ಜ 14ರಿಂದ ಮಾರಣಕಟ್ಟೆ ಜಾತ್ರೆ: ವಾಯ್ ಎಲ್ಲಾ ಬರ್ಕ್ ಮಾರ್ರೇ
ಉಡುಪಿ, ಜ 14: ಸೇವಂತಿಗೆ ಹೂ ಮತ್ತು ಗಂಟೆಪ್ರಿಯ, ನಾಡಿನ ಪ್ರಮುಖ ದೈವಸ್ಥಾನಗಳಲ್ಲೊಂದಾದ ಐತಿಹಾಸಿಕ ಶ್ರೀಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಾಲಯದ ಮೂರು ದಿನಗಳ ವಾರ್ಷಿಕ ಮಕರಸಂಕ್ರಾಂತಿ ಜಾತ್ರೆ ಗುರುವಾರದಿಂದ (ಜ14) ಆರಂಭವಾಗಲಿದೆ.
ಉಡುಪಿ ಜಿಲ್ಲೆ, ಕುಂದಾಪುರದಿಂದ ವಂಡ್ಸೆ ಮೂಲಕ ಕೊಲ್ಲೂರಿಗೆ ಹೋಗುವ ಮಾರ್ಗದಲ್ಲಿರುವ ಈ ದೇವಾಲಯಕ್ಕೆ 28ನೇ ದ್ವಾಪರ ಯುಗದ ವೈವಸ್ವತ ಮನ್ವಂತರದ ಇತಿಹಾಸವಿದೆ. ದೇವಸ್ಥಾನದ ಸಮೀಪದಲ್ಲಿ 'ಬ್ರಹ್ಮಕುಂಡ' ಎಂಬ ಸಣ್ಣ ನದಿಯು ಹರಿಯುತ್ತದೆ. (ಪೇಜಾವರರ ಪರ್ಯಾಯಕ್ಕೆ ಯಾರ್ಯಾರು ಬರ್ತಾರೆ)

ಗುರುವಾರ ಅಭಿಜಿನ್ ಮಹೂರ್ತದಲ್ಲಿ ಮಧ್ಯಾಹ್ನ ಹನ್ನೆರಡು ಗಂಟೆಗೆ ಬ್ರಹ್ಮಲಿಂಗೇಶ್ವರ ದೈವಸ್ಥಾನಕ್ಕೆ ಮಹಾಮಂಗಳಾರತಿಯ ಮೂಲಕ ಮೂರು ದಿನಗಳ ವಿಜೃಂಭಣೆಯ ಜಾತ್ರೆಗೆ ಚಾಲನೆ ಸಿಗಲಿದೆ.
ಮೂಲೋಕದೊಡತಿ ಮೂಕಾಂಬಿಕೆಯಿಂದ ಮಡಿದ ಮೂಕಾಸುರ, ದೇವಿಯಿಂದ ವರ ಪಡೆದು ಕಾರಣೀಕ ದೈವ ಬ್ರಹ್ಮಲಿಂಗೇಶ್ವರನಾಗಿ ಮಾರಣಕಟ್ಟೆಯಲ್ಲಿ ನೆಲೆಸಿದ್ದಾನೆ ಎನ್ನುತ್ತದೆ ಪುರಾಣ.
ಉಡುಪಿ ಜಿಲ್ಲೆಯ ಬಹಳಷ್ಟು ಕುಟುಂಬಗಳಿಗೆ ಮನೆದೇವರಾಗಿರುವ ಬ್ರಹ್ಮಲಿಂಗೇಶ್ವರ ದೇವಾಲಯದ ವರ್ಷಾವಧಿ ಜಾತ್ರೆಗೆ ಶತಮಾನಗಳ ಇತಿಹಾಸವಿದೆ.
ಆದಿ ಶಂಕರಾಚಾರ್ಯರು, ಕೊಲ್ಲೂರಿನಲ್ಲಿ ತಾಯಿ ಮೂಕಾಂಬಿಕೆಯ ಇಷ್ಟ ವಿಗ್ರಹವನ್ನು ಪಂಚಲೋಹಗಳಲ್ಲಿ ಪ್ರತಿಷ್ಟಾಪಿಸಿದ ನಂತರ ಮಾರಣಕಟ್ಟೆಗೆ ಬಂದು ಬ್ರಹ್ಮಲಿಂಗೇಶ್ವರನ ಸನ್ನಿಧಿಯಲ್ಲಿ ಶ್ರೀ ಚಕ್ರ ಸ್ಥಾಪಿಸಿದರು ಎನ್ನುವ ಪ್ರತೀತಿಯಿದೆ.
ಬ್ರಹ್ಮಲಿಂಗೇಶ್ವರನ ಸನ್ನಿಧಿಯಲ್ಲಿ ಹರಕೆಯ ಯಕ್ಷಗಾನ ಬಯಲಾಟ, ರಂಗಪೂಜೆ, ಚರುವಿನ ಪೂಜೆ, ಹೂವಿನ ಪೂಜೆ, ಮಂಗಳಾರತಿ, ಹರಿವಾಣ ನೈವೇದ್ಯ ಮೊದಲಾದ ಪೂಜೆ ಸಲ್ಲಿಸುವುದು ವಾಡಿಕೆ.

ಅಲ್ಲದೇ, ಸನ್ನಿಧಿಯಲ್ಲಿ ಶ್ರೀ ಯಕ್ಷೆ, ಹೈಗುಳಿ, ಚಿಕ್ಕು ದೇವತೆಗಳ ಗುಡಿಯೂ ಇದ್ದು, ಕುಟುಂಬಗಳ ನಡುವಿನ ವಾಕ್ ತೀರ್ಮಾನಕ್ಕೂ ಕ್ಷೇತ್ರಕ್ಕೂ ಪ್ರಸಿದ್ದಿಯಾಗಿದೆ.
ಮೂರು ದಿನಗಳ ಜಾತ್ರೆಯ ಕಾರ್ಯಕ್ರಮ ಪಟ್ಟಿ ಇಂತಿದೆ:
14.01.2016
ಮಧ್ಯಾಹ್ನ 12ಗಂಟೆಗೆ: ಮಹಾಮಂಗಳಾರತಿ
ರಾತ್ರಿ: 10.30ಕ್ಕೆ ಗೆಂಡಸೇವೆ
15.01.2016
ಬೆಳಗ್ಗೆ 9.30: ಮಹಾಮಂಗಳಾರತಿ, ಮಂಡಲಸೇವೆ
16.01.2016
ಬೆಳಗ್ಗೆ 9.30: ಮಹಾಮಂಗಳಾರತಿ , ಮಂಡಲಸೇವೆ
ರಾತ್ರಿ 10: ಕಡುಬು ನೈವೇದ್ಯ, ಮಹಾಮಂಗಳಾರತಿ
ಇದಾದ ನಂತರ ಶ್ರೀಬ್ರಹ್ಮಲಿಂಗೇಶ್ವರ ದಶಾವತಾರ ಯಕ್ಷಗಾನ ಮೇಳದವರಿಂದ ಸೇವೆ ಬಯಲಾಟ ನಡೆಯಲಿದೆ.












Click it and Unblock the Notifications