ಕೃಷ್ಣಮಠಕ್ಕೆ ಮೋದಿ ಬಾರದಿರುವುದಕ್ಕೆ ಭದ್ರತಾ ಲೋಪ ಕಾರಣವಲ್ಲ
ಉಡುಪಿ, ಮೇ 2: ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡದೆಯೇ ಇರುವುದಕ್ಕೆ ಭದ್ರತಾ ಲೋಪ ಕಾರಣ ಅಲ್ಲ ಎಂದು ಕೃಷ್ಣಮಠದ ವೆಂಕಟರಮಣ ಆಚಾರ್ಯ ಸ್ಪಷ್ಟಪಡಿಸಿದ್ದಾರೆ.
ನರೇಂದ್ರ ಮೋದಿ ಅವರಿಗೆ ಜೀವ ಬೆದರಿಕೆ ಇದ್ದ ಕಾರಣದಿಂದ ಅವರು ಕೃಷ್ಣಮಠಕ್ಕೆ ಭೇಟಿ ನೀಡಿರಲಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ವೆಂಕಟರಮಣ ಆಚಾರ್ಯ ಅವರು ಈ ಸ್ಪಷ್ಟನೆ ನೀಡಿದ್ದಾರೆ.
ಕೃಷ್ಣಮಠದಲ್ಲಿ ಮೋದಿಗೆ ಜೀವ ಬೆದರಿಕೆ ಇತ್ತು: ಶೋಭಾ
ಮೋದಿ ಅವರ ಭೇಟಿಗೂ ಮುನ್ನ ಪೊಲೀಸರು ಮಠದಲ್ಲಿ ಎಲ್ಲ ರೀತಿಯ ಪರಿಶೀಲನೆ ನಡೆಸಿದ್ದರು. ಸೂಕ್ತ ಭದ್ರತೆಯನ್ನು ಸಹ ಒದಗಿಸಿದ್ದರು. ಅದರಲ್ಲಿ ಯಾವುದೇ ಲೋಪದೋಷ ಇರಲಿಲ್ಲ ಎಂದು ಹೇಳಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ಬಂದಿರುವುದರಿಂದ ಈ ಸಂದರ್ಭದಲ್ಲಿ ಮಠಕ್ಕೆ ಭೇಟಿ ನೀಡುವುದು ಸರಿಯಲ್ಲ ಎಂಬ ಕಾರಣಕ್ಕೆ ಅವರು ಮಠಕ್ಕೆ ಬಂದಿಲ್ಲ. ಅವರಿಗಿದ್ದ ಅನಾನುಕೂಲತೆಯಿಂದಾಗಿ ಬರಲು ಸಾಧ್ಯವಾಗಿಲ್ಲ. ಇದಕ್ಕೆ ಭದ್ರತಾ ಲೋಪದ ಕಾರಣವನ್ನು ನೀಡುವುದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ.
ಮೋದಿ ಅವರ ಭೇಟಿ ಪೂರ್ವನಿರ್ಧರಿತವಲ್ಲ. ಅವರ ಕಾರ್ಯಕ್ರಮ ಪಟ್ಟಿಯಲ್ಲಿ ಮಠದ ಭೇಟಿ ಇರಲಿಲ್ಲ. ಮುಂದಿನ ಬಾರಿ ಬಂದಾಗ ಮಠಕ್ಕೆ ಬರುವುದಾಗಿ ಮೋದಿ ತಿಳಿಸಿದ್ದಾರೆ ಎಂಬುದಾಗಿ ವೆಂಕಟರಮಣ ಆಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಉಡುಪಿಗೆ ಬಂದ ಮೋದಿ ಕೃಷ್ಣಮಠಕ್ಕೆ ಬರಲೇ ಇಲ್ಲ ಏಕೆ?
ಚುನಾವಣಾ ಪ್ರಚಾರಕ್ಕಾಗಿ ಮಂಗಳವಾರ ಉಡುಪಿಯಲ್ಲಿ ಸಮಾವೇಶ ನಡೆಸಿದ್ದ ಮೋದಿ ಅವರು, ಭಾಷಣದ ಬಳಿಕ ಶ್ರೀಕೃಷ್ಣ ಮಠಕ್ಕೆ ತೆರಳಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಮಠದ ಸುತ್ತಮುತ್ತಲೂ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು. ಆದರೆ, ಮೋದಿ ಅವರು ಮಠಕ್ಕೆ ಹೋಗಿರಲಿಲ್ಲ. ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ.