ನಾನು ಈ ನಾಡಿನ ಸೇವಕ; ಕಟೌಟ್, ಹೋರ್ಡಿಂಗ್ಸ್ ಬೇಡ: ಭಾವುಕರಾದ ಸಿಎಂ ಬೊಮ್ಮಾಯಿ
ಉಡುಪಿ, ಆಗಸ್ಟ್ 13: ಸಿಎಂ ಬಸವರಾಜ ಬೊಮ್ಮಾಯಿ ಸದ್ಯ ಕರಾವಳಿ ಜಿಲ್ಲೆಗಳ ಪ್ರವಾಸದಲ್ಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಪ್ರವಾಸ ಮುಗಿಸಿ ಉಡುಪಿಗೆ ತೆರಳಿದ ಸಿಎಂ, ಅಲ್ಲಿ ಉಡುಪಿಯ ಬಾಂಧವ್ಯದ ಬಗ್ಗೆ ಮಾತನಾಡಿ ಭಾವುಕರಾಗಿದ್ದಾರೆ.
"ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ, ಆ ಸಂದರ್ಭದಲ್ಲಿ ಉಡುಪಿಗೆ ಬಂದಿವುದು ಬಹಳ ಕಡಿಮೆ." ಆದರೆ ಈಗ ಮುಖ್ಯಮಂತ್ರಿಯಾಗಿ ಉಡುಪಿಗೆ ಬಂದ ಬೊಮ್ಮಾಯಿ ತಾನು ಉಸ್ತುವಾರಿ ಸಚಿವನಾಗಿದ್ದಾಗ ಉಡುಪಿಗೆ ಬರದೇ ಇದ್ದುದರ ಬಗ್ಗೆ, ಉಡುಪಿಯ ಶ್ರೀಕೃಷ್ಣನ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
"ಉಡುಪಿ ಕೃಷ್ಣನನ್ನು ಹೊರತುಪಡಿಸಿದರೆ ಈ ಭಾಗದ ಜೊತೆ ನನಗೆ ಯಾವುದೇ ಸಂಬಂಧವಿರಲಿಲ್ಲ. ಯಡಿಯೂರಪ್ಪ ಉಡುಪಿಗೆ ನನ್ನನ್ನು ಉಸ್ತುವಾರಿ ಮಾಡಿದ್ದರು. ಉಡುಪಿಗೆ ಯಾಕೆ ನನ್ನನ್ನು ಉಸ್ತುವಾರಿ ಮಾಡಿದ್ದರೋ ಗೊತ್ತಿಲ್ಲ. ಉಡುಪಿಯ ಜನರು ಹೃದಯ ವೈಶಾಲ್ಯ ಉಳ್ಳವರು. ತಮ್ಮ ಕಷ್ಟಕ್ಕೆ ಪರಿಹಾರ ಕೇಳುತ್ತಾರೆ ವಿನಃ ವೈಯಕ್ತಿಕವಾಗಿ ಏನೂ ಕೇಳುವುದಿಲ್ಲ. ಉಡುಪಿಯ ಉಸ್ತುವಾರಿಯಿಂದ ಮುಕ್ತಗೊಳಿಸಿ ಎಂದು ಯಡಿಯೂರಪ್ಪರ ಬಳಿ ಸದಾ ಕೇಳುತ್ತಿದ್ದೆ. ಆದರೆ ಸಿಎಂ ಆಗುವ ಮೂಲಕ ಉಸ್ತುವಾರಿಯನ್ನು ಮುಕ್ತನಾಗುತ್ತೇನೆ ಎಂದು ಭಾವಿಸಿರಲಿಲ್ಲ. ಉಡುಪಿಯ ಜನತೆ ಸದಾ ನನ್ನ ಹೃದಯದಲ್ಲಿ ಇರುತ್ತಾರೆ," ಎಂದು ಸಿಎಂ ಬೊಮ್ಮಾಯಿ ಭಾವುಕರಾಗಿ ಮಾತನಾಡಿದ್ದಾರೆ.

ನಾನೊಬ್ಬ ಶ್ರೀಕೃಷ್ಣನ ಭಕ್ತ
ಉಡುಪಿಯ ಜನರ ಬಗ್ಗೆ ಮಾತನಾಡಿದ ಬಳಿಕ ಶ್ರೀಕೃಷ್ಣ ಮಠಕ್ಕೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ, ಉಡುಪಿ ಶ್ರೀಕೃಷ್ಣನ ದರ್ಶನ ಪಡೆದಿದ್ದಾರೆ. ದರ್ಶನದ ಬಳಿಕ ಪರ್ಯಾಯ ಶ್ರೀಗಳ ಆಶೀರ್ವಾದ ಪಡೆದ ಸಿಎಂ, "ನಾನೊಬ್ಬ ಶ್ರೀಕೃಷ್ಣನ ಭಕ್ತ, ಮಠಕ್ಕೆಂದೇ ಉಡುಪಿಗೆ ಬರುತ್ತಿದ್ದೆ. ಈಗ ಮುಖ್ಯಮಂತ್ರಿಯಾಗಿ ಬಂದು ಕೃಷ್ಣನ ದರ್ಶನದ ಅನುಗ್ರಹವಾಗಿದೆ. ಇದಕ್ಕಿಂತ ಸೌಭಾಗ್ಯ ಬೇರೇನಿದೆ," ಎಂದು ಕೃಷ್ಣನ ಮೇಲಿನ ತನ್ನ ಅಪರಿಮಿತ ಭಕ್ತಿಯನ್ನು ತೋರಿಸಿದ್ದಾರೆ.

ಉಡುಪಿ ಜನರ 24 ವರ್ಷಗಳ ಬೇಡಿಕೆಗೆ ಅಡಿಗಲ್ಲು
ಇನ್ನು ಸಿಎಂ ಕರಾವಳಿ ಪ್ರವಾಸ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಅಲ್ಲಲ್ಲಿ ಕಟೌಟ್, ಹೋರ್ಡಿಂಗ್ಸ್ ಹಾಕಿದ್ದರು. ಈ ಬಗ್ಗೆ ಪಕ್ಷಕ್ಕೆ ಮನವಿ ಮಾಡಿದ ಸಿಎಂ, "ಯಾರೂ ಶುಭಕೋರುವ ಕಟೌಟ್, ಹೋರ್ಡಿಂಗ್ಸ್ ಹಾಕಬೇಡಿ. ನಾನು ಮುಖ್ಯಮಂತ್ರಿಯಾದರೂ ನಾಡಿನ ಸೇವಕ. ನಿಮ್ಮ ಈ ಕಟೌಟ್ ನನ್ನ ಈ ಭಾವನೆಯನ್ನು ಕಡಿಮೆಯಾಗುವಂತೆ ಮಾಡಬಾರದು," ಅಂತಾ ಪಕ್ಷದ ಕಾರ್ಯಕರ್ತರಿಗೆ ಸಿಎಂ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಇನ್ನು ಸಿಎಂ ಬಸವರಾಜ ಬೊಮ್ಮಾಯಿ ಉಡುಪಿಯಲ್ಲಿ ಜನರ ಮಹಾತ್ವಾಕಾಂಕ್ಷೆಯ ಯೋಜನೆಯೊಂದಕ್ಕೆ ಅಡಿಗಲ್ಲು ಹಾಕಿದ್ದಾರೆ. ಉಡುಪಿ ಜನರ 24 ವರ್ಷಗಳ ಬೇಡಿಕೆಗೆ ಈ ಮೂಲಕ ಜೀವ ತುಂಬಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬೊಮ್ಮಾಯಿ ಅವರೇ ಸಿಎಂ ಆಗಿ ಬಂದು, ಜಿಲ್ಲಾ ಆಸ್ಪತ್ರೆಗೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.

ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸುವ ಭರವಸೆ
ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರ್ಪಟ್ಟು ಉಡುಪಿ ಜಿಲ್ಲೆಯಾಗಿ 24 ವರ್ಷ ಆಗಿದೆ. ಆರ್ಥಿಕ, ಪ್ರವಾಸೋದ್ಯಮ, ಶೈಕ್ಷಣಿಕ, ಸಾಂಸ್ಕೃತಿಕವಾಗಿಯೂ ಜಿಲ್ಲೆಯು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ. ಇಷ್ಟೆಲ್ಲಾ ಇದ್ದರೂ ಜಿಲ್ಲೆಗೆ ಒಂದು ಉತ್ತಮ ಗುಣಮಟ್ಟದ ಜಿಲ್ಲಾಸ್ಪತ್ರೆ ಮಾತ್ರ ಇರಲಿಲ್ಲ. ಉಡುಪಿಯ ತಾಲೂಕು ಆಸ್ಪತ್ರೆಯ ಬೋರ್ಡ್ ಬದಲಾವಣೆ ಮಾಡಿ ಜಿಲ್ಲಾಸ್ಪತ್ರೆ ಅಂತ ಬೋರ್ಡ್ ಹಾಕಲಾಗಿತ್ತು. ಹೊರತಾಗಿ ಅದೇ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿತ್ತು. ಸಾಕಷ್ಟು ಸಲ ಸಚಿವರು ಬಂದು ಜಾಗ ನೋಡಿದ್ದರೇ ಹೊರತು, ಜಿಲ್ಲಾ ಆಸ್ಪತ್ರೆಗೆ ಕಾಲ ಕೂಡಿ ಬಂದಿರಲಿಲ್ಲ. ಸದ್ಯ ಎಲ್ಲ ಸಮಸ್ಯೆ ಬಗೆ ಹರಿದು ಜಿಲ್ಲಾ ಆಸ್ಪತ್ರೆ ಭಾಗ್ಯ ಜನರಿಗೆ ದೊರಕಿದೆ. ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಬಂದು, ಜಿಲ್ಲಾಸ್ಪತ್ರೆಗೆ ಗುದ್ದಲಿ ಪೂಜೆ ನೆರವೇರಿಸಿ ಶುಭ ಹಾರೈಸಿ, ಆಸ್ಪತ್ರೆ ಜೊತೆಗೆ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸುವ ಭರವಸೆ ಕೂಡ ನೀಡಿದ್ದಾರೆ.
Recommended Video

ಕೃಷ್ಣನೂರಿನ ಭೇಟಿಯನ್ನು ಅವಿಸ್ಮರಣೀಯಗೊಳಿಸಿದ್ದಾರೆ
24 ವರ್ಷದ ಜಿಲ್ಲಾ ಆಸ್ಪತ್ರೆ ಕನಸು ಈಡೇರಿದ್ದು, ಉಡುಪಿ ಜನರಿಗೂ ಬಹಳ ಖುಷಿ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಉಡುಪಿ ಬಸವರಾಜ ಬೊಮ್ಮಾಯಿ, ಜಿಲ್ಲೆಯ ಎಲ್ಲ ಸಮಸ್ಯೆ ಈಡೇರಿಸುತ್ತಾರೆ ಅಂತ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೊಯಿಲಾಡಿ ಸುರೇಶ್ ನಾಯಕ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಸಿಎಂ ಉಡುಪಿ ಭೇಟಿಯಿಂದ ಉಡುಪಿಯ 24 ವರ್ಷದ ಕನಸು ನನಸಾಗಿದೆ. ಆಸ್ಪತ್ರೆಗೆ ಗುದ್ದಲಿ ಪೂಜೆಯೂ ಆಗಿದ್ದೂ, ಮುಂದೆ ಆದಷ್ಟು ಬೇಗ ಜಿಲ್ಲಾ ಆಸ್ಪತ್ರೆ ಕಾಮಗಾರಿ ನಡೆದು, ಜನರ ಸೇವೆಗೆ ಮುಕ್ತವಾಗಲಿ ಅನ್ನುವುದು ಜನರ ನಂಬಿಕೆಯಾಗಿದೆ. ಇತ್ತ ಸಿಎಂ ಕೂಡಾ ಉಡುಪಿಯಲ್ಲೇ ವಾಸ್ತವ್ಯ ಮಾಡಿ, ಕೃಷ್ಣನೂರಿನ ಭೇಟಿಯನ್ನು ಅವಿಸ್ಮರಣೀಯಗೊಳಿಸಿದ್ದಾರೆ.












Click it and Unblock the Notifications