ಡಿಕೆಶಿಗೆ ದೈವದ ಆಯುಧ ನೀಡಿದ ಉಡುಪಿ ಕಾಂಗ್ರೆಸ್ ಮುಖಂಡರು; ತೀವ್ರ ಆಕ್ರೋಶ
ಉಡುಪಿ, ಜುಲೈ 7: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಉಡುಪಿ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ತುಳುನಾಡಿನ ದೈವಗಳ ಆಯುಧವನ್ನು ಉಡುಗೂರೆಯಾಗಿ ನೀಡಿ ಎಡವಟ್ಟು ಮಾಡಿಕೊಂಡಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಡಿ.ಕೆ. ಶಿವಕುಮಾರ್ ಭೇಟಿ ನೀಡಿದ ವೇಳೆ ಕಾಂಗ್ರೆಸ್ ಮುಖಂಡರು ಬೆಳ್ಳಿಯ ದೈವದ ಕಡ್ಸಲೆ(ಕತ್ತಿ) ನೀಡಿ ಸ್ವಾಗತ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಟೀಕೆ ವ್ಯಕ್ತವಾಗಿದೆ.
ಕರಾವಳಿ ಜನರು ಶ್ರದ್ಧಾ ಭಕ್ತಿಯಿಂದ ಆರಾಧಿಸುವ ದೈವಗಳ ಆಯುಧ ಸಾಮಾನ್ಯವಾಗಿ ದೈವಗಳ ಗುಡಿಯಲ್ಲಿಟ್ಟು ಪೂಜೆ ಮಾಡಲಾಗುತ್ತದೆ. ಆದರೆ ಕಾಂಗ್ರೆಸ್ ಮುಖಂಡರು ಅದೇ ಆಯುಧವನ್ನು ಡಿ.ಕೆ. ಶಿವಕುಮಾರ್ಗೆ ನೀಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಈ ಆಯುಧಕ್ಕೆ ಭಾರೀ ಹಿನ್ನಲೆ ಮತ್ತು ಮಹತ್ವವಿದ್ದು, ದೈವಪಾತ್ರಿಗಳಲ್ಲದೆ ಬೇರೆ ಯಾರೂ ಹಿಡಿಯುವಂತಿಲ್ಲ ಎಂಬ ನಿಯಮ ಕೂಡಾ ಕರಾವಳಿಯಲ್ಲಿದೆ. ಇದರ ಹೊರತಾಗಿಯೂ ಕಾಂಗ್ರೆಸ್ ಮುಖಂಡರು ಈ ಆಯುಧ ನೀಡಿರುವುದು ವಿವಾದವನ್ನು ಹುಟ್ಟುಹಾಕಿದೆ.
ಟ್ರಾಫಿಕ್ ನಿಯಮ ಮುರಿದ ನಲಪಾಡ್; ಮೂಕ ಪ್ರೇಕ್ಷಕರಾದ ಪೊಲೀಸರು
ಯುವ ಕಾಂಗ್ರೆಸ್ ಭಾವೀ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಮತ್ತೆ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದು, ತನ್ನ ಐಷಾರಾಮಿ ಕಾರಿನ ಹಿಂಭಾಗದಲ್ಲಿ ಮಾತ್ರ ನಂಬರ್ ಪ್ಲೇಟ್ ಹಾಕಿದ್ದು, ಮುಂಭಾಗದಲ್ಲಿ ನಂಬರ್ ಪ್ಲೇಟ್ ಹಾಕದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೊತೆ ಕರಾವಳಿ ಪ್ರದೇಶದಲ್ಲಿ ಸುತ್ತಾಡುತ್ತಿದ್ದಾರೆ.

ಪೆಟ್ರೋಲ್ ದರ ಏರಿಕೆ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಕಾಂಗ್ರೆಸ್ ಸೈಕಲ್ ಜಾಥಾದಲ್ಲಿ ಪಾಲ್ಗೊಳ್ಳಲು ಬಂದ ನಲಪಾಡ್, ತಮ್ಮ ಕಾರಿನಲ್ಲಿ ನಂಬರ್ ಪ್ಲೇಟ್ ಹಾಕದೆ ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ.
ರಾಜಕೀಯ ಮುಖಂಡ ಎಂಬ ಕಾರಣಕ್ಕಾಗಿ ಪೊಲೀಸರೂ ಸುಮ್ಮನಿದ್ದು, ಆಡಳಿತ ವ್ಯವಸ್ಥೆಯನ್ನೇ ಅಣಕಿಸಿದೆ. "ಜನಸಾಮಾನ್ಯರ ವಾಹನಗಳಲ್ಲಿ ನಂಬರ್ ಪ್ಲೇಟ್ ಸರಿಯಿಲ್ಲದ ಮಾತ್ರಕ್ಕೆ ದಂಡ ಹಾಕುವ ಪೊಲೀಸರಿಗೆ ನಲಪಾಡ್ ಕಾರಿನಲ್ಲಿ ನಂಬರ್ ಪ್ಲೇಟ್ ಇಲ್ಲದಿರುವುದು ಕಾಣಿಸುವುದಿಲ್ಲವೇ,'' ಎಂದು ಜನ ಟೀಕಿಸಿದ್ದಾರೆ. ಅಲ್ಲದೇ ಐಷಾರಾಮಿ ಕಾರಿನಲ್ಲಿ ಬಂದು ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಸೈಕಲ್ ತುಳಿದ ನಲಪಾಡ್ ಬಗ್ಗೆಯೂ ವ್ಯಂಗ್ಯ ವ್ಯಕ್ತವಾಗಿದೆ.












Click it and Unblock the Notifications