ಟೆರೇಸ್ನಲ್ಲಿ ಮಿನಿ ಅರಣ್ಯ: ಚೆರಿ, ಡ್ರ್ಯಾಗನ್ ಹಣ್ಣು ಬೆಳೆದ ಟೆಕ್ಕಿ, ಇಲ್ಲಿವೆ 100ಕ್ಕೂ ಹೆಚ್ಚು ಸಸ್ಯಗಳು!
ನಗರೀಕರಣದ ಕಾರಣದಿಂದ ಇದೀಗ ಯಾವ ಕಡೆ ನೋಡಿದರೂ ಕಾಂಕ್ರೀಟ್ ಕಟ್ಟಡಗಳು, ರಸ್ತೆಗಳು ಕಾಣುತ್ತಿವೆ. ನಗರೀಕರಣದ ಹೆಸರಿನಲ್ಲಿ ಮರಗಿಡಗಳನ್ನು ನೆಲಸಮ ಮಾಡಲಾಗುತ್ತಿದೆ. ನಿರಂತರವಾಗಿ ಮರಗಳನ್ನು ಕಡಿಯುವುದರಿಂದ ನಗರದ ಹಸಿರು ಹೊದಿಕೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಈ ಕಾರಣದಿಂದಲೇ ಬಿಸಿಲು ಮಿತಿ ಮೀರುತ್ತಿದೆ. ಬೇಸಿಗೆಯಲ್ಲಿ ತಾಪಮಾನ ಅತಿಯಾದ ಏರಿಕೆ ಕಾಣುತ್ತಿದೆ. ತೀವ್ರಗೊಂಡ ಶಾಖದ ಅಲೆಗಳು ಬದುಕನ್ನು ದುಸ್ಥರವಾಗಿಸಿದೆ. ಬೆಂಗಳೂರಿನಂತಹ ಉದ್ಯಾನನಗರಿಯಲ್ಲಿಯೇ ಶುದ್ಧ ಗಾಳಿ ಮಾಯವಾಗುತ್ತಿದೆ. ಗಾಳಿಯ ಗುಣಮಟ್ಟ ಕೂಡಾ ಕುಸಿಯುತ್ತಿದೆ. ಮಳೆ ಯಾವಾಗ ಬರುವುದೋ ಯಾವಾಗ ಬಿಡುವುದೋ ತಿಳಿಯುವುದೇ ಇಲ್ಲ. ಇವೆಲ್ಲದರ ಮಧ್ಯೆ, ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಹಸಿರು ಬೆಳೆಯುವ ಪ್ರಯತ್ನಕ್ಕೆ ಕೈ ಹಾಕುವವರೂ ಇದ್ದಾರೆ. ಇಲ್ಲೊಬ್ಬ ವ್ಯಕ್ತಿ ಬೆಂಗಳೂರಿನಲ್ಲಿ ತನ್ನ ಮನೆಯನ್ನೇ ಪುಟ್ಟ ಅರಣ್ಯವಾಗು ಪರಿವರ್ತನೆ ಮಾಡಿದ್ದಾರೆ.
ಬೆಂಗಳೂರಿನ ನಿವೃತ್ತ ಟೆಕ್ಕಿ ಶ್ರೀ ವೆಂಕಟರಾಮನ್ ಅವರು ತಮ್ಮ 600 ಚದರ ಅಡಿಯ ತಾರಸಿಯನ್ನು ಪಶ್ಚಿಮ ಘಟ್ಟಗಳ ಮಾದರಿಯ ಪುಟ್ಟ ಕಾಡನ್ನಾಗಿ ಮಾರ್ಪಡಿಸಿದ್ದಾರೆ. ಇಲ್ಲಿಗೆ ಭೇಟಿ ನೀಡಿದರೆ ನಾವು ಮೆಟ್ರೋ ನಗರದಲ್ಲಿ ವಾಸಿಸುತ್ತಿದ್ದೇವೆ ಎಂಬುದನ್ನೇ ಮರೆತುಬಿಡುತ್ತೇವೆ. 6 ವರ್ಷಗಳ ಹಿಂದೆ ವಿನ್ಯಾಸಗೊಳಿಸಲಾದ 5 ಅಂತಸ್ತಿನ ಮನೆಯೊಳಗಿನ 600 ಚದರ ಅಡಿ ಮಳೆಕಾಡು ನಗರದ ಮಧ್ಯದಲ್ಲಿರುವ ಪಶ್ಚಿಮ ಘಟ್ಟಗಳಂತೆ ಭಾಸವಾಗುತ್ತದೆ. ಕಾಂಕ್ರೀಟ್ ಕಾಡಾಗುತ್ತಿರುವ ಬೆಂಗಳೂರಿನ ಮಧ್ಯೆ ಈ ತಾರಸಿ ಕಾಡು ಎಲ್ಲರ ಗಮನ ಸೆಳೆಯುತ್ತಿದೆ.

ದಿ ಬೆಟರ್ ಇಂಡಿಯಾ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ ವೀಡಿಯೊದ ಪ್ರಕಾರ, ವೆಂಕಟರಮಣ ಅವರ ಟೆರೇಸ್ 100 ಕ್ಕೂ ಹೆಚ್ಚು ಸಸ್ಯ ಪ್ರಭೇದಗಳನ್ನು ಒಳಗೊಂಡಿದೆ. ಮಾತ್ರವಲ್ಲ ಇಲ್ಲಿ 17 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ಹಾಗೂ ಚಿಟ್ಟೆಗಳು ಮನೆ ಮಾಡಿವೆ. ಮರಗಳಿಂದ ನೇರವಾಗಿ ಕಿತ್ತು ತಿನ್ನಬಹುದಾದ ಕೆಂಪು ಚೆರ್ರಿ ಹಣ್ಣುಗಳು, ಡ್ರ್ಯಾಗನ್ಫ್ರೂಟ್ಗಳು, ಕೆಂಪು ಬಾಳೆಹಣ್ಣುಗಳು, ಸಿಟ್ರಾನ್ಗಳು, ಆವಕಾಡೊಗಳು, ಚಪ್ಪಟೆ ಬೀನ್ಸ್, ಕರಿಬೇವು ಮತ್ತು ಕಾಫಿ ಬೀಜ ಹೀಗೆ ಎಲ್ಲವೂ ಈ ಮಿನಿ ಕಾಡಿನಲ್ಲಿ ಲಭ್ಯವಿದೆ.
ನಗರ ಶಾಖಕ್ಕೆ ಪ್ರಕೃತಿಯ ಉತ್ತರ :
ವೆಂಕಟರಾಮನ್ ತಮ್ಮ ತಾಯಿಯ ನೆನಪಿಗಾಗಿ ಮೊದಲಿಗೆ ಕೆಲವು ಕುಂಡಗಳಲ್ಲಿ ಗಿಡಗಳನ್ನು ನೆಡಲು ಆರಂಭಿಸಿದರು. ಈ ರೀತಿ ಕುಂಡಗಳಲ್ಲಿ ಗಿಡಗಳನ್ನು ಬೆಳೆಯುತ್ತಾ ಬೆಳೆಯುತ್ತಾ ತಮ್ಮ ಟೆರೇಸ್ ಅನ್ನು 3 ಹಂತಗಳಲ್ಲಿ ನಿರ್ಮಿಸಲಾದ ಹಚ್ಚ ಹಸಿರಿನ ಮಳೆಕಾಡಾಗಿ ಪರಿವರ್ತಿಸಿದರು. ಮೊದಲ 2 ಹಂತಗಳು ತೋಟಗಳನ್ನು ಒಳಗೊಂಡಿದ್ದರೆ, ಮೇಲಿನ ಹಂತವು ಶಿವ ದೇವಾಲಯಕ್ಕೆ ನೆಲೆಯಾಗಿದೆ. ಇದು ವಿವಿಧ ರೀತಿಯ ಸಸ್ಯಗಳು ನೀರನ್ನು ನೈಸರ್ಗಿಕವಾಗಿ ಸ್ವೀಕರಿಸಲು ಸಹಾಯ ಮಾಡುತ್ತದೆ. ಇಲ್ಲಿ ಕೃತಕ ಜಲಪಾತ ಹಾಗೂ ತಮಗೆ ಬೇಕಾದಾಗ ಮಳೆ ಸೃಷ್ಟಿಸಬಲ್ಲ ಮರುಬಳಕೆ ನೀರಿನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ.

ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆ, ಆಲಿಕಲ್ಲು ಮಳೆ ಮತ್ತು ಗುಡುಗು ಸಹಿತ ಮಳೆ ಈಲ್ಲಿನ ಗಿಡಗಳನ್ನು ಬೇರು ಸಹಿತ ಕಿತ್ತುಹಾಕಬಹುದು ಎನ್ನುವ ಭಯ ವೆಂಕಟರಾಮನ್ ಅವರನ್ನೂ ಕಾಡಿತ್ತಂತೆ. ಆದರೆ ಇದ್ಯಾವುದೂ ಈ ಪುಟ್ಟ ಕಾಡಿನ ಮೇಲೆ ಪರಿಣಾಮ ಬೀರಲಿಲ್ಲ. ಬಲವಾದ ಬಿರುಗಾಳಿಯ ಸಮಯದಲ್ಲಿಯೂ ಇಲ್ಲಿರುವ ಸಸ್ಯಗಳ ಬೇರುಗಳನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳಲು ನುಗ್ಗೆಕಾಯಿ ಮರ ಸಹಾಯ ಮಾಡಿದೆ ಎನ್ನುವುದು ಅವರ ಮಾತು.
ಪಕ್ಷಿಗಳು ಮತ್ತು ಚಿಟ್ಟೆಗಳಲ್ಲದೆ, ಈ ಮಳೆಕಾಡಿನಲ್ಲಿ ಕುಟುಕದ ಜೇನುನೊಣಗಳು ಕೂಡಾ ಇವೆ. ಇನ್ನೂ ಆಶ್ಚರ್ಯಕರ ಸಂಗತಿಯೆಂದರೆ ಬೇಸಿಗೆಯ ತಿಂಗಳುಗಳಲ್ಲಿಯೂ ಇಲ್ಲಿ ತಾಪಮಾನವು 3-4 ಡಿಗ್ರಿಗಳಷ್ಟು ಇಳಿಯುತ್ತದೆ.ಈ ದಟ್ಟವಾದ ಹಸಿರಿನಿಂದಾಗಿ ಅವರ ತಾರಸಿಯ ತಾಪಮಾನವು ಕೆಳಗಿನ ರಸ್ತೆಗಿಂತ ಸುಮಾರು 5 ರಿಂದ 7 ಡಿಗ್ರಿ ಸೆಲ್ಸಿಯಸ್ನಷ್ಟು ತಂಪಾಗಿರುತ್ತದೆ. AQI ಶೇಕಡಾ 10-12 ರಷ್ಟು ಸುಧಾರಿಸುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications