ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಡಿ.10ರಂದು ವಿಜಯಪುರಲ್ಲಿ ಶಕ್ತಿ ಪ್ರದರ್ಶನ
ವಿಜಯಪುರ ಡಿಸೆಂಬರ್ 02: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಒತ್ತಾಯಿಸಿ ಇದೇ ಡಿಸೆಂಬರ್ 10ರಂದು ಬೃಹತ್ ರ್ಯಾಲಿ ವಿಜಯಪುರದಲ್ಲಿ ನಡೆಯಲಿದೆ.
ಅಣ್ಣ ಬಸವಣ್ಣನವರ ಕಾರ್ಯಕ್ಷೇತ್ರ ಬೀದರನಿಂದ ಆರಂಭಗೊಂಡ ರ್ಯಾಲಿಗಳು ಬೆಳಗಾವಿ, ಲಾತೂರ್, ಕಲಬುರಗಿ, ಚಿತ್ರದುರ್ಗ, ಹುಬ್ಬಳ್ಳಿ, ಕೊಪ್ಪಳ ನಂತರ ಇದೀಗ ಬಸವಣ್ಣನ ಜನ್ಮಭೂಮಿ ವಿಜಯಪುರದಲ್ಲಿ ನಡೆಯಲಿದೆ.
ಡಿಸೆಂಬರ್ 10ರಂದು ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ರ್ಯಾಲಿಯ ಪೂರ್ವಭಾವಿ ಸಿದ್ಧತೆಗಳು ಆರಂಭಗೊಂಡಿವೆ. ಈ ರ್ಯಾಲಿಯ ಪೂರ್ವಭಾವಿಯಾಗಿ ಹಲವಾರು ಲಿಂಗಾಯತ ಸಂಘಟನೆಗಳ ಪ್ರಮುಖರು ಹಳ್ಳಿ ಹಳ್ಳಿಗೆ ಸಂಚರಿಸಿ ಜನಜಾಗೃತಿ ಮೂಡಿಸುತ್ತಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಗಮನಸೆಳೆದಿರುವ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಯ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಚಿವ ಎಂ.ಬಿ. ಪಾಟೀಲರ ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ಈ ರ್ಯಾಲಿ ಮಹತ್ವ ಪಡೆದಿದೆ.
ಪೂರ್ವಭಾವಿ ಸಭೆಯಲ್ಲಿ ವಿವಿಧ ಲಿಂಗಾಯತ ಉಪಪಂಗಡಗಳ ಪ್ರಮುಖರು, ಬಸವತತ್ವ ಪ್ರಚಾರದಲ್ಲಿ ತೊಡಗಿರುವ ವಿವಿಧ ಸಂಘಟನೆಗಳು, ಹಲವಾರು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸುತ್ತಿದ್ದು, ವಿಜಯಪುರದ ರ್ಯಾಲಿಯ ರೂಪು-ರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ.












Click it and Unblock the Notifications