ಉಡುಪಿ; ಸ್ವರ್ಣೆಗೆ ಆರತಿ ಬೆಳಗಿದ ಪೇಜಾವರ ಶ್ರೀಗಳು
ಉಡುಪಿ, ಜನವರಿ 13: ಗಂಗಾರತಿ ಕಾರ್ಯಕ್ರಮವನ್ನು ನೀವು ಕೇಳಿರಬಹುದು, ನೋಡಿರಬಹುದು. ಅದೇ ಮಾದರಿಯಲ್ಲಿ ಸ್ವರ್ಣಾರತಿ ಕಾರ್ಯಕ್ರಮದಲ್ಲಿ ಉಡುಪಿಯಲ್ಲಿ ನಡೆಯಿತು. ಸ್ವರ್ಣ ನದಿ ರಕ್ಷಣೆಗೆ ಕಂಕಣಬದ್ಧರಾಗುವಂತೆ ಜನರಿಗೆ ಕರೆ ನೀಡಲಾಯಿತು.
ಮಂಗಳವಾರ ರಾತ್ರಿ ಉಡುಪಿಯ ಪೆರಂಪಳ್ಳಿ ಸಮೀಪ ಶೀಂಬ್ರ ಕೃಷ್ಣಾಂಗಾರಕ ಸ್ನಾನಘಟ್ಟ ಜೀವನದಿ ಸುವರ್ಣೆಯ ತೀರ ಅಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ವಿಶೇಷ ಆರತಿಗಳನ್ನು ಬೆಳಗಿದರು.
ಸ್ವರ್ಣೆಯ ರಕ್ಷಣೆಯ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಸ್ವರ್ಣಾರತಿ ಕಾರ್ಯಕ್ರಮ ನಡೆಯಿತು. ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆರತಿ ಬೆಳಗಿ ಸ್ವರ್ಣೆಯ ರಕ್ಷಣೆಗೆ ಕಂಕಣಬದ್ಧರಾಗುವಂತೆ ಉಡುಪಿಯ ಸಮಸ್ತ ಜನತೆಗೆ ಕರೆ ನೀಡಿದರು.

ಸ್ಥಳೀಯ ಭಜನಾಮಂಡಳಿಯ ಸದಸ್ಯರ ಭಜನೆ ,ಯುವಕರ ಚಂಡೆವಾದನ , ತೇಲುವ ತೆಪ್ಪದಲ್ಲಿ ವಿದುಷಿ ಪವನಾ ಬಿ. ಆಚಾರ್ಯರ ವೀಣಾವಾದನ, ನೂರಾರು ಸಾಲು ದೀಪಗಳು ಕಾರ್ಯಕ್ರಮದ ಆಕರ್ಷಣೆಗಳಾಗಿತ್ತು. ತಾಯಿ ಭಾರತಿಯ ಭಾವಚಿತ್ರಕ್ಕೆ ಎಲ್ಲರೂ ಪುಷ್ಪಾರ್ಚನೆಗೈದರು.
ಕಾರ್ಯಕ್ರಮದಲ್ಲಿ ಶಾಸಕ ರಘುಪತಿ ಭಟ್, ನಗರಸಭೆಯ ಅಧ್ಯಕ್ಷೆ ಸುಮಿತ್ರಾ ನಾಯಕ್ , ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ , ದೇವಳದ ವ್ಯವಸ್ಥಾಪಕ ಕೃಷ್ಣಮೂರ್ತಿ ಶಿವತ್ತಾಯ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications