ಬಿಜೆಪಿಯತ್ತ ಪ್ರಮೋದ್ ಮಧ್ವರಾಜ್ : ಏನದು ಉಡುಪಿಯಿಂದ ಸದ್ದು?
ಕ್ರೀಡಾ, ಮೀನುಗಾರಿಕಾ ಸಚಿವ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಪ್ರಮೋದ್ ಮಧ್ವರಾಜ್, ಬಿಜೆಪಿ ಸೇರಲು ಮನಸ್ಸು ಮಾಡಿದ್ದಾರೆಯೇ? ರಾಜ್ಯ ರಾಜಕಾರಣ ಮತ್ತು ಉಡುಪಿಯಲ್ಲಿ ಹಬ್ಬಿರುವ ಈ ಸುದ್ದಿಗೆ, ಕೇಂದ್ರ ಸಚಿವ ಸದಾನಂದ ಗೌಡರು ಪುಷ್ಟೀಕರಣ ನೀಡುವ ಹೇಳಿಕೆಯನ್ನು ನೀಡಿದ್ದಾರೆ.
ಚುನಾವಣೆಯ ವೇಳೆ, ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಪಕ್ಷಾಂತರಗೊಳ್ಳುವುದು ರಾಜಕೀಯದಲ್ಲಿ ಹೊಸದೇನಲ್ಲ. ಆದರೆ, ಹಾಲೀ ಸಚಿವರೊಬ್ಬರು ಪಕ್ಷ ತೊರೆದು, ಇನ್ನೊಂದು ಪಕ್ಷ ಸೇರುತ್ತಾರೆಂದರೆ, ಎಲ್ಲಾ ಪಕ್ಷಗಳಿಗೆ ಎಚ್ಚರಿಕೆಯ ಗಂಟೆ.
ಅನಂತ್ ಕುಮಾರ್ ಭೇಟಿ, ಸಚಿವ ಪ್ರಮೋದ್ ಮಧ್ವರಾಜ್ ಸ್ಪಷ್ಟನೆ
'ನಾನು ಬಿಜೆಪಿ ಸೇರುತ್ತೇನೆ ಎಂಬ ವದಂತಿ ಸುಳ್ಳು. ಪಕ್ಷಾಂತರ ಮಾಡುತ್ತಿಲ್ಲ' ಎಂದು ಪ್ರಮೋದ್ ಮಧ್ವರಾಜ್ ಸ್ಪಷ್ಟನೆ ನೀಡಿದ್ದರೂ, ಮುಂದಿನ ಚುನಾವಣೆಯಲ್ಲಿ ಪ್ರಮೋದ್ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಉಡುಪಿಯಲ್ಲಿ ಹರಿದಾಡುತ್ತಲೇ ಇದೆ.
ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಬಿಜೆಪಿ ಕೇಂದ್ರ ಸಚಿವ ಸದಾನಂದ ಗೌಡ, ಈ ಮೂವರೂ ಮುಖಂಡರು ತಮ್ಮತಮ್ಮ ಪಕ್ಷಕ್ಕೆ ಇನ್ನೊಂದು ಪಕ್ಷದಿಂದ ಮುಖಂಡರು ಸೇರ್ಪಡೆಗೊಳ್ಲಲಿದ್ದಾರೆ ಎನ್ನುವ ಹೇಳಿಕೆಯನ್ನು ಕಳೆದ ಕೆಲವು ದಿನಗಳಿಂದ ನೀಡುತ್ತಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆಯಂತಿದ್ದ ಉಡುಪಿ ಜಿಲ್ಲೆಯಲ್ಲಿ ಪಕ್ಷಕ್ಕೆ ನಿರೀಕ್ಷಿತ ಫಲಿತಾಂಶ ಬಂದಿರಲಿಲ್ಲ. ಜೊತೆಗೆ ರಘುಪತಿ ಭಟ್ಟರ ಸಿಡಿ ಹಗರಣ ಬಿಜೆಪಿಗೆ ಈ ಭಾಗದಲ್ಲಿ ಹಿನ್ನಡೆಯನ್ನು ತಂದಿತ್ತು. ಮುಂದೆ ಓದಿ..
ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ ಪ್ರಮೋದ್ ಮಧ್ವರಾಜ್
ಸೋಮವಾರ (ಅ 16) ಉಡುಪಿಯಲ್ಲಿ ಬಿಜೆಪಿಯ ಪರಿವರ್ತನಾ ಸಮಾವೇಶ ಆಯೋಜನೆ ಮಾಡಲಾಗಿತ್ತು. ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ಅನಂತ್ ಕುಮಾರ್ ಸೇರಿದಂತೆ ವಿವಿಧ ಬಿಜೆಪಿ ನಾಯಕರು ಉಡುಪಿಗೆ ಆಗಮಿಸಿ, ಐಬಿಯಲ್ಲಿ ತಂಗಿದ್ದರು. ಈ ಸಂದರ್ಭದಲ್ಲಿ ಪ್ರಮೋದ್ ಮಧ್ವರಾಜ್ ಐಬಿಗೆ ಭೇಟಿ ನೀಡಿ, ಅನಂತ ಕುಮಾರ್, ಆರ್ ಅಶೋಕ್, ಶೋಭಾ ಕರಂದ್ಲಾಜೆ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರ ಜೊತೆ ಮಾತುಕತೆ ನಡೆಸಿದ್ದರು.
ಪ್ರಮೋದ್ ಮಧ್ವರಾಜ್ ನೀಡಿದ ಸ್ಪಷ್ಟನೆ
ಈ ವಿದ್ಯಮಾನ ಪ್ರಮೋದ್, ಬಿಜೆಪಿ ಸೇರುತ್ತಾರೆಂದು ಸುದ್ದಿಯಾಗಿತ್ತು, ಇದಕ್ಕೆ ಪ್ರಮೋದ್, ನಾನು ಕಾಂಗ್ರೆಸ್ ತೊರೆಯುತ್ತಿಲ್ಲ ಎನ್ನುವ ಸ್ಪಷ್ಟನೆ ಕೂಡಾ ನೀಡಿದ್ದರು. ಆದರೆ ಕೇಂದ್ರ ಸಚಿವ ಸದಾನಂದ ಗೌಡ, ಬುಧವಾರ (ಅ 8) ನೀಡಿದ ಹೇಳಿಕೆ, ಪ್ರಮೋದ್ ಬಿಜೆಪಿಗೆ ಸೇರಬಹುದು ಎನ್ನುವ ಸುದ್ದಿಗೆ ಇನ್ನಷ್ಟು ಪುಷ್ಠಿ ನೀಡಿದೆ.
ಬಿಜೆಪಿಯ ಮುಖಂಡರು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಸುದ್ದಿ ಸುಳ್ಳು
ಬಿಜೆಪಿಯ ಮುಖಂಡರು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಸುದ್ದಿ ಸುಳ್ಳು, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಆ ಭ್ರಮಯಲ್ಲಿದ್ದರೆ ಅದರಿಂದ ಹೊರಬರಲಿ. ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಬಿಜೆಪಿ ಸೇರಲಿದ್ದಾರೆ ಎಂದು ಸದಾನಂದ ಗೌಡ ಹೇಳಿದ್ದಾರೆ.
ಸದಾನಂದ ಗೌಡ ಹೇಳಿಕೆ
ಕಾಂಗ್ರೆಸ್ ನಲ್ಲಿ ಎರಡು ಬಣವಿದೆ, ಅದರಲ್ಲೊಂದು ಬಣ ಬಿಜೆಪಿ ಸೇರಲು ತುದಿಗಾಲಿನಲ್ಲಿ ನಿಂತಿದೆ. ಪ್ರಮೋದ್ ಮಧ್ವರಾಜ್ ಅವರು ಅನಂತಕುಮಾರ್ ಅವರನ್ನು ಭೇಟಿಯಾಗಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಇದು ಬಿಜೆಪಿ ಸೇರಲು ತೆಗೆದುಕೊಂಡಿರುವ ಮೊದಲ ಹೆಜ್ಜೆ ಎಂದು ಸದಾನಂದ ಗೌಡ ಹೇಳಿದ್ದಾರೆ.
ಪ್ರಮೋದ್ ಮಧ್ವರಾಜ್ ಅವರ ತಾಯಿ ಮನೋರಮ ಮಧ್ವರಾಜ್
ಪ್ರಮೋದ್ ಮಧ್ವರಾಜ್ ಅವರ ತಾಯಿ ಮನೋರಮ ಮಧ್ವರಾಜ್ ಹದಿನಾಲ್ಕನೇ ಲೋಕಸಭೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜಯಗಳಿಸಿದ್ದರು. ಆದರೆ, ವಿಶ್ವಾಸಮತ ಗೊತ್ತುವಳಿಯಲ್ಲಿ ಕಾಂಗ್ರೆಸ್ ಪರವಾಗಿ ಮತಚಲಾಯಿಸಿ, ಬಿಜೆಪಿ ತೊರೆದಿದ್ದರು.