'ಜನರು ಕಾಂಗ್ರೆಸ್ ಪಕ್ಷಕ್ಕೆ 5 ವರ್ಷಗಳ ಕಠಿಣ ಶಿಕ್ಷೆ ನೀಡಲಿದ್ದಾರೆ'
ವಿಜಯಪುರ, ಮೇ 08 : ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಆಗಮಿಸಿದ್ದಾರೆ. ವಿಜಯಪುರದಲ್ಲಿ ಅವರು ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದಾರೆ.
ಮಂಗಳವಾರ ನರೇಂದ್ರ ಮೋದಿ ಅವರು ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಇಂದು ಮೋದಿ ಕೊಪ್ಪಳ, ಬೆಂಗಳೂರಿನಲ್ಲಿಯೂ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇದು ನರೇಂದ್ರ ಮೋದಿ ಅವರ 5ನೇ ದಿನದ ರಾಜ್ಯ ಪ್ರವಾಸವಾಗಿದ್ದು 15ನೇ ಸಮಾವೇಶವಾಗಿದೆ. ಮೇ 9ರಂದು ಅವರು ಪುನಃ ರಾಜ್ಯಕ್ಕೆ ಆಗಮಿಸಲಿದ್ದು, 4 ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಗುಡುಗು ಮಿಂಚುಗಳ ನಡುವೆ ಮೋದಿ ಮಾತಿನ ಕಾಮನಬಿಲ್ಲು!
ಮೋದಿ ಭಾಷಣದ ಮುಖ್ಯಾಂಶಗಳು
* ಕಣ್ಣು ಹಾಯಿಸಿದ ಕಡೆಗೆಲ್ಲಾ ಜನರು ಕಾಣುತ್ತಿದ್ದಾರೆ. 42 ಡಿಗ್ರಿ ಬಿಸಿಲಿನಲ್ಲೂ ಇಷ್ಟೊಂದು ಜನರು ಆಗಮಿಸಿದ್ದಾರೆ ಎಂದರೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಇಳಿಸಲು ಪಣ ತೊಟ್ಟಿದ್ದಾರೆ ಎಂದೇ ಅರ್ಥ.
* ಕರ್ನಾಟಕದ ಜನರು ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಮಾತ್ರ ಕೆಳಗಿಳಿಸುವುದಿಲ್ಲ. ಬದಲಿಗೆ ಐದು ವರ್ಷಗಳ ಕಠಿಣ ಶಿಕ್ಷೆಯನ್ನು ನೀಡಲಿದ್ದಾರೆ.
* ವಿಜಯಪುರ ಭಗವಾನ್ ಬಸವೇಶ್ವರರ ಅವರ ಜನ್ಮಭೂಮಿ. ಯಾರನ್ನು ಜಾತಿ, ಧರ್ಮದ ಆಧಾರದ ಮೇಲೆ ಬೇರೆ ಮಾಡಬೇಡಿ ಎಂಬ ಸಂದೇಶ ನೀಡಿದ್ದಾರೆ.
* ಆದರೆ, ಇಲ್ಲಿನ ಕಾಂಗ್ರೆಸ್ ಸರ್ಕಾರ ಬಸವಣ್ಣ ಅವರ ತತ್ವಕ್ಕೆ ವಿರುದ್ಧವಾಗಿ ನಡೆಯುತ್ತಿದೆ. ಎಲ್ಲರನ್ನೂ ಬೇರೆ-ಬೇರೆಯಾಗಿ ಮಾಡಿ, ಸಮುದಾಯಗಳ ನಡುವೆ ಕಿಚ್ಚನ್ನು ಹೆಚ್ಚಿಸುತ್ತಿದೆ. ಜಾತಿ, ವಿಚಾರ, ಮತಗಳ ಆಧಾರದ ಮೇಲೆ ವಿಭಜನೆ ಮಾಡುತ್ತಿದೆ.
* ವಿಜಯಪುರದ ಜನರು ಸ್ಪಷ್ಟ ಸಂದೇಶವನ್ನು ಕಳಿಸಿ, ಇಲ್ಲಿನ ಜನರು ಇಂತಹ ಸರ್ಕಾರವನ್ನು ಕಿತ್ತೊಗೆಯುತ್ತೇವೆ. ಜಾತಿ, ಮತಗಳ ಆಧಾರದ ಮೇಲೆ ಒಡೆಯುವವರಿಗೆ ತಕ್ಕಪಾಠ ಕಲಿಸುತ್ತೇವೆ ಎಂದು.
* ರಾಜ್ಯದಲ್ಲಿ ಬರಗಾಲವಿದೆ, ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಆದರೆ, ಈ ಖಾತೆಯನ್ನು ನಿರ್ವಹಿಸುವ ಮಂತ್ರಿಗಳು ದೆಹಲಿಯಲ್ಲಿ ಕುಳಿತು, ಧರ್ಮ, ಜಾತಿಯನ್ನು ಒಡೆಯಲು ಯೋಜನೆ ರೂಪಿಸುತ್ತಿದ್ದರು.
* ಕರ್ನಾಟಕದಲ್ಲಿ ಸರ್ಕಾರದಲ್ಲಿರುವ ಯಾವುದೇ ಒಬ್ಬ ಮಂತ್ರಿಯ ಹೆಸರನ್ನು ಹೇಳಿ. ಅವರ ವಿರುದ್ಧ ಭ್ರಷ್ಟಾಚಾರದ ಆರೋಪಗಳಿರಬಾರದು. ನೀವೇ ಹೇಳಿ, ಯಾರಾದರೂ ಇದ್ದಾರೆಯೇ?.
* ನಿಮ್ಮ ನೀರಾವರಿ ಮಂತ್ರಿಗಳ ವಿಷಯವನ್ನು ನೋಡಿ. ಅವರು ಕಾಮಗಾರಿ ಗುತ್ತಿಗೆ ನೀಡಿದ ಜನರು ಇಂದು ಹೆಲಿಕಾಪ್ಟರ್ನಲ್ಲಿ ಓಡಾಡುತ್ತಿದ್ದಾರೆ. ಯೋಜನೆಗಳಲ್ಲಿ ಎಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಊಹಿಸಿ.
* ಕಾಂಗ್ರೆಸ್ ಪಕ್ಷ ದೇಶವನ್ನು ಆಳಿತು. ಆದರೆ, ಸಂಸತ್ನಲ್ಲಿ ಅವರ ಭಾವಚಿತ್ರವನ್ನು ಹಾಕಲು ಕಾಂಗ್ರೆಸ್ಗೆ ತಿಳಿಯಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಬಂದ ಬಳಿಕ ಸಂಸತ್ನಲ್ಲಿ ಬಸವೇಶ್ವರರ ಚಿತ್ರವನ್ನು ಸಂಸತ್ನಲ್ಲಿ ಹಾಕಲಾಯಿತು.
* 2015ರಲ್ಲಿ ಲಂಡನ್ನಲ್ಲಿ ನನಗೆ ಬಸವೇಶ್ವರರ ಪ್ರತಿಮೆ ಲೋಕಾರ್ಪಣೆ ಮಾಡುವ ಸೌಭಾಗ್ಯ ಸಿಕ್ಕಿತ್ತು. ಈ ವರ್ಷದ ಬಸವ ಜಯಂತಿ ದಿನ ನಾನು ಲಂಡನ್ನಲ್ಲಿದ್ದೆ. ಅಲ್ಲಿಯೇ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದೆ.
* ಕರ್ನಾಟಕದಲ್ಲಿ ಹಲವು ಮಠಾಧೀಶರು ತ್ರಿವಿಧ ದಾಸೋಹದ ಪರಂಪರೆಯನ್ನು ರಾಜ್ಯದಲ್ಲಿ ಬೆಳೆಸಿದರು. ತ್ರಿವಿಧ ದಾಸೋಹ ಎಂದರೆ ಅನ್ನ ಅಕ್ಷರ ಆರೋಗ್ಯ. ಬಿಜೆಪಿಯೂ ತ್ರಿವಿಧ ದಾಸೋಹ ತತ್ವದಲ್ಲಿ ನಂಬಿಕೆ ಇಟ್ಟಿದೆ.
* ಮಕ್ಕಳಿಗೆ ಶಿಕ್ಷಣ, ಯುವಕರಿಗೆ ಕೆಲಸ, ವೃದ್ಧಿರಿಗೆ ಆರೋಗ್ಯ ಸೇವೆ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಮೂಲಕ ತ್ರಿವಿಧ ದಾಸೋಹಕ್ಕೆ ಆದ್ಯತೆ ನೀಡಿದೆ.
* ಮುದ್ರಾ ಯೋಜನೆಯಲ್ಲಿ 12 ಕೋಟಿ ಯುವಕರಿಗೆ ನಮ್ಮ ಸರ್ಕಾರ ಸಾಲ ಸೌಲಭ್ಯ ನೀಡಿದೆ. ಇದರಿಂದಾಗಿ ಅವರು ಸ್ವಂತ ಉದ್ಯೋಗವನ್ನು ಮಾಡಲು ಸಾಧ್ಯವಾಗಿದೆ.
* ಆಯುಷ್ಮನ್ ಭಾರತ ಎಂಬ ಯೋಜನೆ ಜಾರಿಗೆ ತರಲಾಗಿದೆ. ಗಂಭೀರ ರೋಗಗಳಿಗೆ ತುತ್ತಾದ ಜನರಿಗೆ ಚಿಕಿತ್ಸೆಗೆ ಹಣವಿಲ್ಲದಿದ್ದರೆ ಸರ್ಕಾರದಿಂದ 5 ಲಕ್ಷ ರೂ. ಹಣ ಸಿಗಲಿದೆ.
* ಕರ್ನಾಟಕ ಸರ್ಕಾರ ದೊಡ್ಡ ದೊಡ್ಡ ಮಾತಾಡುತ್ತದೆ. ಆದರೆ, ರಾಜ್ಯದ 6 ಲಕ್ಷ ಕುಟುಂಬಗಳು ಇನ್ನೂ ವಿದ್ಯುತ್ ವ್ಯವಸ್ಥೆ ಇಲ್ಲ. ನಾವು ಅಧಿಕಾರಕ್ಕೆ ಬಂದ ತಕ್ಷಣ ಎಲ್ಲರಿಗೂ ವಿದ್ಯುತ್ ವ್ಯವಸ್ಥೆ ಮಾಡುತ್ತೇವೆ.
* ಮಹಿಳೆಯರು ಕಟ್ಟಿಗೆಯಿಂದ, ಸೀಮೆಎಣ್ಣೆಯಿಂದ ಅಡುಗೆ ಮಾಡಲು ಕಷ್ಟ ಪಡುತ್ತಿದ್ದರು. ಕೇಂದ್ರ ಸರ್ಕಾರ 4 ವರ್ಷದಲ್ಲಿ ದೇಶದ 10 ಕೋಟಿ ಜನರಿಗೆ ಸಿಲಿಂಡರ್ ವ್ಯವಸ್ಥೆ ಮಾಡಿದೆ. ರಾಜ್ಯದಲ್ಲಿ 10 ಲಕ್ಷ ಜನರಿಗೆ ಸಿಲಿಂಡರ್ ನೀಡಲಾಗಿದೆ.
* ಕಾಂಗ್ರೆಸ್ ಪಕ್ಷದವರು ವಂಶಪಾರಂಪರ್ಯವನ್ನು ಮುಂದುವರೆಸಲು ಮತ ಕೇಳುತ್ತಿದ್ದಾರೆ. ಆದರೆ, ನಾವು ವಿಕಾಸಕ್ಕಾಗಿ ಮತ ಕೇಳುತ್ತಿದ್ದೇವೆ. ಕಾಂಗ್ರೆಸ್ ಮತಕ್ಕಾಗಿ ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿದೆ.
* ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ನಿಮ್ಮ ಜಿಲ್ಲೆಯಲ್ಲಿಯೇ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ನಡೆದಿದೆ. ನಮಗೆ ನಿಮ್ಮ ಬಗ್ಗೆ ಕಾಳಜಿ ಇದೆ. ಮಕ್ಕಳ ಮೇಲೆ ಅತ್ಯಾಚಾರ ನಡೆಸಿದವರಿಗೆ ಗಲ್ಲು ಶಿಕ್ಷೆ ನೀಡುವ ತೀರ್ಮಾನವನ್ನು ನಾವು ತೆಗೆದುಕೊಂಡಿದ್ದೇವೆ.
* ಮಕ್ಕಳು ಎಂದಿಗೂ ಮಕ್ಕಳೇ. ಅವರು ಹಿಂದೂ, ಮುಸ್ಲಿಂ ಯಾವುದೇ ಧರ್ಮಕ್ಕೆ ಸೇರಿದ್ದರೂ ಸರಿಯೇ. ಮಕ್ಕಳ ಸುರಕ್ಷತೆ ವಿಚಾರ ವೋಟ್ ಬ್ಯಾಂಕ್ ರಾಜಕೀಯಕ್ಕೆ ಸೇರಬಾರದು.