ಶೈಲೇಶ ಉಪಾಧ್ಯಾಯ ಶ್ರೀ ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ನಿಯುಕ್ತಿ
ಉಡುಪಿ, ಮೇ 11:ಉಡುಪಿಯ ಶ್ರೀ ಪಲಿಮಾರು ಮಠದ ಕಿರಿಯ ಶ್ರೀ ಪಟ್ಟಕ್ಕೆ ಆಯ್ಕೆಯಾಗಿರುವ ಕಂಬಳಕಟ್ಟೆ ಶೈಲೇಶ ಉಪಾಧ್ಯಾಯ ಅವರು ಸನ್ಯಾಸಾಶ್ರಮವನ್ನು ಸ್ವೀಕರಿಸಲಿದ್ದಾರೆ.ನಾಳೆ ಭಾನುವಾರ (ಮೇ.12) ಶ್ರೀ ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ನಿಯುಕ್ತಿಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಠದಲ್ಲಿ ಧಾರ್ಮಿಕ ವಿಧಿವಿಧಾನಗಳು ಈಗಾಗಲೇ ಆರಂಭಗೊಂಡಿವೆ.
ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಶೈಲೇಶರಿಗೆ ಶುಕ್ರವಾರ (ಮೇ.10) ಪ್ರಣವ ಮಂತ್ರೋಪದೇಶ ನೀಡಿದ್ದಾರೆ.ವಿಧಿಗಳ ಅಂಗವಾಗಿ ಇಂದು ವಾಯುಸ್ತುತಿ ಪುರಶ್ಚರಣೆ, ವಿವಿಧ ಹೋಮಗಳು ನಡೆಯಲಿವೆ.
ನಾಳೆ ರವಿವಾರದವರೆಗೆ ಶೈಲೇಶರು ಕೇವಲ ಸನ್ಯಾಸಿಯಾಗಿರುತ್ತಾರೆ. ಆ ನಂತರ ಮಠಾಧೀಶರ ಉಪಸ್ಥಿತಿಯಲ್ಲಿ ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ನೇಮಿಸಲಾಗುವುದು.

ಅಕ್ಷಯ ತೃತೀಯಾದ ಶುಭ ದಿನ ಆರಂಭವಾದ ಶಿಷ್ಯ ಸ್ವೀಕಾರ ಪ್ರಕ್ರಿಯೆಯ ಭಾಗವಾಗಿ ಗುರುವಾರ ರಾತ್ರಿ ಶಾಕಲ ಮಂತ್ರದ ಹೋಮ ನಡೆಸಲಾಯಿತು. ಶಾಸ್ತ್ರದಂತೆ ಉಪವಾಸವಿದ್ದು ಜಾಗರಣೆ ಮಾಡಿದ ಶೈಲೇಶರು ಪ್ರಾತಃಕಾಲ ಸನ್ಯಾಸಾಶ್ರಮವನ್ನು ಸ್ವೀಕರಿಸಿದರು.
ಪುರುಷಸೂಕ್ತ ಹೋಮವನ್ನೂ ವೈದಿಕರು ನಡೆಸಿದ ಬಳಿಕ ಶೈಲೇಶರು ಮಧ್ವ ಸರೋವರಕ್ಕೆ ತೆರಳಿ ಸ್ನಾನಕ್ಕೆ ಮುನ್ನ ಶೈಲೇಶ ನನ್ನು ತ್ಯಜಿಸಿ ಸನ್ಯಾಸಿ ಯಾಗುವುದರ ಸಂಕೇತವಾಗಿ ಧರಿಸಿದ ಬಟ್ಟೆ, ಜನಿವಾರಗಳನ್ನು ವಿಸರ್ಜನೆ ಮಾಡಿದರು. ಆನಂತರ ಕಾಷಾಯ ವಸ್ತ್ರ, ದಂಡಧಾರಿಯಾಗಿ ಮಧ್ವತೀರ್ಥದಲ್ಲಿ ಅವಗಾಹನಸ್ನಾನ ನೆರವೇರಿಸಿದರು.
ಸರೋವರದ ದಂಡೆಯಲ್ಲಿ ಹೋಮದ ಸಂದರ್ಭ ಪೂಜಿಸಿದ ಪವಿತ್ರ ಕಲಶಜಲವನ್ನು ಅವರಿಗೆ ಅಭಿಷೇಕ ಮಾಡಲಾಯಿತು. ಹಿಡಿದ ದಂಡಕ್ಕೆ ಹೊಸ ಯಜ್ಞೋಪ ವೀತವನ್ನು ಪೋಣಿಸಲಾಯಿತು. ದಂಡ, ಕಮಂಡಲು, ಗೋಪೀಚಂದನದೊಂದಿಗೆ ಶೋಭಿಸುವ ನೂತನ ಯತಿ ಶ್ರೀಕೃಷ್ಣ ದೇವರ ದರ್ಶನ ಮಾಡಿ, ಸರ್ವಜ್ಞ ಪೀಠದಲ್ಲಿ ವಿರಾಜಮಾನರಾಗಿದ್ದ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥರಲ್ಲಿಗೆ ತೆರಳಿ ತಲೆಬಾಗಿ ತನಗೆ ಪ್ರಣವ ಮಂತ್ರೋಪದೇಶವನ್ನು ಅನುಗ್ರಹಿಸುವಂತೆ ಪ್ರಾರ್ಥಿಸಿದರು.












Click it and Unblock the Notifications