ವಕ್ಫ್ ಬೋರ್ಡ್-ರೈತರ ಜಟಾಪಟಿ, ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ
ವಿಜಯಪುರ ಜಿಲ್ಲೆಯಲ್ಲಿನ ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿದ್ದು, ಹಲವು ವರ್ಷಗಳಿಂದ ರೈತರು ಉಳುಮೆ ಮಾಡಿಕೊಂಡಿದ್ದ ಭೂಮಿಯು ವಕ್ಫ್ ಬೋರ್ಡ್ಗೆ ಸೇರಿದ್ದು ಎಂದು ನೋಟಿಸ್ನಲ್ಲಿ ತಿಳಿಸಿದೆ. ಇದೇ ವಿಚಾರವಾಗಿ ವಕ್ಫ್ ಹಾಗೂ ರೈತರ ನಡುವೆ ಜಟಾಪಟಿ ಮುಂದುವರಿದಿದೆ. ಮತ್ತೊಂದೆಡೆ ಇದು ರಾಜಕೀಯ ಸ್ವರೂಪವನ್ನೂ ಪಡೆದುಕೊಂಡಿದೆ.
ವಕ್ಫ್ ಬೋರ್ಡ್ನಿಂದ ರೈತರಿಗೆ ನೋಟಿಸ್ ನೀಡಿರುವ ವಿಚಾರವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ. ಇದೇ ವಿಚಾರವಾಗಿ ಕಾಂಗ್ರೆಸ್ ಸಚಿವರಾದ ಎಂ.ಬಿ.ಪಾಟೀಲ್ ಅವರು ಮಹತ್ವದ ಮಾಹಿತಿ ನೀಡಿದ್ದಾರೆ. ರೈತರಿಗೆ ಸೇರಿದ ಜಮೀನಲ್ಲಿ ಒಂದಿಂಚು ಕೂಡ ಯಾರ ವಶವೂ ಆಗಲು ಬಿಡುವುದಿಲ್ಲ ಎಂದು ರೈತರಿಗೆ ಅಭಯ ನೀಡಿದ್ದಾರೆ.

ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ 10 ಸರ್ವೇ ನಂಬರುಗಳ 11 ಎಕರೆ ಆಸ್ತಿ ಮಾತ್ರ ವಕ್ಫ್ ಆಸ್ತಿ ಎಂದು ಗೆಜೆಟ್ ನೋಟಿಫಿಕೇಷನ್ ಆಗಿದ್ದು, ಅದರಲ್ಲಿ 10 ಎಕರೆ 14 ಗುಂಟೆ ಖಬರಸ್ತಾನ ಇದೆ. ಉಳಿದದ್ದು ಈದ್ಗಾ, ಮಸೀದಿ ಇತ್ಯಾದಿ ಕಟ್ಟಡಗಳಿವೆ ಹಾಗೂ ಈ ಭೂಮಿಯು ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಸೇರಿದ್ದು, ಯಾವುದೇ ರೈತರ ಖಾಸಗಿ ಜಮೀನು ಒಳಪಟ್ಟಿಲ್ಲ ಎಂಬುದನ್ನು ಗಮನಿಸಬೇಕು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಹಜರತ್ ಪೀರ ದಸ್ತಿಗೀರ ಸಾಬ್ ಮೊಹಮ್ಮದ ಚಿಂಗ್ ಸಿಯಾ ತಖಿಯಾ ದರ್ಗಾ ವಿಜಯಪುರ ಮಹಾಲಬಾಗಯತ ಸೇರಿದ ಆಸ್ತಿಯಾಗಿದ್ದು, ಕೆಳಗಡೆ ತಪ್ಪಾಗಿ ಹೊನವಾಡ ಎಂದು ಸೇರಿದೆ. ಇದು ಗೊಂದಲಕ್ಕೆ ಕಾರಣವಾಗಿದೆ. ಈ ಯಾವ ರೈತರಿಗೂ ವಕ್ಫ್ ಸಮಿತಿ ಅಥವಾ ಸರ್ಕಾರದ ಇಲಾಖೆಯಿಂದ ಯಾವುದೇ ನೋಟಿಸ್ಗಳು ಬಂದಿಲ್ಲ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

ಈಗಾಗಲೇ ಜಿಲ್ಲೆಯಲ್ಲಿ ಹಲವು ರೈತರಿಗೆ ವಕ್ಫ್ ಆಸ್ತಿ ನೋಟಿಸ್ ಬಂದಿದೆ ಎಂಬ ದೂರುಗಳಿದ್ದು, ವಕ್ಫ್ ಸಮಿತಿ ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಂದಾಯ ಇಲಾಖೆಯಲ್ಲಿ ಎಲ್ಲ ದಾಖಲೆಗಳನ್ನು ಕೂಲಕುಂಷವಾಗಿ ಪರಿಶೀಲಿಸುತ್ತಾರೆ. ಒಂದೇ ಒಂದು ಇಂಚು ರೈತರ ಜಾಗವು ಅನಗತ್ಯವಾಗಿ, ಆಧಾರ, ದಾಖಲೆಗಳಿಲ್ಲದೆ ವಕ್ಫ್ ಆಸ್ತಿ ಎಂದು ಸೇರಿಸಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಶೀಘ್ರದಲ್ಲೇ ಸಭೆ ನಡೆಸಿ, ಎಲ್ಲ ಗೊಂದಲಗಳಿಗೆ ಉತ್ತರ ನೀಡಲಾಗುವುದು. ಈ ನಿಟ್ಟಿನಲ್ಲಿ ಸಂಸದ ಶ್ರೀ ತೇಜಸ್ವಿ ಸೂರ್ಯ ಅವರಾಗಲಿ, ಮತ್ತೊಬ್ಬರಾಗಲಿ ರಾಜಕಾರಣ ಮಾಡಿ ಜನಸಾಮಾನ್ಯರಲ್ಲಿ ಇಲ್ಲದ ಗೊಂದಲ, ಆತಂಕ ಮೂಡಿಸುವುದು ಬೇಡ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಯತ್ನಾಳ್ ಪಟ್ಟು: ವಕ್ಫ್ನ ನಿರಂಕುಶ ನಡೆಯ ಬಗ್ಗೆ ಪ್ರತಿಭಟನೆಯ ಜೊತೆ ರೈತರ ಜೊತೆ ಕೈಜೋಡಿಸಲು ನಮ್ಮ ಕಡೆಯಿಂದ ಕಾನೂನು ಹೋರಾಟ ಮಾಡಲು ನಿಶ್ಚಯಿಸಿದ್ದೇನೆ. ವಕ್ಫ್ ಇಲಾಖೆಯಿಂದ ನೋಟಿಸ್ ಪಡೆದ ರೈತರು, ನೋಟಿಸ್ನ ಕಾಪಿ ಹಾಗೂ ಸಂಬಂಧಿತ ಕಾಗದ-ಪತ್ರಗಳನ್ನು ಟ್ವಿಟ್ಟರ್ ಮೂಲಕ ನೀಡಿ ಅಥವಾ ವಿಜಯಪುರದ ನಮ್ಮ ಶಾಸಕರ ಕಚೇರಿಗೆ ನೀಡಿ ಎಂದು ಮನವಿ ಮಾಡಿದ್ದಾರೆ.
ನಮ್ಮ ಕಾನೂನು ತಜ್ಞರು ಹಾಗೂ ವಕೀಲರ ತಂಡ ಲಭ್ಯವಿರುವ ಮಾಹಿತಿ ಹಾಗೂ ಕಾಗದ-ಪತ್ರಗಳನ್ನು ಕೂಲಂಕುಷವಾಗಿ ಪರಾಮರ್ಶಿಸಿ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಲು ಸಜ್ಜಾಗಿರುತ್ತಾರೆ. ವಿಜಯಪುರದ ರೈತ ಬಾಂಧವರಿಗೆ ಈ ಮಾಹಿತಿಯನ್ನು ತಪ್ಪದೆ ತಿಳಿಸುವುದು, ಹಾಗೆಯೇ ಅನೇಕ ವರ್ಷಗಳಿಂದ ಮನೆ ಕಟ್ಟಿಕೊಂಡು ಇದ್ದ ಕುಟುಂಬಗಳಿಗೆ, ಮಾಲೀಕರಿಗೆ ವಕ್ಫ್ನಿಂದ ನೋಟೀಸ್ ಬಂದರೂ ಅದರ ಕಾಪಿಯನ್ನು ಕಳಿಸಿಕೊಡಿ ಎಂದು ಯತ್ನಾಳ್ ಕೇಳಿಕೊಂಡಿದ್ದಾರೆ.












Click it and Unblock the Notifications