SSLC Result: ಪರೀಕ್ಷೆಗಳ ಪವಿತ್ರತೆ ಉಳಿಸಲು 20 ಗ್ರೇಸ್ ಮಾರ್ಕ್- ಸಚಿವ ಮಧು ಬಂಗಾರಪ್ಪ
ಉಡುಪಿ, ಮೇ 20: 2023-24ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಗ್ರೇಸ್ ಅಂಕ ನೀಡಿರುವ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದು, ಪರೀಕ್ಷೆಗಳ ಪವಿತ್ರತೆ ಉಳಿಸಲು 20 ಗ್ರೇಸ್ ಮಾರ್ಕ್ ನೀಡಲಾಗಿದೆ ಎಂದಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಉಡುಪಿ, ದಕ್ಷಿಣ ಕನ್ನಡ ಯಾವತ್ತೂ ಟಾಪರ್ಸ್ ಆಗಿ ಇರುತ್ತಿದ್ದರು. ನಂತರ ರಿಸಲ್ಸ್ನಲ್ಲಿ ಇಳಿಮುಖವಾಯಿತು. ಈಗ ಮತ್ತೆ ಉಡುಪಿ, ದಕ್ಷಿಣ ಕನ್ನಡ ಟಾಪರ್ಸ್ ಆಗಿದೆ ಎಂದರು.

ಎರಡು ಮತ್ತು ಮೂರನೇ ಪೂರಕ ಪರೀಕ್ಷೆಗೆ ಗ್ರೇಸ್ ಮಾರ್ಕ್ ಇರುವುದಿಲ್ಲ. ನಾವು ಪರೀಕ್ಷೆಯ ಪವಿತ್ರತೆಯನ್ನು ಉಳಿಸಿದ್ದೇವೆ. ಪರೀಕ್ಷೆಗಳ ಪವಿತ್ರತೆ ಉಳಿಸಲು 20 ಗ್ರೇಸ್ ಮಾರ್ಕ್ ನೀಡಲಾಗಿದೆ. ಅಗತ್ಯವಿದ್ದವರು ಎರಡು ಮತ್ತು ಮೂರನೇ ಪರೀಕ್ಷೆ ತೆಗೆದುಕೊಳ್ಳಬಹುದು. ಗ್ರೇಸ್ ಮಾರ್ಕ್ ಪಡೆದವರು ಕೂಡ ಮತ್ತೊಮ್ಮೆ ಪರೀಕ್ಷೆ ಬರೆಯುತ್ತಿದ್ದಾರೆ.
ಗ್ರೇಸ್ ಮಾರ್ಕ್ ನೀಡಿರುವುದು ಈ ವರ್ಷಕ್ಕೆ ಮಾತ್ರ. ನಾವೀಗ ಎಲ್ಲಿದ್ದೇವೆ ಅನ್ನೋದು ಅರಿವಿಗೆ ಬಂದಿದೆ. ಇಲಾಖೆಯನ್ನು ಸಮರ್ಥವಾಗಿ ನಡೆಸಿಕೊಳ್ಳುವ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳು ನನಗೆ ನೀಡಿದ್ದಾರೆ. ಎರಡನೇ ಮತ್ತು ಮೂರನೇ ಪರೀಕ್ಷೆಗೆ ಗ್ರೇಸ್ ಮಾರ್ಕ್ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಶಾಲೆ ಪುನಾರಾರಂಭ ವಿಚಾರವಾಗಿ ಮಾತನಾಡಿದ ಅವರು, ಪುಸ್ತಕಗಳು, ಸಮವಸ್ತ್ರ ಎಲ್ಲವೂ ಇದೆ. ಸಕಾಲದಲ್ಲಿ ವಿದ್ಯಾರ್ಥಿಗಳಿಗೆ ಸವಲತ್ತು ತಲುಪಲಿದೆ. 27ನೇ ತಾರೀಖಿನಿಂದ ನಲಿ ಕಲಿ ಆರಂಭವಾಗುತ್ತದೆ. ಈ ಬಾರಿ ಕೆಪಿಎಸ್ ಶಾಲೆಗಳು ಬರುತ್ತವೆ. ಕೆಪಿಎಸ್ ಶಾಲೆಗಳ ಬಗ್ಗೆ ನಮ್ಮ ಸರಕಾರ ಬದ್ಧತೆ ಹೊಂದಿದೆ. ಐನೂರು ಶಾಲೆಗಳನ್ನು ಇಡೀ ರಾಜ್ಯದ್ಯಂತ ತೆರೆಯುತ್ತೇವೆ. ಮುಂದಿನ ಮೂರು ವರ್ಷಗಳಲ್ಲಿ 3000 ಶಾಲೆ ತೆರೆಯುತ್ತೇವೆ ಎಂದರು.
ಈ ಶೈಕ್ಷಣಿಕ ವರ್ಷದಿಂದ ಮುಂದಿನ ಮೂರು ವರ್ಷದೊಳಗೆ ಮೂರು ಸಾವಿರ ಕೆಪಿಎಸ್ ಶಾಲೆಗಳು ಆರಂಭವಾಗಲಿದೆ. ಕೆಪಿಎಸ್ ಶಾಲೆಗಳಿಗೆ ತುಂಬಾ ಬೇಡಿಕೆ ಇದೆ ಒಳ್ಳೆ ಫಲಿತಾಂಶ ಬರುತ್ತದೆ. ಸಿಎಸ್ಆರ್ ಫಂಡ್ ನಿಂದ ಅನುದಾನ ವ್ಯವಸ್ಥೆ ಮಾಡಲಾಗುವುದು. ಡಿಸಿಎಂ ಡಿಕೆ ಶಿವಕುಮಾರ್ ಫಂಡ್ ಕಲೆಕ್ಷನ್ ಜವಾಬ್ದಾರಿ ವಹಿಸಿದ್ದಾರೆ. ಎಲ್ಲಾ ಕ್ಷೇತ್ರದಲ್ಲೂ ಮೂರರಿಂದ ಆರು ಶಾಲೆಗಳು ತೆರೆಯಲಿವೆ ಎಂದು ಭರವಸೆ ನೀಡಿದರು.
ಎಲ್ಕೆಜಿ ಸೇರುವ ಮಕ್ಕಳಿಗೆ ನಾಲ್ಕು ವರ್ಷ ಪೂರ್ಣವಾಗಬೇಕು. ಇದು ಕಾನೂನು.. ಈ ವಿಚಾರದಲ್ಲಿ ಸಡಲಿಕೆ ಸಾಧ್ಯವಿಲ್ಲ. ಆದೇಶವನ್ನು ನಾವು ಕಡ್ಡಾಯವಾಗಿ ಫಾಲೋ ಮಾಡುತ್ತೇವೆ. ವ್ಯತ್ಯಾಸ ಮಾಡಿದರೆ ಮಗು ಹುಟ್ಟಿದಾಗಲೇ ಶಾಲೆಗೆ ಸೇರಿಸಬೇಕಾಗುತ್ತದೆ. ಅಧ್ಯಯನದ ಮೂಲಕ ಈ ಕಾನೂನು ಮಾಡಿದ್ದಾರೆ ಎಂದರು.












Click it and Unblock the Notifications