ಉಡುಪಿ: ಕಾಪು ಕ್ಷೇತ್ರದ ಬಿಜೆಪಿ ಶಾಸಕರಿಗೆ ಕೊರೊನಾ ಸೋಂಕು ದೃಢ
ಉಡುಪಿ, ಆಗಸ್ಟ್ 13: ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದ ಬಿಜೆಪಿ ಶಾಸಕ ಲಾಲಾಜಿ ಆರ್. ಮೆಂಡನ್ ಅವರಿಗೆ ಕೊರೊನಾ ಸೋಂಕು ದೃಢಗೊಂಡಿದೆ. ಸ್ವತಃ ಶಾಸಕರೇ ಈ ವಿಷಯವನ್ನು ತಮ್ಮ ಫೇಸ್ಬುಕ್ ಪೇಜ್ ಮೂಲಕ ದೃಢಪಡಿಸಿದ್ದಾರೆ.
Recommended Video
ಕೆಲವು ದಿನಗಳ ಹಿಂದೆ ಶಾಸಕರ ಆಪ್ತ ಕಾರ್ಯದರ್ಶಿಗೆ ಕೊರೊನಾ ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ಲಾಲಾಜಿ ಆರ್. ಮೆಂಡನ್ ಹೋಮ್ ಕ್ವಾರಂಟೈನ್ ನಲ್ಲಿದ್ದರು. ಅವರ ಗಂಟಲದ್ರವ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ತಗುಲಿದ್ದು ದೃಢಗೊಂಡಿದೆ.
ಕೋವಿಡ್ ಪರೀಕ್ಷೆ ಮಾಡಿಸುವ ಮೊದಲು ಇದನ್ನು ಓದಿ!
ಆದರೆ ತಮಗೆ ಯಾವುದೇ ರೋಗ ಲಕ್ಷಣಗಳಿಲ್ಲ, ಹೀಗಾಗಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತೇನೆ. ಕಾಪು ಕ್ಷೇತ್ರದ ಜನತೆ ಅಗತ್ಯ ಕೆಲಸಗಳಿಗಾಗಿ ಕಚೇರಿಯನ್ನು ಸಂಪರ್ಕಿಸಿ. ಶೀಘ್ರ ನಿಮ್ಮ ಸೇವೆ ಮಾಡಲು ಮರಳುತ್ತೇನೆ ಎಂದು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು, ಜನಪ್ರತಿನಿಧಿಗಳಿಗೆ ಮಹಾಮಾರಿ ಕೊರೊನಾ ಸೋಂಕು ತಗುಲುತ್ತಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಸೇರದಂತೆ ಹಲವು ಪ್ರಮುಖ ರಾಜಕಾರಣಿಗಳು ಕೊರೊನಾ ಸೋಂಕಿಗೆ ಒಳಗಾಗಿದ್ದರು. ಈ ಇಬ್ಬರು ನಾಯಕರು ಕೊರೊನಾ ವೈರಸ್ ನಿಂದ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಅದೇ ರೀತಿ ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್ ಶ್ರೀನಿವಾಸ್ ಅವರಿಗೆ ಕೋವಿಡ್ ವರದಿ ನೆಗೆಟಿವ್ ಬಂದಿದೆ. ಅದರೆ ಅವರ ಪುತ್ರ, ಪತ್ನಿ ಮತ್ತು ಪುತ್ರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ತುಮಕೂರು ಜಿಲ್ಲಾ ಆಸ್ಪತ್ರೆ ವೈದ್ಯರ ಸಲಹೆಯಂತೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಫೇಸ್ ಬುಕ್ ಮೂಲಕ ತಿಳಿಸಿದ ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ತಿಳಿಸಿದ್ದಾರೆ.