ಅಕ್ರಮವಾಗಿ ಉಡುಪಿಯಲ್ಲಿ ನೆಲೆಸಿದ್ದ ನೈಜೀರಿಯಾ ಪ್ರಜೆ ಗಡಿಪಾರು
ಉಡುಪಿ, ಜನವರಿ. 20 : ಮಣಿಪಾಲದಲ್ಲಿ ಅಕ್ರಮವಾಗಿ ನೆಲೆಸಿದ್ದ ನೈಜೀರಿಯಾ ಪ್ರಜೆ ಉನಡಿಕೆ ಆಗಸ್ಟಿನ್ ಜೂನಿಯರ್ ಎಂಬಾತನನ್ನು ಉಡುಪಿ ಪಲೀಸರು ಭಾರತದರಿಂದ ಗಡಿಪಾರು ಮಾಡಿದ್ದಾರೆ.
ನವದೆಹಲಿಯಲ್ಲಿರುವ ನೈಜೀರಿಯಾ ಹೈಕಮಿಷನ್ ಈತನಿಗೆ ತಾತ್ಕಾಲಿಕ ರಹದಾರಿ ಪತ್ರ ನೀಡಿದ್ದು, ಅದರಂತೆ ಜ.10ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದೇಶದಿಂದ ಗಡಿಪಾರು ಮಾಡಲಾಯಿತು.
ಈತ 2011ರ ಆಗಸ್ಟ್ 24ರಂದು ಮುಂಬಯಿ ವಿಮಾನ ನಿಲ್ದಾಣದ ಮೂಲಕ ಭಾರತಕ್ಕೆ ಬಂದು ಆಗಸ್ಟ್ 30ರಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ತನ್ನ ವಾಸ್ತವ್ಯದ ನೋಂದಣಿ ಮಾಡಿಸಿಕೊಂಡಿದ್ದ.
ಆಗಸ್ಟಿನ್ ಮಣಿಪಾಲದ ಕಾಲೇಜ್ ನಲ್ಲಿ ಬ್ಯಾಚುಲರ್ ಆಫ್ ಫಾರ್ಮಸಿ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದ. ಪಾಸ್ಪೋರ್ಟ್ ಹೊಂದಿದ್ದರೂ, ಸ್ಟುಡೆಂಟ್ ವೀಸಾದ ಅವಧಿಯು 2 ವರ್ಷದ ಹಿಂದೆಯೇ ಅಂದರೆ 2014ರ ಜುಲೈ 25ರಂದು ಮುಕ್ತಾಯವಾಗಿತ್ತು.
ಆನಂತರ ಇಲ್ಲಿಯವರೆಗೂ ಭಾರತದಲ್ಲಿರಲು ಅವಕಾಶ ಇಲ್ಲ. ಆದರೂ ವೀಸಾ ಮತ್ತು ವಾಸ್ತವ್ಯ ನೊಂದಾವಣೆ ಪತ್ರ ಇಲ್ಲದೆ ಅನಧಿಕೃತವಾಗಿ ಮಣಿಪಾಲದಲ್ಲಿಯೇ ನೆಲೆಸಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
2016ರ ಜು.19ರಂದು ಮಣಿಪಾಲ ಪೊಲೀಸರು ಆತನನ್ನು ಬಂಧಿಸಿ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜು.20ರಿಂದ ಆ.4ರವರೆಗೆ ಶಿಕ್ಷೆ, ದಂಡ ವಿಧಿಸಲಾಗಿತ್ತು.