ಮಠಕ್ಕೆ ಯಾರು ಬರಲಿಲ್ಲ ಅನ್ನೋದು ಮುಖ್ಯವಲ್ಲ: ಡಿಕೆಶಿ
Recommended Video

ಉಡುಪಿ, ಮೇ 2 : ಈ ಬಾರಿ ನಡೆಯುವುದು ಧರ್ಮ ಮತ್ತು ಅಧರ್ಮದ ನಡುವಿನ ಚುನಾವಣೆ. ನಮ್ಮದು ಧರ್ಮವಾದ್ರೆ, ಬಿಜೆಪಿಯವರದ್ದು ಅಧರ್ಮ ಎಂದು ಇಂಧನ ಸಚಿವ ಡಿ.ಕೆ ಶಿವಕುಮಾರ್ ಹೇಳಿದರು.
ಉಡುಪಿಯ ಶ್ರೀಕೃಷ್ಣಮಠಕ್ಕೆ ಇಂದು ಬುಧವಾರ ಪತ್ನಿ ಸಮೇತ ಭೇಟಿ ಕೊಟ್ಟ ಡಿಕೆಶಿ, ಕೃಷ್ಣದರ್ಶನದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದರು. ಶ್ರೀಕೃಷ್ಣ ಒಬ್ಬ ರಾಜಕಾರಣಿ. ರಾಜಕಾರಣಿಯನ್ನು ದೇವರ ಹೆಸರಲ್ಲಿ ಧರ್ಮ ಸ್ಥಾಪನೆಗೆ ಪ್ರತಿಷ್ಠಾಪಿಸಲಾಗಿದೆ. ಮಠಕ್ಕೆ ಯಾರು ಬಂದ್ರು, ಯಾರು ಬರಲಿಲ್ಲ ಅನ್ನೋದು ಮುಖ್ಯವಲ್ಲ ಎಂದು ತಿಳಿಸಿದರು.
ನನಗೆ ಕೃಷ್ಣನ ಮೇಲೆ ಬಹಳ ನಂಬಿಕೆಯಿದೆ. ಪಕ್ಷದ ಪರವಾಗಿ, ವೈಯುಕ್ತಿಕ ವಾಗಿ ಸರ್ಕಾರದ ಪರವಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಕೃಷ್ಣನಲ್ಲಿ ಮುಖ್ಯಮಂತ್ರಿ ಮಾಡುವಂತೆ ಬೇಡಿಕೊಂಡ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಭಕ್ತ-ಭಗವಂತನ ವ್ಯವಹಾರ. ನಮ್ಮಿಬ್ರಿಗೆ ಗೊತ್ತಿದೆ. ಪೂಜ್ಯ ಶ್ರೀಗಳೂ ಆಶೀರ್ವಾದ ಮಾಡಿದ್ದಾರೆ. ನಾನು ಅದನ್ನೆಲ್ಲಾ ಬಹಿರಂಗ ಮಾಡಲ್ಲ ಎಂದರು.

ಮಠಕ್ಕೆ ಬರುವುದು, ಬಿಡುವುದು ಅವರವರ ವೈಯಕ್ತಿಕ ವಿಚಾರ. ಸಿದ್ದರಾಮಯ್ಯ ಮಠಕ್ಕೆ ಬರಲಿಲ್ಲ ಎಂಬುದು ಸತ್ಯ. ಸಿದ್ದರಾಮಯ್ಯ ಮುಜರಾಯಿ ಇಲಾಖೆ ಮುಚ್ಚಲಿಲ್ಲವಲ್ಲ? ಮುಜರಾಯಿ ಇಲಾಖೆಗೆ ಹೆಚ್ಚಿನ ಶಕ್ತಿ ಕೊಟ್ಟಿದ್ದೇವೆ. ಎಲ್ಲಾ ಧರ್ಮಗಳನ್ನು ಉಳಿಸಿಕೊಂಡು ಬಂದಿದ್ದೇವೆ ಎಂದು ಸರ್ಕಾರವನ್ನು ಪ್ರಶಂಸಿಸಿದರು.
ಪ್ರಧಾನಿ ಮೋದಿ ದೇವೇಗೌಡರನ್ನು ಹೊಗಳಿದ ಬಗ್ಗೆ ಕೇಳಿದ್ದಕ್ಕೆ, ಹೊಗಳಲಿ. ಅಮಿತ್ ಶಾ ಕೂಡಾ ಹೊಗಳಲಿ . ದೇವೇಗೌಡರು ಬಿಜೆಪಿ ಜೊತೆಗಿರುವ ಅಂತರ ವ್ಯಕ್ತಪಡಿಸಿದ್ದಾರೆ. ಪುತ್ರ ಕುಮಾರಸ್ವಾಮಿಗೂ ಮಾರ್ಗದರ್ಶನ ಕೊಟ್ಟಿದ್ದಾರೆ. ಇದು ಬಹಿರಂಗದ ಮಾತು. ಅಂತರಂಗದ ವಿಷಯ ಗೌಪ್ಯ. ಯಾವ ಗರ್ಭಗುಡಿಯಲ್ಲಿ ಏನು ಅಡಗಿದ್ಯೋ ನಾನು ಚರ್ಚೆ ಮಾಡಲ್ಲ ಅಂತ ಮಾರ್ಮಿಕವಾಗಿ ನುಡಿದರು.
ಕಾಂಗ್ರೆಸ್ 130 ಕ್ಕೂ ಹೆಚ್ಚು ಸೀಟ್ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಡಿಕೆಶಿ , ಐಟಿ ಕಾಂಗ್ರೆಸ್ ಮೇಲೆ ನಿರಂತರ ದಾಳಿ ನಡೆಸಿದೆ. ಇದಕ್ಕೆ ಬಿಜೆಪಿಯವರೇ ಉತ್ತರ ಕೊಡಬೇಕೆಂದು ಆರೋಪಿಸಿದರು.












Click it and Unblock the Notifications