ಪೊಲೀಸರ ಕೈ ಸೇರಿದ ಶೀರೂರು ಶ್ರೀಗಳ ಮರಣೋತ್ತರ ಪರೀಕ್ಷೆ ಪ್ರಾಥಮಿಕ ವರದಿ
Recommended Video

ಉಡುಪಿ, ಜುಲೈ 30: ಶೀರೂರು ಶ್ರೀಗಳ ಅಸಹಜ ಸಾವಿನ ಕುರಿತು ಸ್ಪಷ್ಟ ಚಿತ್ರಣ ನೀಡಬಲ್ಲ ಶ್ರೀಗಳ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಉಡುಪಿ ಪೊಲೀಸರ ಕೈಸೇರಿದೆ.
ಶ್ರೀಗಳ ಮರಣೋತ್ತರ ವರದಿ ಬಂದಿರುವುದಾಗಿ ಉಡುಪಿಯ ಪೊಲೀಸ್ ವರಿಷ್ಠಾಧಿಕಾರಿ ಅವರು ಸ್ಪಷ್ಟಪಡಿಸಿದ್ದು, ವರದಿಯಲ್ಲಿ ನಮೂದಾಗಿರುವ ಅಂಶಗಳ ಬಗ್ಗೆ ತನಿಖೆಯ ಈ ಹಂತದಲ್ಲಿ ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲು ನಕಾರ ವ್ಯಕ್ತಪಡಿಸಿದರು.

ಶ್ರೀಗಳ ಮರಣೋತ್ತರ ಪರೀಕ್ಷೆಯ ವರದಿಯನ್ನು ಕೆಎಂಸಿ ಆಸ್ಪತ್ರೆ ವೈದ್ಯರು ಪೊಲೀಸರಿಗೆ ನೀಡಿದ್ದು, ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸಾವಿನ ಕಾರಣ ಸ್ಪಷ್ಟವಾಗಿಲ್ಲದ ಕಾರಣ, ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ವೈದ್ಯಕೀಯ ವರದಿಗಾಗಿ ಪೊಲೀಸರು ಕಾಯಬೇಕಿದೆ.
ಮಂಗಳೂರಿನ ಪ್ರಾದೇಶಿಕ ವಿಧಿ ವಿಜ್ಞಾನ (ಎಫ್ಎಸ್ಎಲ್) ಪ್ರಯೋಗಾಲಯದಲ್ಲೇ ಪರೀಕ್ಷೆ ನಡೆಯುತ್ತಿದ್ದು, ವರದಿ ಬರಲು ಕನಿಷ್ಟ ಮೂರು ವಾರಗಳು ಅಗತ್ಯವಿದೆ ಎಂದು ಪೊಲೀಸರು ಹೇಳಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರವಷ್ಟೆ ಮರಣೋತ್ತರ ಪರೀಕ್ಷೆಯ ವರದಿಗಳನ್ನು ಅದರೊಂದಿಗೆ ತಾಳೆ ನೋಡಿ ನಿರ್ಣಯಕ್ಕೆ ಬರಲು ಸಾಧ್ಯ.
ಶೀರೂರು ಶ್ರೀಗಳು ಜುಲೈ 19ರಂದು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ಅವರಿಗೆ ವಿಷ ಉಣ್ಣಿಸಿ ಕೊಲ್ಲಲಾಗಿದೆ ಎಂಬ ಊಹಾಪೋಹ ಹರಿದಾಡಿತ್ತು. ಅವರದ್ದು ಅಸಹಜ ಸಾವು ಎಂದು ಅವರ ಸಹೋದರರು ಠಾಣೆಗೆ ದೂರು ಸಹ ನೀಡಿದ್ದರು.
ಈ ಸುದ್ದಿಗಳಿಗೆ ಪುಷ್ಠಿ ನೀಡುವಂತೆ ತನಿಖೆ ಅವಧಿಯಲ್ಲಿ ಮಠದ ಬಗ್ಗೆ ಹಾಗೂ ಶ್ರೀಗಳೊಂದಿಗೆ ಒಡನಾಟವಿದ್ದ ಕೆಲವು ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಹೊರಬಂದಿತ್ತು. ತನಿಖೆ ಇನ್ನೂ ನಡೆಯುತ್ತಿದ್ದು ಶ್ರೀಗಳ ಸಾವು ಸಹಜವೇ ಅಥವಾ ಅವರು ಕೊಲ್ಲಲ್ಪಟ್ಟಿದ್ದಾರೆಯೇ ಎಂಬ ವಿಷಯ ಬಹಿರಂಗವಾಗಬೇಕಿದೆ.












Click it and Unblock the Notifications