ಮಸೀದಿ ಮೇಲಿನ ಧ್ವನಿವರ್ಧಕ ತೆಗೆಯಲು ಯಾವುದೇ ನೋಟಿಸ್ ನೀಡಿಲ್ಲ: ಸಚಿವೆ ಶಶಿಕಲಾ ಜೊಲ್ಲೆ
ವಿಜಯಪುರ, ಏಪ್ರಿಲ್ 6: ಕರ್ನಾಟಕದಲ್ಲಿ ಮಸೀದಿಗಳ ಮೇಲಿನ ಧ್ವನಿವರ್ಧಕಗಳ ಶಬ್ದವನ್ನು ಕಡಿಮೆಗೊಳಿಸುವ ಅಥವಾ ಅವುಗಳನ್ನು ತೆಗೆದು ಹಾಕುವಂತೆ ಇಲಾಖೆಯಿಂದ ಯಾವುದೇ ರೀತಿ ಅಧಿಕೃತ ಆದೇಶವನ್ನು ಹೊರಟಿಸಿಲ್ಲ ಎಂದು ಮುಜರಾಯಿ, ಹಜ್ ಹಾಗೂ ವಕ್ಫ್ ಸಚಿವೆ ಶಶಿಕಲಾ ಅಣ್ಣಾ ಸಾಹೇಬ್ ಜೊಲ್ಲೆ ಸ್ಪಷ್ಟಪಡಿಸಿದ್ದಾರೆ.
ಬುಧವಾರ ತಮ್ಮ ಕೋರ್ ಕಮಿಟಿ ಸಭೆಯಲ್ಲಿನ ಚರ್ಚೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮಸೀದಿಗಳ ಮೇಲಿನ ಧ್ವನಿವರ್ಧಕಗಳಿಗೆ ಸಂಬಂಧಿಸಿದಂತೆ ಯಾವುದೇ ತಪ್ಪು ಗ್ರಹಿಕೆಗೆ ಅವಕಾಶ ನೀಡಬೇಡಿ ಎಂದು ಮನವಿ ಮಾಡಿಕೊಂಡರು.
Recommended Video
ದೇವಸ್ಥಾನಗಳಲ್ಲಿ ಗಂಟೆ, ಜಾಗಟೆ ಶಬ್ದ ನಿರ್ಬಂಧ ವಾಪಸ್ ಪಡೆದ ಧಾರ್ಮಿಕ ದತ್ತಿ ಇಲಾಖೆ
ಧ್ವನಿವರ್ಧಕಗಳ ಶಬ್ದದ ಪ್ರಮಾಣ ಎಷ್ಟಿರಬೇಕು ಎನ್ನುವುದರ ಬಗ್ಗೆ ಈಗಾಗಲೇ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಸದ್ಯಕ್ಕೆ ಈಗ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ನೀಡಲಾಗಿದೆ. ಆದರೆ ನಮ್ಮ ಇಲಾಖೆಯಿಂದ ಯಾವುದೇ ರೀತಿ ನೋಟಿಸ್ ಜಾರಿಗೊಳಿಸಿಲ್ಲ ಅಥವಾ ಆದೇಶವನ್ನು ಹೊರಡಿಸಿಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟವಾಗಿ ಹೇಳಿದರು.
ಪೊಲೀಸ್ ನೋಟಿಸ್ ವಿಚಾರ ಗೊತ್ತಿಲ್ಲ:
ಆಜಾನ್ ಶಬ್ದವನ್ನು ನಿಯಂತ್ರಿಸುವುದಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ ನೋಟಿಸ್ ಕೊಟ್ಟಿರುವ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ರಾಜ್ಯದಲ್ಲಿ ಎಷ್ಟು ಮಸೀದಿ, ಮದರಸಾಗಳಿವೆ ಎಂಬುದರ ಕುರಿತು ಮಾಹಿತಿ ಕರೆ ಹಾಕಲಾಗುತ್ತಿದೆ. ಮಸೀದಿ ಮತ್ತು ಮಂದಿರ ಸೇರಿದಂತೆ ಇತರೆ ಧಾರ್ಮಿಕ ಕೇಂದ್ರಗಳು ಹಾಗೂ ಸಂಸ್ಥೆಗಳ ಅಂಕಿ-ಸಂಖ್ಯೆಯು ಇಲಾಖೆಯ ಬಳಿಯಿದೆ. ಇದರ ಹೊರತಾಗಿ ಹೊಸ ಸಮೀಕ್ಷೆಗೆ ಆದೇಶ ಹೊರಡಿಸಿಲ್ಲ ಎಂದು ಜೊಲ್ಲೆ ತಿಳಿಸಿದ್ದಾರೆ.
ಸರ್ಕಾರವನ್ನು ಟೀಕಿಸಿದ್ದ ಎಚ್ ಡಿ ಕುಮಾರಸ್ವಾಮಿ:
ರಾಜ್ಯದಲ್ಲಿ ಅಗತ್ಯ ವಸ್ತುಗಳ ಮೇಲಿನ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಹೈರಾಣಾಗಿದ್ದಾರೆ. ಜನಸಾಮಾನ್ಯರ ಆರ್ಥಿಕ ಸ್ಥಿತಿಗಳನ್ನ ಆಧರಿಸಿ ಬೆಲೆ ಏರಿಕೆಗೆ ಕಡಿವಾಣ ಹಾಕುವ ಬಗ್ಗೆ ಸರ್ಕಾರ ಚಿಂತಿಸುವುದನ್ನೇ ಮರೆತಂದಿದೆ. ಏಕೆಂದರೆ ಹಿಜಾಬ್ ಆಯ್ತು, ಹಲಾಲ್ ಕಟ್ ಆಯ್ತು, ಮುಸ್ಲಿಂ ವ್ಯಾಪಾರಿಗಳಿಗೆ ಆರ್ಥಿಕ ನಿಷೇಧ ಆಯ್ತು ಈಗ ಮಸೀದ್ಗಳಲ್ಲಿ ಧ್ವನಿವರ್ಧಕಗಳ ನಿಷೇಧದ ಸರದಿ ಶುರುವಾಗಿದೆ. ಹೀಗೆ ಅಭಿವೃದ್ಧಿಯ ವಿಚಾರ ಬಿಟ್ಟು ರಾಜ್ಯದಲ್ಲಿ ಕೆಲಸಕ್ಕೆ ಬಾರದ ವಿಚಾರಗಳ ಬಗ್ಗೆ ಹೆಚ್ಚಾಗಿ ಚರ್ಚೆ ನಡೆಯುತ್ತಿರುವುದರ ವಿರುದ್ಧ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಗರಂ ಆಗಿದ್ದರು. ಸರಣಿ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು.