'ಬಿಜೆಪಿಯವರ ಬುಟ್ಟಿಯಲ್ಲಿ ಹಾವಿಲ್ಲ, ಪುಂಗಿ ಊದಿದರೆ ಎಲ್ಲಿಂದ ಬರುತ್ತೆ?’
Recommended Video

ವಿಜಯಪುರ, ಡಿಸೆಂಬರ್ 20 : 'ಬಿಜೆಪಿ ನಾಯಕರ ಬುಟ್ಟಿಯಲ್ಲಿ ಹಾವಿಲ್ಲ. ಕೇವಲ ಪುಂಗಿ ಊದುತ್ತಾರೆ. ಹಾವಿದ್ದರೆ ತಾನೇ ಆಚೆ ಬರುವುದು?. ಬಿಜೆಪಿ 150 ಅಲ್ಲ 50 ಸ್ಥಾನಗಳಲ್ಲಿಯೂ ಜಯಗಳಿಸುವುದಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ನವ ಕರ್ನಾಟಕ ನಿರ್ಮಾಣ ರಾಜ್ಯ ಪ್ರವಾಸದ ಅಂಗವಾಗಿ ಬುಧವಾರ ಸಿದ್ದರಾಮಯ್ಯ ವಿಜಯಪುರದ ಮುದ್ದೇಬಿಹಾಳಕ್ಕೆ ಆಗಮಿಸಿದ್ದಾರೆ. ವಿವಿಧ ಯೋಜನೆಗೆಳಿಗೆ ಚಾಲನೆ ನೀಡಿ, ಬೃಹತ್ ಸಮಾವೇಶ ಆಯೋಜಿಸಿ ಮಾತನಾಡಿದರು.

ಸಿದ್ದರಾಮಯ್ಯ ಭಾಷಣದ ಮುಖ್ಯಾಂಶಗಳು
* ಸಿದ್ದರಾಮಯ್ಯ ಅವರದ್ದು ಭ್ರಷ್ಟ ಸರ್ಕಾರ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ. ಹೋದ ಕಡೆಯಲ್ಲ ಎಂ.ಬಿ.ಪಾಟೀಲ್, ಸಿದ್ದರಾಮಯ್ಯ ಭ್ರಷ್ಟರು ಎಂದು ಹೇಳುತ್ತಿದ್ದಾರೆ. ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ.
* ಪರಿವರ್ತನಾ ಯಾತ್ರೆಗೂ ಮೊದಲೇ ಸಿದ್ದರಾಮಯ್ಯ ಸರ್ಕಾರದ ಹಗರಣಗಳ ದಾಖಲೆಗಳನ್ನು ಪ್ರತಿದಿನ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದರು. ಯಡಿಯೂರಪ್ಪ ಯಾತ್ರೆ ಆರಂಭಿಸಿ ಒಂದು ತಿಂಗಳು ಕಳೆಯಿತು. ಒಂದೂ ದಾಖಲೆ ಹೊರಬಂದಿಲ್ಲ.
* ಬಿಜೆಪಿಯವರ ಬುಟ್ಟಿಯಲ್ಲಿ ಹಾವಿದ್ದರೆ ತಾನೇ ಪುಂಗಿ ಊದಿದಾಗ ಹೊರಬರುವುದು. ಸುಮ್ಮನೇ ಪುಂಗಿ ಊದಿಕೊಂಡು ರಾಜ್ಯಾದ್ಯಂತ ತಿರುಗಾಡುತ್ತಿದ್ದಾರೆ. ಸುಳ್ಳನ್ನು ಕೇಳಿಕೊಂಡು ಜನರ ಬೆಂಬಲ ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ.
* ಯಡಿಯೂರಪ್ಪ ಅವರಿಗೆ ಮತ್ತೆ ಮುಖ್ಯಮಂತ್ರಿಯಾಗುವ ಕನಸಿದೆ. ಅದಕ್ಕೆ ಸುಳ್ಳು ಹೇಳಿಕೊಂಡು ತಿರುಗುತ್ತಾರೆ. ಏನಾದರೂ ಕೆಲಸ ಮಾಡಿದ್ದರೆ ಜನರು ಆಶೀರ್ವಾದ ಮಾಡುತ್ತಾರೆ. ನಮಗೆ ಜನರ ಮೇಲೆ ನಂಬಿಕೆ ಇದೆ. ಅವರ ಪರವಾಗಿ ಕೆಲಸ ಮಾಡಿ ನಿಮ್ಮ ಆಶೀರ್ವಾದ ಕೇಳುತ್ತಿದ್ದೇವೆ.
* ಯಡಿಯೂರಪ್ಪ ಮೈಕ್ ಮುಂದೆ ಬಂದರೆ 150 ಸ್ಥಾನ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಸೋತ ಬಳಿಕ ಅವರ ಮಿಷನ್ 150 ಠುಸ್ ಆಗಿದೆ.
* ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆ ಸಮಯದಲ್ಲಿ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ರೇಣುಕಾಚಾರ್ಯ, ಸೋಮಣ್ಣ ಎಲ್ಲಾ ಬಂದು ಅಲ್ಲೇ ವಾಸ್ತವ್ಯ ಹೂಡಿದರು. ಆದರೆ, ಫಲಿತಾಂಶ ಏನು ಬಂತು?.
* ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರ್ನಾಟಕಕ್ಕೆ ಬಂದಾಗ, ಕೋಮು ಗಲಭೆ, ದೊಂಬಿ ಮಾಡಿಸಿ ಎಂದು ಕಾರ್ಯಕರ್ತರಿಗೆ, ನಾಯಕರಿಗೆ ಸೂಚಿಸಿದ್ದಾರೆ. ಅದರಂತೆ ಅವರು ಜಾತಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ.
* ಬಿಜೆಪಿಯವರಿಗೆ ಸಂಸದೀಯ ಭಾಷೆ ಗೊತ್ತಿಲ್ಲ. ಪ್ರಚೋದನಾಕಾರಿ ಹೇಳಿಕೆ ಕೊಟ್ಟು ಶಾಂತಿ ಕದಡುವ ಯತ್ನವನ್ನು ಅವರು ಮಾಡುತ್ತಿದ್ದಾರೆ. ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ಅನಂತ್ ಕುಮಾರ್ ಹೆಗಡೆ, ಪ್ರತಾಪ್ ಸಿಂಹ ಮಾತಾಡೋದು ಹಾಗೆಯೇ.
* ಹಿಂದುತ್ವವನ್ನು ಬಿಜೆಪಿಯವರು ಗುತ್ತಿಗೆ ಪಡೆದಿಲ್ಲ. ನಾನು, ಎಂ.ಬಿ.ಪಾಟೀಲ್, ಎಸ್.ಆರ್.ಪಾಟೀಲ್ ಮುಂತಾದವರು ಹಿಂದೂ ಅಲ್ವಾ?. ಸಿದ್ದರಾಮಯ್ಯ ಹೆಸರಲ್ಲೇ ರಾಮ ಇದೆ. ರಾಮನನ್ನು ಅವರು ಗುತ್ತಿಗೆ ಪರೆದಿದ್ದಾರೆಯೇ?.
* ರಾಜ್ಯದ ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಅವರ ಮೇಲೆ ನಂಬಿಕೆ ಇಲ್ಲ. ಮೋದಿ, ಅಮಿತ್ ಶಾ ಕರೆದುಕೊಂಡು ಬಂದು ಮತ ಕೇಳುತ್ತಾರೆ. ಮೋದಿ ಮ್ಯಾಜಿಕ್ ಕರ್ನಾಟಕದಲ್ಲಿ ನಡೆಯುವುದಿಲ್ಲ.












Click it and Unblock the Notifications