ವಿಜಯಪುರ-ದೆಹಲಿ ನಡುವೆ ನೇರ ರೈಲು?
ವಿಜಯಪುರ, ಫೆಬ್ರವರಿ 18 : ವಿಜಯಪುರ-ದೆಹಲಿ ಸಂಪರ್ಕಿಸಲು ರೈಲು ಸೇವೆಯನ್ನು ಆರಂಭಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಈಗ ಜನರು ದೆಹಲಿ ತಲುಪಲು ಎರಡು ರೈಲುಗಳನ್ನು ಬದಲಾವಣೆ ಮಾಡಬೇಕಿದೆ. ವಾರಕ್ಕೆ ಎರಡು ಬಾರಿಯಾದರೂ ಸಂಚಾರ ನಡೆಸುವ ರೈಲು ಪರಿಚಯಿಸಬೇಕು ಎಂದು ಬೇಡಿಕೆ ಇಡಲಾಗಿದೆ.
ವಿಜಯಪುರದಿಂದು ಸುಮಾರು 20 ರೈಲುಗಳು ಸಂಚಾರ ನಡೆಸುತ್ತವೆ. ಸೊಲ್ಹಾಪುರ, ಹೈದರಾಬಾದ್, ಮುಂಬೈ, ಬೆಂಗಳೂರು, ಮೈಸೂರು, ಮಂಗಳೂರು ಮುಂತಾದ ನಗರಗಳಿಗೆ ವಿಜಯಪುರದಿಂದ ರೈಲುಗಳಿವೆ. ಆದರೆ, ರಾಷ್ಟ್ರ ರಾಜಧಾನಿ ದೆಹಲಿಗೆ ರೈಲು ಸೇವೆ ಇಲ್ಲ.
ದೆಹಲಿಗೆ ಹೋಗಬೇಕಾದ ಜನರು ಮುಂಬೈ ಅಥವ ಸೊಲ್ಹಾಪುರದಲ್ಲಿ ಇಳಿದು ಬೇರೆ ರೈಲಿನ ಮೂಲಕ ದೆಹಲಿ ತಲುಪಬೇಕು. ವಿಜಯಪುರದಿಂದ ಹೆಚ್ಚು ಜನರು ದೆಹಲಿಗೆ ಪ್ರಯಾಣ ಬೆಳೆಸುತ್ತಾರೆ. ಆದ್ದರಿಂದ ಪ್ರತಿದಿನ ಇಲ್ಲವಾದರೂ ವಾರಕ್ಕೆ ಎರಡು ಅಥವ ಮೂರು ದಿನ ಸಂಚರಿಸುವ ರೈಲು ಓಡಿಸಬೇಕು ಎಂದು ಬೇಡಿಕೆ ಇಡಲಾಗಿದೆ.

ಕೇಂದ್ರದ ಮಾಜಿ ಸಚಿವ ಮತ್ತು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, "ಬೆಂಗಳೂರು-ನವದೆಹಲಿ ನಡುವೆ ಸಂಚಾರ ನಡೆಸುವ ಕರ್ನಾಟಕ ಎಕ್ಸ್ಪ್ರೆಸ್ ರೈಲನ್ನು ಹುಬ್ಬಳ್ಳಿ, ವಿಜಯಪುರ, ಬಾಗಲಕೋಟೆಯಿಂದ ದೆಹಲಿಗೆ ಓಡಿಸಬೇಕು" ಎಂದು ಒತ್ತಾಯಿಸಿದ್ದಾರೆ.
ಪ್ರಸ್ತುತ ಪ್ರತಿದಿನ ವಿಜಯಪುರ-ಮುಂಬೈ ನಡುವೆ ಒಂದು ರೈಲು ಮಾತ್ರ ಸಂಚಾರ ನಡೆಸುತ್ತಿದೆ. ಇದನ್ನು ಬಳಸಿಕೊಂಡು ಜನರು ದೆಹಲಿಗೆ ಹೋಗಬೇಕು. ಉಳಿದ ರೈಲುಗಳು ವಾರದಲ್ಲಿ 2, 3 ಬಾರಿ ಸಂಚಾರ ನಡೆಸುತ್ತಿವೆ.
ನೈಋತ್ಯ ರೈಲ್ವೆ ವಯಲಯದ ಅಧಿಕಾರಿಗಳಿಗೆ ಈ ಕುರಿತು ಪತ್ರವನ್ನು ಬರೆಯಲಾಗಿದೆ. ರೈಲ್ವೆ ಖಾತೆಯ ರಾಜ್ಯ ಸಚಿವರು ಬೆಳಗಾವಿಯ ಸಂಸದ ಸುರೇಶ್ ಅಂಗಡಿ. ವಿಜಯಪುರ ಜನರ ಬೇಡಿಕೆಗೆ ಒಪ್ಪಿಗೆ ಸಿಗಲಿದೆಯೇ? ಕಾದು ನೋಡಬೇಕು.
ಸೋಮವಾರ ವಿಜಯಪುರ-ಹುಬ್ಬಳ್ಳಿ ಇಂಟರ್ ಸಿಟಿ ರೈಲಿಗೆ ಚಾಲನೆ ಸಿಕ್ಕಿದೆ. ವಿಜಯಪುರ-ಮಂಗಳೂರು ನಡುವೆ ಸಂಚಾರ ನಡೆಸುವ ಪ್ರತಿದಿನದ ರೈಲನ್ನು ಆರು ತಿಂಗಳ ಕಾಲ ವಿಸ್ತರಣೆ ಮಾಡಿ ಆದೇಶವನ್ನು ಹೊರಡಿಸಲಾಗಿದೆ.












Click it and Unblock the Notifications