ಬೆಂಕಿ ಆರಿಸಲು ಬಂದ ಅಗ್ನಿಶಾಮಕ ವಾಹನದಲ್ಲೇ ನೀರಿಲ್ಲ! ಬಿದ್ದು..ಬಿದ್ದು ನಕ್ಕ ಜನ..!
ಉಡುಪಿ, ಮೇ 18: ಬೆಂಕಿ ಆರಿಸಲು ಬಂದ ಅಗ್ನಿಶಾಮಕ ದಳದ ವಾಹನದಲ್ಲಿ ನೀರಿಲ್ಲದೇ ಕಟ್ಟಡ ಸುಟ್ಟು ಹೋದ ಘಟನೆ ಆದಿ ಉಡುಪಿ ಬಳಿ ನಡೆದಿದೆ. ಈ ವಿಚಾರ ವೈರಲ್ ಆಗಿದ್ದು, ಘಟನೆ ಬಗ್ಗೆ ತಿಳಿದ ಕೆಲವರು ಅಗ್ನಿಶಾಮಕ ದಳ ಸಿಬ್ಬಂದಿ ನಿರ್ಲಕ್ಷ್ಯದ ಬಗ್ಗೆ ಆಕ್ರೋಶಗೊಂಡಿದ್ದರೆ, ಇನ್ನೂ ಕೆಲವರು ಬಿದ್ದು ಬಿದ್ದು ನಕ್ಕಿದ್ದಾರೆ.
ಆದಿ ಉಡುಪಿ ಬಳಿ ಬಳಿಯ ಹೋಟೆಲ್ವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಸ್ಥಳೀಯರು ಬ್ರಹ್ಮಗಿರಿಯಲ್ಲಿರುವ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದರು. ಅರ್ಧಗಂಟೆಯ ಬಳಿಕ ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ವಾಹನ ಮತ್ತು ಸಿಬ್ಬಂದಿ ಕಾರ್ಯಾಚರಣೆಗೆ ತಯಾರಿ ನಡೆಸುವಾಗ ವಾಹನದಲ್ಲಿ ನೀರಿಲ್ಲ ಎನ್ನುವುದು ತಿಳಿದು ಬಂದಿದೆ.

ತತ್ ಕ್ಷಣ ನೀರು ತುಂಬಿಕೊಂಡು ಬರುತ್ತೇವೆ ಎಂದು ಮಲ್ಪೆಯತ್ತ ತೆರಳಿದ ಅಗ್ನಿಶಾಮಕ ದಳ ಸಿಬ್ಬಂದಿ ಮರಳಿ ಬರಲೇ ಇಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಷ್ಟರಲ್ಲಿ ಮಳೆ ಬಂದಿದ್ದರಿಂದ ಮಳೆ ನೀರು ಮತ್ತು ರಸ್ತೆ ಬದಿಯ ಹೊಂಡದಲ್ಲಿ ಸಂಗ್ರಹವಾಗಿದ್ದ ನೀರನ್ನೇ ಬಳಸಿಕೊಂಡು ಸ್ಥಳದಲ್ಲಿ ಉಳಿದಿದ್ದ ಅಗ್ನಿಶಾಮಕ ದಳದ ಕೆಲವು ಸಿಬಂದಿ ಬೆಂಕಿಯನ್ನು ಆರಿಸಿದ್ದಾರೆ. ಆದರೆ ಅಷ್ಟರಲ್ಲಿ ಸಾಕಷ್ಟು ಹಾನಿ ಸಂಭವಿಸಿದ್ದು, ಸರಿಯಾದ ಸಮಯಕ್ಕೆ ನೀರಿಲ್ಲದೆ ಕಟ್ಟಡ ಸಂಪೂರ್ಣ ಸುಟ್ಟು ಹೋಗಿದೆ ಎನ್ನಲಾಗಿದೆ.
ಈ ಘಟನೆಯು ಎಲ್ಲೆಡೆ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಘಟನೆಯ ವಿವರ ತಿಳಿದುಕೊಂಡ ಕೆಲವರು ಅಗ್ನಿಶಾಮಕ ದಳ ಸಿಬ್ಬಂದಿ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನಗೊಂಡಿದ್ದರೆ, ಉಡುಪಿ ಮರ್ಯಾದೆ ತೆಗೆಯಲೇ ಕೆಲವರು ಇದ್ದಾರೆ ಎನ್ನುವಂತಹ ಟ್ರೋಲ್ಗಳನ್ನು ನೋಡಿದ ಜನ ಬಿದ್ದು ಬಿದ್ದು ನಗುತ್ತಿದ್ದಾರೆ.
ಕೆಕೆಬಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ!
ಚಿಕ್ಕಮಗಳೂರು: ಕಳಸದಿಂದ ಮಂಗಳೂರಿಗೆ ಹೋಗುತ್ತಿದ್ದ ಕೆಕೆಬಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಬೈಕ್ ಸವಾರ ಗಾಯಗೊಂಡಿರುವ ವರದಿಯಾಗಿದೆ.
ಕುದುರೆಮುಖ ರೋಡ್ ಸರ್ವಿಸ್ ಸ್ಟೇಷನ್ ತಿರುವಿನ ಬಳಿ ಈ ಅಪಘಾತ ಸಂಭವಿಸಿದೆ. ಚಿಕ್ಕಮಗಳೂರು ಮೂಲದ ಬೈಕ್ ಸವಾರ ಕುದುರೆಮುಖಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ಈ ವೇಳೆ ಅಜಾಗರೂಕತೆಯಿಂದ ಚಾಲನೆ ಮಾಡಿದ್ದು, ಇದರಿಂದ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗಾಯಗೊಂಡ ಬೈಕ್ ಸವಾರರನ್ನು ಕಳಸದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.












Click it and Unblock the Notifications