ಮನೆ ಮುಂದೆ ನಿಂತರು. ಆದರೆ, ಸಿದ್ದರಾಮಯ್ಯನವರ ಸುಳ್ಳು ಮಾತುಗಳಿಂದ ನಮ್ಮ ಪಕ್ಷಕ್ಕೆ ಆ ಚುನಾವಣೆಯಲ್ಲಿ ಹಾನಿ ಆಯಿತು ಎಂದು ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದರು.

ಅಷ್ಟಕ್ಕೇ ಸುಮ್ಮನಾಗದ ಸಿದ್ದರಾಮಯ್ಯ ಈಗ ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳಲ್ಲಿ ಜಾತ್ಯಾತೀತ ಮತಗಳನ್ನು ವಿಭಜಿಸಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ ಎಂದು ಸರಣಿ ಸುಳ್ಳು ಹೇಳುತ್ತಿದ್ದಾರೆ ಎಂದು ಎಚ್‌ಡಿಕೆ ತರಾಟೆಗೆ ತೆಗೆದುಕೊಂಡರು.

ಯಾವ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬಾರದು ಎಂದು ಜನತೆಯನ್ನು ಕೋರಿದ ಎಚ್‌ಡಿಕೆ, ಒಂದು ವೇಳೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದರೆ ಅದರ ಫಲ ಬಿಜೆಪಿಗೆ ಹೋಗುತ್ತದೆ. ಈ ಕಾರಣಕ್ಕೆ ಜೆಡಿಎಸ್ ಸಿಂದಗಿ ಜನರ ಸಹಜ ಆಯ್ಕೆ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಮನವಿ ಮಾಡಿದರು.

ಜೆಡಿಎಸ್ ಮತ್ತು ಬಿಜೆಪಿ ನಡುವೆ ಪೈಪೋಟಿ
ಸಿಂದಗಿ ಕ್ಷೇತ್ರದಲ್ಲಿ ಹಣಾಹಣಿ ಇರುವುದು ಜೆಡಿಎಸ್ ಮತ್ತು ಬಿಜೆಪಿ ನಡುವೆ ಮಾತ್ರ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿತ್ತು. ಯಾವ ಚುನಾವಣೆಯಲ್ಲಿಯೂ ಇಲ್ಲಿ ಆ ಪಕ್ಷ ಎರಡನೇ ಸ್ಥಾನಕ್ಕೆ ಬಂದಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಬಮ್ಮನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಚಾರ ಕೈಗೊಂಡ ವೇಳೆ ಮಾತನಾಡಿ, ಸುಳ್ಳು ಮಾತುಗಳಿಂದ ಚುನಾವಣೆಯನ್ನು ಗೆಲ್ಲಲಾಗದು. ಜನರ ಕೆಲಸ ಮಾಡಿದರಷ್ಟೇ ಜಯ ಸಾಧ್ಯ ಎಂದರು.

ಎಲ್ಲ ರಂಗಗಳಲ್ಲೂ ಬಿಜೆಪಿ ವಿಫಲ
ನನ್ನ ನೇತೃತ್ವದ ಸಮ್ಮಿಶ್ರ ಸರಕಾರವನ್ನು ಪತನಗೊಳಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ ಎಂದು ಕುಮಾರಸ್ವಾಮಿ ಟೀಕಿಸಿದರು. ಸಿಂದಗಿಯ ಮಾಡಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಂಜೆ ಪ್ರಚಾರ ನಡೆಸಿದ ಅವರು, ಉತ್ತರ ಕರ್ನಾಟಕ ಪ್ರದೇಶದಲ್ಲಿ ನೆರೆ ಬಂತು. ಅದನ್ನು ಸರಿಯಾಗಿ ನಿರ್ವಹಣೆ ಮಾಡಲಿಲ್ಲ. ಮನೆ ಕಳೆದುಕೊಂಡ ಕುಟುಂಬಗಳಿಗೆ ಐದು ಲಕ್ಷ ರೂ. ಪರಿಹಾರವನ್ನು ನೀಡಲಿಲ್ಲ ಎಂದು ಆರೋಪಿಸಿದರು.

ಕೊರೊನಾ ನಿರ್ವಹಣೆಯಲ್ಲಿ ಕೂಡ ರಾಜ್ಯ ಸರಕಾರ ಸರಿಯಾಗಿ ಕೆಲಸ ಮಾಡಲಿಲ್ಲ. ಪ್ರಾಣಹಾನಿ ಆದ ಕುಟುಂಬಗಳಿಗೆ ಯಾವ ನೆರವನ್ನೂ ಕೊಡಲಿಲ್ಲ. ಕಾರ್ಮಿಕ ಮತ್ತು ಶ್ರಮಿಕ ವರ್ಗದ ಜನರಿಗೆ ಕಡೆಪಕ್ಷ ಹತ್ತು ಸಾವಿರ ರೂಪಾಯಿ ಹಣವನ್ನು ನೀಡಲಿಲ್ಲ ಎಂದು ಬಿಜೆಪಿ ಸರಕಾರದ ವಿರುದ್ಧ ಹರಿಹಾಯ್ದರು. ಈ ಸಂದರ್ಭದಲ್ಲಿ ಸಿಂದಗಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಜಿಯ ಶಕೀಲಾ ಅಂಗಡಿ, ಪಕ್ಷದ ಹಿರಿಯ ನಾಯಕ ಬಂಡೆಪ್ಪ ಕಾಶೆಂಪೂರ್, ರಾಜೂಗೌಡ ಪಾಟೀಲ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ನೆರೆದಿದ್ದರು.

Recommended Video

      ರವಿಶಾಸ್ತ್ರಿ& ವಿರಾಟ್ ಕಾಂಬಿನೇಷನ್‌ನಲ್ಲಿ RCB ಕಪ್‌ ಗೆಲ್ಲೋದು ಗ್ಯಾರೆಂಟಿ,ಹೇಗೆ ಅಂತೀರಾ? | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+