ಕರಾವಳಿ ಮರಳು ದಂಧೆ: ಹಸಿರು ಪೀಠದಿಂದ ತೀರ್ಪು ಶೀಘ್ರ?
ಉಡುಪಿ, ಜನವರಿ 6: ಉಡುಪಿ ಜಿಲ್ಲೆಯ ಸಿಆರ್ ಝಡ್ ( ಕರಾವಳಿ ನಿಯಂತ್ರಣ ವಲಯ) ವ್ಯಾಪ್ತಿಯಲ್ಲಿ ಮರಳುಗಾರಿಕೆ ಜೋರಾಗಿದೆ. ಇದಕ್ಕೆ ಚೆನ್ನೈ ಹಸಿರು ಪೀಠ ಹೊರಡಿಸಿರುವ ತಡೆಯಾಜ್ಞೆ ತೆರವುಗೊಳಿಸಲು ಸಲ್ಲಿಸಲಾದ ಅರ್ಜಿಗೆ ಸಂಬಂಧ ವಿಚಾರಣೆ ವಾದ-ವಿವಾದ ನಡೆದಿತ್ತು. ಈ ಹಿನ್ನೆಲೆಯಲ್ಲಿ ಶೀಘ್ರವೇ ನ್ಯಾಯಾಲಯ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ಹೀಗಾಗಿ ಎಲ್ಲರ ಚಿತ್ತ ಕೋರ್ಟ್ ಮೇಲೆ ನೆಟ್ಟಿದೆ.
ಚೆನ್ನೈ ನ ಹಸಿರು ಪೀಠದಲ್ಲಿ ಉಡುಪಿ ಜಿಲ್ಲಾ ಹೊಯ್ಗೆ ದೋಣಿ ಕಾರ್ಮಿಕರ ಸಂಘ ಮರಳುಗಾರಿಕೆ ನಿಷೇಧ ತೆರವುಗೊಳಿಸುವಂತೆ ಕೋರಿ ಅರ್ಜಿಯನ್ನು ಸಲ್ಲಿಸಿತ್ತು. ಅರ್ಜಿದಾರರ ಪರ ವಕೀಲರಾದ ರಂಜನ್ ಶೆಟ್ಟಿ ತಮ್ಮ ವಾದ ಮಂಡಿಸಿದ್ದರು. ಎಲ್ಲರ ವಾದ-ಪ್ರತಿವಾದಗಳನ್ನು ಆಲಿಸಿರುವ ನ್ಯಾಯಮೂರ್ತಿ ನಂಬಿಯಾರ್ ಅವರ ಏಕಸದಸ್ಯ ಪೀಠ ಶೀಘ್ರವೇ ತೀರ್ಪು ಪ್ರಕಟಿಸಲಿದೆ.[ಕಪಿಲಾ ನದಿ ತೀರದಲ್ಲಿ ಅಕ್ರಮ ಮರಳು ದಂಧೆ: ವ್ಯಕ್ತಿ ಬಂಧನ]
ಅಕ್ರಮ ಮರಳುಗಾರಿಕೆಯಿಂದ ಉಡುಪಿ ತಾಲೂಕಿನ ಬೈಕಾಡಿ, ಹಾರಾಡಿ ಗ್ರಾಮಗಳ ವ್ಯಾಪ್ತಿಯಲ್ಲಿ ಜನತೆಗೆ ಉಂಟಾದ ಸಮಸ್ಯೆಗಳಿಗೆ ಸರಕಾರ, ಇಲಾಖೆಗಳಿಂದ ಯಾವುದೇ ಪರಿಹಾರ ಸಿಗದಿದ್ದಾಗ ಬೈಕಾಡಿಯ ಉದಯ ಸುವರ್ಣ ನೇತೃತ್ವದಲ್ಲಿ ಗ್ರಾಮಸ್ಥರು ಹಸಿರು ಪೀಠಕ್ಕೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದರು.
ಕಳೆದ ಮೇ 17ರಿಂದ ಹಸಿರು ಪೀಠ ಮರಳುಗಾರಿಕೆಗೆ ತಡೆಯಾಜ್ಞೆ ವಿಧಿಸಿತ್ತು. ಉಡುಪಿ ಜಿಲ್ಲೆಯಲ್ಲಿ ಮಾತ್ರವಲ್ಲ, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ವ್ಯಾಪಕ ಮರಳು ದಂಧೆ ನಡೆಯುತ್ತಿದೆ.